ಕಲಬುರ್ಗಿ: ‘ರಾಜ್ಯ ಸರ್ಕಾರ ಉರ್ದು ಅಕಾಡೆಮಿ ಬಗ್ಗೆ ನಿರ್ಲಕ್ಷ್ಯ ತೋರಿತ್ತಿದೆ. ಇದೂವರೆಗೂ ಅಧ್ಯಕ್ಷರನ್ನು ನೇಮಕ ಮಾಡದ ಕಾರಣ ಕಾರ್ಯಚಟುವಟಿಕೆಗಳಿಗೆ ತೀವ್ರ ಹಿನ್ನಡೆ ಆಗಿದೆ’ ಎಂದುಹೈದರಾಬಾದ್ ಕರ್ನಾಟಕ ಸೋಷಿಯಲ್ ಜಾಗೃತಿ ಫೋರಂ ಅಧ್ಯಕ್ಷ ಸಾಜಿದ್ಅಲಿ ರಂಜೋಳ್ವಿ ಅಸಮಧಾನ ವ್ಯಕ್ತಪಡಿಸಿದರು.
‘ರಾಜ್ಯ ಎಲ್ಲ ಅಕಾಡೆಮಿಗಳಿಗೆ ಅಧ್ಯಕ್ಷ, ಸದಸ್ಯರನ್ನು ನೇಮಕ ಮಾಡಿ ಕಾರ್ಯಚಟುವಟಿಕೆಗಳಿಗೆ ಚಾಲನೆ ನೀಡಲಾಗಿದೆ. ಆದರೆ, ಉರ್ದು ಅಕಾಡೆಮಿಯನ್ನು ಮಾತ್ರ ನಿರ್ಲಕ್ಷ್ಯ ಮಾಡಲಾಗಿದೆ.ಕೂಡಲೇ ನೂತನ ಅಧ್ಯಕ್ಷರನ್ನು ಹಾಗೂ ಸದಸ್ಯರನ್ನು ನೇಮಕ ಮಾಡುವ ಪ್ರಕ್ರಿಯೆ ಮುಗಿಸಬೇಕು’ ಎಂದು ಅವರು ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.
‘ಈ ಕುರಿತು ಹಲವು ಸಲ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಅಲ್ಲದೇ ಈಚೆಗೆ ನಗರಕ್ಕೆ ಬಂದಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೂ ಖುದ್ದು ಮನವಿ ಸಲ್ಲಿಸಿದ್ದೇವೆ. ಹೋರಾಟ ನಡೆಸಿದ್ದೇವೆ. ಆದರೂ ನಮ್ಮ ಬೇಡಿಕೆ ಈಡೇರಿಸಿಲ್ಲ’ ಎಂದು ದೂರಿದರು.
‘ಉರ್ದು ಭಾಷೆ ತನ್ನದೇ ಆದ ಸಾಂಸ್ಕೃತಿಕ, ಸಾಹಿತ್ಯಕ ಸೊಗಡು ಹೊಂದಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಎರಡನೇ ಭಾಷೆಯಾಗಿ ಜನರು ಉರ್ದು ಬಳುತ್ತಿದ್ದಾರೆ. ಹೀಗಿರುವಾಗ ಏಕೆ ಆದ್ಯತೆ ನೀಡುತ್ತಿಲ್ಲ’ ಎಂದೂ ಪ್ರಶ್ನಿಸಿದರು.
ಫೋರಂ ಪದಾಧಿಕಾರಿಗಳಾದ ಅಹ್ಮದ ಜಾವೀದ್, ಫೈಮುದ್ದೀನ್ ಫಿರಜಾದ, ಸೈಯದ್ ತೌಸೀಪ್ ದೇಸಾಯಿ, ಡಾ.ಮಾಜಿದ್ ಡಾಗಿ, ಡಾ.ಚಂದಹುಸೇನ ಅಕ್ಬರ್, ಸಿರಾಜ್ ತಿರಂದಾಜ್, ವಹಿದ್ ಅಂಜುಮ್, ಶಕೀಲ್ ಸರಡಗಿಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.