ADVERTISEMENT

ಕ್ಷೌರ ವೃತ್ತಿಗೆ ಅವಹೇಳನ; ಆಕ್ರೋಶ

ಸಚಿವ ಪ್ರಭು ಚವಾಣ್‌ ರಾಜಿನಾಮೆಗೆ ಆಗ್ರಹ; ಹಡ‍ಪದ ಸಮಾಜದಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2021, 2:30 IST
Last Updated 4 ಏಪ್ರಿಲ್ 2021, 2:30 IST
ಕ್ಷೌರ ವೃತ್ತಿಯ ಬಗ್ಗೆ ಅವಮಾನ ಮಾಡಿದ ಸಚಿವ ಪ್ರಭು ಚೌವಾಣ್‌ ಅವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಕಲಬುರ್ಗಿ ಜಿಲ್ಲಾಧಿಕಾರಿ ಕಚೇರಿಯ ಎದುರು ಶನಿವಾರ ಜಿಲ್ಲಾ ಸವಿತಾ ಸಮಾಜದಿಂದ ಪ್ರತಿಭಟನೆ ನಡೆಸಲಾಯಿತು
ಕ್ಷೌರ ವೃತ್ತಿಯ ಬಗ್ಗೆ ಅವಮಾನ ಮಾಡಿದ ಸಚಿವ ಪ್ರಭು ಚೌವಾಣ್‌ ಅವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಕಲಬುರ್ಗಿ ಜಿಲ್ಲಾಧಿಕಾರಿ ಕಚೇರಿಯ ಎದುರು ಶನಿವಾರ ಜಿಲ್ಲಾ ಸವಿತಾ ಸಮಾಜದಿಂದ ಪ್ರತಿಭಟನೆ ನಡೆಸಲಾಯಿತು   

ಕಲಬುರ್ಗಿ: ಬಸವಕಲ್ಯಾಣ ಉಪಚುನಾವಣೆಯ ಪ್ರಚಾರ ಸಭೆಯಲ್ಲಿ ಕ್ಷೌರ ವೃತ್ತಿಯ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಸಚಿವ ಪ್ರಭು ಚವಾಣ್‌ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಸವಿತಾ ಸಮಾಜದ ಜಿಲ್ಲಾ ಘಟಕದ ಗೌರವಾಧ್ಯಕ್ಷ ಅಂಬರೇಶ ಮಂಗಲಗಿ ಒತ್ತಾಯಿಸಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವರು ಕೂಡಲೇ ಸಾರ್ವಜನಿಕ ಸಭೆ ಕರೆದು ಕ್ಷಮೆಯಾಚಿಸಬೇಕು. ಒಂದು ವೇಳೆ ಕ್ಷಮೆ ಕೇಳದಿದ್ದರೆ ರಾಜ್ಯದಾದ್ಯಂತ ಮೆನ್ಸ್ ಪಾರ್ಲರ್, ಸ್ಪಾ, ಕ್ಷೌರದಂಗಡಿಗಳಲ್ಲಿ ಅವರಿಗೆ ಕ್ಷೌರ ಮಾಡದಂತೆ ನಿರ್ಬಂಧ ಹೇರಲಾಗುವುದು ಎಂದು ಅವರು ಹೇಳಿದರು.

ಜವಾಬ್ದಾರಿಯುತ ಸ್ಥಾನದಲ್ಲಿರುವವರು ಒಂದು ವೃತ್ತಿ ಬಗ್ಗೆ ಅಪಮಾನ ಮಾಡುವಂತಹ ಹೇಳಿಕೆ ನೀಡುವುದು ಸರಿಯಲ್ಲ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕೂಡಲೇ ಪ್ರಭು ಚವ್ಹಾಣ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು. ಸಚಿವರು ಬಹಿರಂಗವಾಗಿ ಕ್ಷಮೆಯಾಚಿಸುವವರೆಗೂ ಸವಿತಾ ಸಮಾಜದ ವತಿಯಿಂದ ಹೋರಾಟ ನಡೆಸಲಾಗುವುದು ಎಂದು ಅವರು ತಿಳಿಸಿದರು.

ADVERTISEMENT

ಸವಿತಾ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಸುಭಾಷ ಬಾದಾಮಿ, ಪ್ರಧಾನ ಕಾರ್ಯದರ್ಶಿ ಶರಣಬಸಪ್ಪ ಸೂರ್ಯವಂಶಿ, ಉಪಾಧ್ಯಕ್ಷ ಪ್ರಭಾಕರ ಪೆದ್ದರಪೇಟ, ಖಜಾಂಚಿ ಮದನ ಗದ್ವಾಲ್, ಸದಸ್ಯ ರಾಮು ನಾವಲಗಿ ಇದ್ದರು.

ಅಲ್ಲಿಂದ ಜಿಲ್ಲಾಧಿಕಾರಿ ಕಚೇರಿಗೆ ಬಂದ ಸಮಾಜದ ಮುಖಂಡರು ಕೆಲಕಾಲ ಪ್ರತಿಭಟನೆ ನಡೆಸಿದರು. ಜಿಲ್ಲಾಧಿಕಾರಿ ಮುಖಾಂತರ ರಾಜ್ಯಪಾಲರಿಗೆ ಮನವಿ ಕೂಡ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.