ವಾಡಿ: ಸೊಲ್ಲಾಪುರ ವಿಭಾಗದಲ್ಲಿಯೇ ವಾಡಿ ರೈಲು ನಿಲ್ದಾಣ ರೈಲ್ವೆ ಇಲಾಖೆಗೆ ಅತಿ ಹೆಚ್ಚು ವರಮಾನ ತಂದು ಕೊಡುತ್ತದೆ. ಆದರೆ ಸ್ಥಳೀಯ ರೈಲು ಪ್ರಯಾಣಿಕರಿಗೆ ಸೌಲಭ್ಯಗಳು ನೀಡದೇ ಅನ್ಯಾಯ ಮಾಡುತ್ತಿದ್ದೀರಿ. ಕೂಡಲೇ ರೈಲು ನಿಲ್ದಾಣವನ್ನು ಪ್ರಯಾಣಿಕ ಸ್ನೇಹಿಯನ್ನಾಗಿ ಮಾರ್ಪಡಿಸಿ ಎಂದು ಸಾರ್ವಜನಿಕರು ಹಾಗೂ ವಿವಿಧ ಪಕ್ಷಗಳು ರೈಲ್ವೆ ಅಧಿಕಾರಿಗಳನ್ನು ಆಗ್ರಹಿಸಿದ ಘಟನೆ ಗುರುವಾರ ಜರುಗಿತು.
ಮುಂಬೈ ಮಧ್ಯ ವಲಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ನರೇಶ ಲಾಲವಾನಿ ಹಾಗೂ ಇನ್ನಿತರ ಅಧಿಕಾರಿಗಳು ಗುರು ವಾರ ರೈಲು ನಿಲ್ದಾಣಕ್ಕೆ ಭೇಟಿ ನೀಡಿ ಪರಿಶೀಲನೆ ವೇಳೆ ನಿಲ್ದಾಣಕ್ಕೆ ಆಗಮಿಸಿದ ಸಾರ್ವಜನಿಕರು
ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿದರು.
ಎಸ್ಯುಸಿಐ ಕಮ್ಯುನಿಸ್ಟ್ ಪಕ್ಷದ ಸ್ಥಳೀಯ ಮುಖಂಡರು ಮಾತನಾಡಿ, ನಿಲ್ದಾಣದೊಳಗೆ ಪ್ರವೇಶಿಸಲು ದ್ವಾರ ಬಾಗಿಲು ಇಲ್ಲದ ಕಾರಣ ಮೆಟ್ಟಿಲು ಹತ್ತಿ ಒಳಬರಬೇಕಾಗಿದೆ. ಎಸ್ಕ್ಲೇ ಟರ್ ಸೌಲಭ್ಯ ಇಲ್ಲದ ಕಾರಣ ವೃದ್ಧರು, ರೋಗಿಗಳು, ಮಹಿಳೆ ಯರು ಹಾಗೂ ಮಕ್ಕಳು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಬೀಗ ಹಾಕಿದ ಸ್ಥಿತಿಯ ಲ್ಲಿರುವ ಶೌಚಾಲಯ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದ ಕಾರಣ ಪ್ರಯಾಣಿಕರು ದುಬಾರಿ ದರದಲ್ಲಿ ಖಾಸಗಿಯಾಗಿ ನೀರು ಖರೀದಿಸುತ್ತಿದ್ದಾರೆ. ರೈಲುಗಳ ತೀವ್ರ ಕೊರತೆಯಿಂದ ಕಲಬುರಗಿಯಿಂದ ಬೆಂಗಳೂರಿಗೆ ತೆರಳುವ ಪ್ರಯಾಣಿಕರು ನಿತ್ಯ ನರಕದ ಸ್ಥಿತಿ ಅನುಭವಿಸುತ್ತಿದ್ದಾರೆ. ಕೂಡಲೇ ಅಗತ್ಯಕ್ಕೆ ಅನುಸಾರವಾಗಿ ಹೊಸ ರೈಲುಗಳನ್ನು ಆರಂಭಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸ್ಥಳೀಯ ರೈಲ್ವೆ ನಿಲ್ದಾಣದ ಪ್ರಬಂಧಕ ಜೆ.ಎನ್. ಫರಿದಾ ಸಹಿತ ಹಲವರಿದ್ದರು.
ವಾಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಯೆಯ್ಯದ ಮಹೆಮೂದ್ ಸಾಹೇಬ್, ಮುಖಂಡರಾದ ನಾಗೇಂದ್ರ ಜೈ ಗಂಗಾ, ಬಾಬುಮಿಯ್ಯ, ಫೀರೋಜ್ ಖಾನ್, ಶಿವಪ್ಪ ಮುಂಡರಗಿ, ಬಸವರಾಜ್ ಮುತ್ತಗಿ ಶಂಕರ್ ಕಲ್ಬುರ್ಗಿ, ರಿಯಾಜ್, ಎಸ್ಯುಸಿಐ ಶಹಾಬಾದ್ ಸಮಿತಿ ಕಾರ್ಯದರ್ಶಿ ರಾಘವೇಂದ್ರ ಎಂ. ಜಿ, ಸ್ಥಳೀಯ ಸಮಿತಿ ಕಾರ್ಯದರ್ಶಿ ಆರ್.ಕೆ. ವೀರಭದ್ರಪ್ಪ, ಸದಸ್ಯರಾದ ಗೌತಮ ಪರತುರಕರ, ಶರಣು ಹೆರೂರು, ವಿಠ್ಠಲ ರಾಠೋಡ, ಶರಣು ದೋಶೆಟ್ಟಿ, ಗೋವಿಂದ ಯಳವಾರ ಸೇರಿ ಹಲವರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.