
ರಾಜಕುಮಾರ ಪಾಟೀಲ
ಕಲಬುರಗಿ: ‘ಕಳೆದ ಸಾವಿರ ದಿನಗಳಲ್ಲಿ ಕಲಬುರಗಿ ಅಭಿವೃದ್ಧಿಯಲ್ಲಿ 20 ವರ್ಷಗಳ ಹಿಂದೆ ಹೋಗಿದೆ. ಇದಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಅವರ ಕೊಡುಗೆ ಅಪಾರವಾಗಿದೆ’ ಎಂದು ಮಾಜಿ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ವ್ಯಂಗ್ಯವಾಡಿದ್ದಾರೆ.
‘ಮೂರು ತಿಂಗಳಿಗೊಮ್ಮೆ ನಡೆಸಬೇಕಿದ್ದ ಕೆಡಿಪಿ ಸಭೆ ಸಾವಿರ ದಿನಗಳಾದರೂ ನಡೆಸಲಿಕ್ಕಾಗದಿರುವುದು ಆಡಳಿತ ಕಾರ್ಯವೈಖರಿಗೆ ಹಿಡಿದ ಕನ್ನಡಿ. ದಿನ ಬೆಳಗಾದರೆ ಆರ್ಎಸ್ಎಸ್ ಟೀಕೆ ಮಾಡುವುದು ಹಾಗೂ ಕೇಂದ್ರದ ವಿರುದ್ಧ ಬರೀ ಟೀಕೆ ಮಾಡುವುದನ್ನು ಬಿಟ್ಟು ಕಲಬುರಗಿ ಜಿಲ್ಲೆಯತ್ತ ನೋಡಿದ್ದರೆ ಕನಿಷ್ಠ ಐದಾರು ಕೆಡಿಪಿ ಸಭೆಗಳನ್ನು ನಡೆಸಿ ಅಭಿವೃದ್ಧಿ ನಿಟ್ಟಿನಲ್ಲಿ ಬೆಳಕು ಚೆಲ್ಲಬಹುದಿತ್ತು’ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
‘ಕಲಬುರಗಿ ಮಹಾನಗರದಲ್ಲಿ ಹದಗೆಟ್ಟ ರಸ್ತೆಗಳಿಂದ ಜನ ಹಿಡಿ ಶಾಪ ಹಾಕುತ್ತಿದ್ದಾರೆ. ಇದೇ ಕಾರಣಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಕಲಬುರಗಿ ಕಡೆ ಕಾಲಿಡುತ್ತಿಲ್ಲ. ಸಿಎಂ ಬಂದಾಗೊಮ್ಮೆ ಹಾಗೂ ರಾಷ್ಟ್ರೀಯ ದಿನಾಚರಣೆಗಳಲ್ಲಿ ರಾಷ್ಟ್ರ ಧ್ವಜಾರೋಹಣೆ ನೆರವೇರಿಸಲು ಬಂದಿರುವುದನ್ನು ಬಿಟ್ಟರೆ ಉಳಿದ ಸಮಯದಲ್ಲಿ ಬಂದಿರುವ ಉದಾಹರಣೆಗಳೇ ಇಲ್ಲ. ಕೇಳಿದರೆ ಬಾಯಿಗೆ ಬಂದಂತೆ ಟೀಕೆ ಮಾಡುವುದನ್ನು ರೂಢಿ ಮಾಡಿಕೊಂಡಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.