ADVERTISEMENT

ಏಕವ್ಯಕ್ತಿ ಮಹಿಳಾ ನಾಟಕೋತ್ಸವ 3ರಿಂದ

ಕಲಬುರಗಿ ರಂಗಾಯಣ ನಿರ್ದೇಶಕಿ ಸುಜಾತಾ ಜಂಗಮಶೆಟ್ಟಿ ಮಾಹಿತಿ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2024, 3:20 IST
Last Updated 1 ಸೆಪ್ಟೆಂಬರ್ 2024, 3:20 IST
ಸುಜಾತಾ ಜಂಗಮಶೆಟ್ಟಿ
ಸುಜಾತಾ ಜಂಗಮಶೆಟ್ಟಿ   

ಕಲಬುರಗಿ: ಕಲಬುರಗಿ ರಂಗಾಯಣದಿಂದ ಸೆಪ್ಟೆಂಬರ್ 3ರಿಂದ 7ರವರೆಗೆ ಪ್ರತಿದಿನ ಸಂಜೆ 6ಕ್ಕೆ ಏಕವ್ಯಕ್ತಿ ಮಹಿಳಾ ನಾಟಕೋತ್ಸವವನ್ನು ಡಾ. ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಆಯೋಜಿಸಲಾಗಿದೆ ಎಂದು ರಂಗಾಯಣ ನಿರ್ದೇಶಕಿ ಸುಜಾತಾ ಜಂಗಮಶೆಟ್ಟಿ ತಿಳಿಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕವಯಿತ್ರಿ ಹಾಗೂ ರಂಗಕರ್ಮಿ ಎಚ್‌.ಎಲ್‌.ಪುಷ್ಪಾ ನಾಟಕೋತ್ಸವ ಉದ್ಘಾಟಿಸುವರು. ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯೆ ಚಂದ್ರಕಲಾ ಬಿದರಿ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಸಾಹಿತಿ ಅಮೃತಾ ಕಟಕೆ, ಶಾಂತಾ ಕುಲಕರ್ಣಿ, ಡಿಂಗ್ರಿ ನರೇಶ್ ಭಾಗವಹಿಸುವರು. ಅಂದು ಶೃತಿ ಆದರ್ಶ ಅವರು ಪ್ರಸ್ತುತಪಡಿಸುವ ‘ನಿರಾಕರಣೆ‘ ನಾಟಕ ಪ್ರದರ್ಶನಗೊಳ್ಳಲಿದೆ. ಸೆ. 4ರಂದು ಶಶಿಕಲಾ ಮೈಸೂರು ಪ್ರಸ್ತುತಪಡಿಸುವ ಕಸ್ತೂರಬಾ ನಾಟಕ ಪ್ರದರ್ಶನಗೊಳ್ಳಲಿದೆ. ಮುಖ್ಯ ಅತಿಥಿಗಳಾಗಿ ಬಳ್ಳಾರಿಯ ವೀಣಾ ಅದೋನಿ ಭಾಗವಹಿಸುವರು. 5ರಂದು ಭಾಗ್ಯಶ್ರೀ ಪಾಳಾ ಪ್ರಸ್ತುತಪಡಿಸುವ ಕೌದಿ ನಾಟಕ ಪ್ರದರ್ಶನಗೊಳ್ಳಲಿದ್ದು, ಬೀದರ್‌ನ ಸಾಹಿತಿ ಪಾರ್ವತಿ ಸೋನಾರೆ ಮುಖ್ಯ ಅತಿಥಿಯಾಗಲಿದ್ದಾರೆ’ ಎಂದರು.

6ರಂದು ಉಮಾಶ್ರೀ ಮಧು ಮಳವಳ್ಳಿ ಪ್ರಸ್ತುತಪಡಿಸುವ ‘ಅನುರಕ್ತೆ’ ನಾಟಕ ಪ್ರದರ್ಶನಗೊಳ್ಳಲಿದ್ದು, ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಬಸವರಾಜ ಹೂಗಾರ, ಕೊಪ್ಪಳದ ರಂಗಕರ್ಮಿ ಶೀಲಾ ಹಾಲ್ಕುರಿಕೆ ಭಾಗವಹಿಸುವರು. 7ರಂದು ಸಮಾರೋಪ ಸಮಾರಂಭ ನಡೆಯಲಿದ್ದು, ಹಿರಿಯ ಲೇಖಕಿ ಮೀನಾಕ್ಷಿ ಬಾಳಿ ಸಮಾರೋಪ ನುಡಿಗಳನ್ನಾಡುವರು. ಮುಖ್ಯ ಅತಿಥಿಗಳಾಗಿ ಹೊಸಪೇಟೆಯ ರಂಗಕರ್ಮಿ, ಶಿಗ್ಗಾಂವಿ ಜಾನಪದ ವಿ.ವಿ. ಸಿಂಡಿಕೇಟ್ ಸದಸ್ಯೆ ಸಹನಾ ಪಿಂಜಾರ, ಕಲಬುರಗಿಯ ರಂಗಕರ್ಮಿ ಶಾಂತಾ ಭೀಮಸೇನರಾವ್ ಭಾಗವಹಿಸುವರು. ಅಂದು ಅಹಲ್ಯಾ ಬಲ್ಲಾಳ ಪ್ರಸ್ತುತಪಡಿಸುವ ‘ಅವಳ ಕಾಗದ’ ನಾಟಕ ಪ್ರದರ್ಶನಗೊಳ್ಳಲಿದೆ’ ಎಂದು ಸುಜಾತಾ ಮಾಹಿತಿ ನೀಡಿದರು.

ADVERTISEMENT

ಕಲಬುರಗಿ ರಂಗಾಯಣವನ್ನು ಕಲ್ಯಾಣ ಕರ್ನಾಟಕ ವ್ಯಾಪ್ತಿಯ ಜಿಲ್ಲೆಗಳ ಹೋಬಳಿವರೆಗೆ ಕೊಂಡೊಯ್ಯಲಾಗುವುದು. ಇದಕ್ಕಾಗಿ ಹಿರಿಯ ರಂಗಕರ್ಮಿಗಳೊಂದಿಗೆ ಚರ್ಚಿಸಿ ಯೋಜನೆ ರೂಪಿಸಲಾಗುವುದು ಎಂದರು.

ರಂಗಾಯಣ ಆಡಳಿತಾಧಿಕಾರಿ ಜಗದೀಶ್ವರ ನಾಶಿ ಮಾತನಾಡಿ, ‘ಪ್ರಸಕ್ತ ವರ್ಷ ಕಲಬುರಗಿ ರಂಗಾಯಣಕ್ಕೆ ₹ 45 ಲಕ್ಷ ಹಂಚಿಕೆ ಅನುದಾನ ಮಾಡಲಾಗಿದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.