
ಆಳಂದ: ‘ಶಾಲಾ, ಕಾಲೇಜುಗಳ ಹಂತದಲ್ಲಿ ಪುಸ್ತಕ ಓದುವ ಹವ್ಯಾಸದಿಂದ ವಿದ್ಯಾರ್ಥಿಗಳು ಸಂವೇದನಾಶೀಲವಾದ ವ್ಯಕ್ತಿತ್ವ ನಿರ್ಮಾಣ ಸಾಧ್ಯವಾಗುವುದು’ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯ ಬಿ.ಎಚ್.ನಿರಗುಡಿ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಮಾದನ ಹಿಪ್ಪರಗಿ ಗ್ರಾಮದ ಶ್ರೀ ಶಿವಲಿಂಗೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ಕನ್ನಡ ಪುಸ್ತಕ ಪ್ರಾಧಿಕಾರದ ಸಹಯೋಗದಲ್ಲಿ ಏರ್ಪಡಿಸಿದ್ದ ಕರ್ವಾಲೊ ಪುಸ್ತಕ ಪರಿಚಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ವ್ಯಕ್ತಿ, ಸಮಾಜ ಹಾಗೂ ಜಗತ್ತಿನಲ್ಲಿ ಉತ್ತಮ ಪುಸ್ತಕಗಳು ಪರಿವರ್ತನೆ ತಂದಿವೆ. ಪುಸ್ತಕ ಪ್ರಾಧಿಕಾರವು ನಿರಂತರವಾಗಿ ಪುಸ್ತಕ ಪ್ರೀತಿ ಹೆಚ್ಚಿಸುವ ಸಂಸ್ಕೃತಿ ಬೆಳೆಸಲು ವಿನೂತನ ಕಾರ್ಯಕ್ರಮ ಕೈಗೊಳ್ಳುತ್ತಿದೆ’ ಎಂದರು.
ರಂಗಾಯಣದ ಮಾಜಿ ಅಧ್ಯಕ್ಷ ಪ್ರಭಾಕರ ಜೋಶಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ, ‘ಪುಸ್ತಕ ಓದುವದು ಎಂದರೆ ಕೇವಲ ಸಾಹಿತ್ಯ, ಪುರಾಣ ಕತೆಗಳನ್ನು ಮಾತ್ರ ಓದುವುದಲ್ಲ. ವಿಜ್ಞಾನ, ತಂತ್ರಜ್ಞಾನ, ಸಂಗೀತ, ಕಲೆ ಸೇರಿದಂತೆ ನಮ್ಮ ಆಸಕ್ತ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆಗೆ ಅಂತಹ ಕ್ಷೇತ್ರದ ಕುರಿತು ಹೆಚ್ಚಿನ ಮಾಹಿತಿ, ಜ್ಞಾನಕ್ಕೆ ಪುಸ್ತಕಗಳು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು’ ಎಂದು ತಿಳಿಸಿದರು.
‘ಕರ್ವಾಲೊ ಕಾದಂಬರಿ ಪುಸ್ತಕ ಪರಿಚಯಿಸಿದ ಉಪನ್ಯಾಸಕ ಸಂಜಯ ಪಾಟೀಲ, ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರು ಮಲೆನಾಡಿನ ಪ್ರಾಕೃತಿಕ ಸಂಪತ್ತು, ಜೀವಸಂಕುಲವನ್ನು ಈ ಕಾದಂಬರಿಯಲ್ಲಿ ಪರಿಚಯಿಸಿದ್ದಾರೆ. ಮಂದಣ್ಣ, ಕರ್ವಾಲೊ, ಹಾರುವ ಓತಿ, ಕಿವಿ ಮುಂತಾದ ಪಾತ್ರಗಳ ಮೂಲಕ ಕಾದಂಬರಿಯು ತನ್ನ ಜೀವಂತಿಕೆಯನ್ನು ಇಂದಿಗೂ ಉಳಿಸಿಕೊಂಡಿದೆ’ ಎಂದರು.
ವಿದ್ಯಾರ್ಥಿನಿ ಮೋನಿಕಾ ಏಲಿಕೇರಿ, ಮೋನಿಕಾ ಸಲಗರ ಮಾತನಾಡಿದರು. ಪ್ರಾಂಶುಪಾಲ ಬಸವಂತರಾವ ಪಾಟೀಲ ಅಧ್ಯಕ್ಷತೆ ವಹಿಸಿದ್ದರು.
ಪ್ರಾಧ್ಯಾಪಕರಾದ ವಿಜಯಲಕ್ಷ್ಮಿ ಕುಂಬಾರ, ಶಂಕರ ಸೂರೆ, ಅಂಬಾಜೀ ಪಾಂಡ್ರೆ, ಶಿವಕುಮಾರ, ಪರಶುರಾಮ, ಬಸಪ್ಪ ಎಚ್., ಸಂಜಯ ಪೂಜಾರಿ ಉಪಸ್ಥಿತರಿದ್ದರು. ಇಂದಿರಮ್ಮ ಗಜೇಂದ್ರಘಡ ನಿರೂಪಿಸಿದರು. ವಿಜಯಲಕ್ಷ್ಮಿ ಸ್ವಾಗತಿಸಿದರು. ರಾಜಕುಮಾರ ಮಾಳಗೆ ವಂದಿಸಿದರು. ವಿದ್ಯಾರ್ಥಿಗಳು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.