ಕಲಬುರ್ಗಿ: ಕಲಬುರ್ಗಿ–ಜಂಬಗಾ (ಬಿ) ಕ್ರಾಸ್ ಕಡೆಗೆ ಹೋಗುವ ಮುಖ್ಯರಸ್ತೆಗೆ ಇರುವ ತಾಜ ಸುಲ್ತಾನಪುರದಲ್ಲಿ ಐದು ಜನ ದರೋಡೆಕೋರರನ್ನು ಪೋಲಿಸರು ಮಂಗಳವಾರ ಬಂಧಿಸಿದ್ದಾರೆ.
ನಗರದ ಗಡ್ಡೆಪ್ಪ ಮುತ್ಯಾನ ಗುಡಿಯ ಮರೆಯಲ್ಲಿ ಕೈಯಲ್ಲಿ ಮಾರಕಾಸ್ತ್ರಗಳಾದ ಚಾಕು, ರಾಡ್, ಬಡಿಗೆ, ಖಾರದ ಪುಡಿ ಇಟ್ಟುಕೊಂಡು ದರೋಡೆ ಮಾಡಲು ಹೊಂಚು ಹಾಕುತ್ತಾ ನಿಂತ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪೋಲಿಸರು ದಾಳಿ ಮಾಡಿ ಆರೋಪಿಗಳನ್ನು ಬಂಧಿಸಿದರು.
ಆರೋಪಿಗಳಾದ ಪ್ರಶಾಂತ ಅಲಿಯಾಸ ಪರಶ್ಯಾ ರಜನಿಖಾಂತ ಐಗೋಳೆ, ಅಭಿಷೇಕ ಸೋಮಣ್ಣ ರಾಜೋಳ, ಶಿವಾನಂದ ಬಾಬುರಾವ ದಿವಂಟಗಿ, ಚಂದ್ರಾಮ ಸಿದ್ದಪ್ಪ ಮ್ಯಾದರ, ವಿಜಯ ಅಲಿಯಾಸ್ ಸಂಜು ರಾಮಚಂದ್ರ ಐಳೋರ ಎಂಬುವರನ್ನು ಬಂಧಿಸಿ ದರೋಡೆಗೆ ಉಪಯೋಗಿಸಿದ 2 ಚಾಕು, ಒಂದು ಬಡಿಗೆ, ಒಂದು ಖಾರದ ಪ್ಯಾಕೆಟ್ ಮತ್ತು ಕೃತ್ಯಕ್ಕೆ ಉಪಯೋಗಿಸಿದ ಹೀರೊ ಹೋಂಡಾ ಮೋಟಾರ್ ಸೈಕಲ್ ಜಪ್ತಿ ಮಾಡಿಕೊಂಡು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅವರಲ್ಲಿ ಪ್ರಶಾಂತ ಅಲಿಯಾಸ್ ಪರಶ್ಯಾ ಕುಖ್ಯಾತ ರೌಡಿ ಶೀಟರ್ ಆಗಿದ್ದು, ವಿವಿಧ ಠಾಣೆಗಳಲ್ಲಿ ಕೊಲೆ, ದರೋಡೆ, ಸುಲಿಗೆ, ಕೊಲೆ ಪ್ರಯತ್ನದಂತಹ ಒಟ್ಟು 17 ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು
ಹೇಳಿದ್ದಾರೆ.
ಪೊಲೀಸ್ ಕಮೀಷನರ ಎನ್. ಸತೀಶಕುಮಾರ, ಡಿಸಿಪಿಗಳಾದ ಡಿ. ಕಿಶೋರಬಾಬು, ಶ್ರೀಕಾಂತ ಕಟ್ಟಿಮನಿ, ‘ಎ’ ಉಪವಿಭಾಗದ ಎಸಿಪಿ ಅಂಶುಕುಮಾರ ಅವರ ಮಾರ್ಗದರ್ಶದಲ್ಲಿಅಶೋಕ ನಗರ ಠಾಣೆ ಪಿಎಸ್ಐ ವಾಹೀದ್ ಹುಸೇನ್ ಕೊತ್ವಾಲ್ ಮತ್ತು ರೌಡಿ ನಿಗ್ರಹ ದಳದ ಸಿಬ್ಬಂದಿ ತೌಶೀಫ್, ಶ್ರೀಶೈಲ್, ಬೀರಣ್ಣಾ, ಶಿವಾನಂದ, ಗೋಪಾಲ, ಮಲ್ಲಿಕಾರ್ಜುನ, ಜಾನಿ, ಈರಣ್ಣ ದಾಳಿ ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.