ಪ್ರಿಯಾಂಕ್ ಖರ್ಗೆ
ಕಲಬುರಗಿ: ‘ಜನಾಂಗೀಯ ದ್ವೇಷ, ವರ್ಣಾಶ್ರಮದ ಕ್ರೌರ್ಯಗಳನ್ನು ಒಳಗೊಂಡ ನಾಜಿವಾದ, ಮನುವಾದಗಳನ್ನೇ ನರನಾಡಿ, ರಕ್ತಗಳಲ್ಲಿ ಪ್ರವಾಹಿಸಿಕೊಂಡಿರುವ ಆರ್ಎಸ್ಎಸ್ ಎಂಬ ವಿಷಕಾರಿ ಸಂಘಟನೆಯನ್ನು ಕಾಂಗ್ರೆಸ್ ಪಕ್ಷವು ಎಂದಿಗೂ ಶತ್ರುವಾಗಿಯೇ ನೋಡುತ್ತದೆ’ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಪಾದಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಖಾತೆಯಲ್ಲಿ ಬರೆದುಕೊಂಡಿರುವ ಸಚಿವ ಪ್ರಿಯಾಂಕ್, ‘ಪ್ರಬುದ್ಧ ಮತ್ತು ಸಮೃದ್ಧ ಭಾರತ ನಿರ್ಮಾಣ ಆಗಬೇಕಾದರೆ ಭಾರತದ ಪ್ರತಿ ಪ್ರಜೆಯೂ ‘ಆರ್ಎಸ್ಎಸ್ಗೆ ತಾಕಿದ ಗಾಳಿಯೂ ನಮಗೆ ಸೋಕಬಾರದು ಎಂಬ ಪ್ರತಿಜ್ಞೆ ಕೈಗೊಳ್ಳಬೇಕು’ ಎಂದಿದ್ದಾರೆ.
‘ಆರ್ಎಸ್ಎಸ್ ಸಂವಿಧಾನಕ್ಕೆ, ಏಕತೆಗೆ, ರಾಷ್ಟ್ರಧ್ವಜಕ್ಕೆ, ರಾಷ್ಟ್ರಗೀತೆಗೆ, ದೇಶದ ಸಾರ್ವಭೌಮತೆಗೆ ಶತ್ರು. ಹಿಗಾಗಿ ಈ ಆರ್ಎಸ್ಎಸ್ ಸಂಘಟನೆಯನ್ನು ಕಾಂಗ್ರೆಸ್ ಪಕ್ಷವು ಎಂದಿಗೂ ಶತ್ರುವಾಗಿಯೇ ನೋಡುತ್ತದೆ’ ಎಂದು ಪ್ರತಿಪಾದಿಸಿದ್ದಾರೆ.
‘ಬಾಬಾಸಾಹೇಬರು, ಸರ್ದಾರ್ ವಲ್ಲಭಭಾಯಿ ಪಟೇಲರು ದಶಕಗಳ ಹಿಂದೆಯೇ ಆರ್ಎಸ್ಎಸ್ ಕುರಿತು ನಿಷ್ಠುರವಾಗಿ ಎಚ್ಚರಿಕೆಯ ಸಂದೇಶ ನೀಡಿ ಹೋಗಿದ್ದಾರೆ. ಆ ಮಹನೀಯರ ಸಂದೇಶವನ್ನು ಗಂಭೀರವಾಗಿ ಪರಿಗಣಿಸಿ ಮನುವಾದಿಗಳನ್ನು ದೂರ ಇಡಬೇಕಿದೆ’ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
‘100 ವರ್ಷಗಳಲ್ಲಿ ಆರ್ಎಸ್ಎಸ್ ಈ ದೇಶಕ್ಕೆ ನೀಡಿದ ಕೇವಲ 10 ಕೊಡುಗೆಗಳನ್ನು ಹೇಳಲು ಬಿಜೆಪಿಗರಿಂದ ಮತ್ತು ಸಂಘ ಪರಿವಾರದವರಿಂದ ಸಾಧ್ಯವಾಗುವುದಿಲ್ಲ, ಇಂತಹ ಆರ್ಎಸ್ಎಸ್ನಿಂದ ಅಪಾಯವಿದೆಯೇ ಹೊರತು ಸಹಾಯವಿಲ್ಲ’ ಎಂದು ಪ್ರತಿಪಾದಿಸಿದ್ದಾರೆ.
‘ಬ್ರಿಟಿಷರೊಂದಿಗೆ ಕೈಜೋಡಿಸಿ ಭಾರತ ವಿರೋಧಿಯಾಗಿ ನಡೆದುಕೊಂಡಿದ್ದ ಆರ್ಎಸ್ಎಸ್ ಸ್ವತಂತ್ರದ ನಂತರ ಐಕ್ಯತೆಯ ವಿರೋಧಿ ಚಟುವಟಿಕೆಗಳನ್ನು ಇನ್ನಷ್ಟು ಹೆಚ್ಚಿಸಿತು.ಸಂಘ ಪರಿವಾರದ ಅಪಾಯವನ್ನು ಅಂದೇ ಊಹಿಸಿದ ಸರ್ದಾರ್ ಪಟೇಲರು ನಿಷೇಧ ಹೇರಿದ್ದರು’ ಎಂದು ಸಚಿವ ಪ್ರಿಯಾಂಕ್ ಹೇಳಿದ್ದಾರೆ.
‘ನಮ್ಮ ದೇಶದಲ್ಲಿ ದ್ವೇಷ ಮತ್ತು ಹಿಂಸಾಚಾರದ ಶಕ್ತಿಗಳನ್ನು ಬೇರುಸಹಿತ ನಿರ್ಮೂಲನೆ ಮಾಡಬೇಕಿದೆ, ಮತ್ತು ರಾಷ್ಟ್ರದ ಸ್ವಾತಂತ್ರ್ಯವನ್ನು ಅಪಾಯಕ್ಕೆ ಸಿಲುಕಿಸಲು ಮತ್ತು ದೇಶದ ಹೆಸರನ್ನು ಕಳೆಗುಂದಿಸಲು ಕೆಲಸ ಮಾಡುತ್ತಿರುವ ಆರ್ಎಸ್ಎಸ್ ಅನ್ನು ನಿಷೇಧಿಸುತ್ತಿದ್ದೇವೆ’ ಎಂದು ಸರ್ದಾರ್ ಪಟೇಲರು 1948ರ ಫೆಬ್ರುವರಿ 4ರಂದು ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ಹೇಳಿದ್ದರು. ಪಟೇಲರ ಈ ಮಾತುಗಳನ್ನು ನಾವು ಸದಾ ಗಮನದಲ್ಲಿ ಇರಿಸಿಕೊಳ್ಳಬೇಕಿದೆ’ ಎಂದಿದ್ದಾರೆ.
‘ಸಂವಿಧಾನಕ್ಕೆ, ರಾಷ್ಟ್ರಧ್ವಜಕ್ಕೆ ನಿಷ್ಠರಾಗಿರುತ್ತೇವೆ ಎಂದು ಹೇಳಿ, ನಾಟಕವಾಡಿ ನಿಷೇಧವನ್ನು ತೆರವು ಮಾಡಿಸಿಕೊಂಡ ಆರ್ ಎಸ್ಎಸ್ ನಂತರ ಮುಂದುವರೆಸಿದ್ದು ಅದೇ ಸಂವಿಧಾನ ವಿರೋಧಿ ಕೃತ್ಯಗಳನ್ನೇ. ಸಂವಿಧಾನವನ್ನು ಒಪ್ಪದೇ ಕರಡು ಪ್ರತಿ ಸುಟ್ಟು ಹಾಕಿದ್ದ, ರಾಷ್ಟ್ರಧ್ವಜವನ್ನು ಗೌರವಿಸದ, ಮಹಿಳೆಯರು, ಶೋಷಿತರನ್ನು ಮೂರನೇ ದರ್ಜೆಯ ನಾಗರಿಕರಂತೆ ನಡೆಸಿಕೊಳ್ಳುವ ಅಜೆಂಡಾ ಹೊಂದಿರುವ ಆರ್ಎಸ್ಎಸ್ ಕಾಂಗ್ರೆಸ್ಸಿಗೆ ಮಾತ್ರವಲ್ಲ, ಈ ದೇಶದ ಐಕ್ಯತೆಗೆ ಪರಮ ಶತ್ರು ಎನ್ನುವುದನ್ನು ಪ್ರತಿ ದೇಶಭಕ್ತನೂ ಗಮನದಲ್ಲಿರಿಸಿಕೊಳ್ಳಬೇಕು’ ಎಂದು ಸಚಿವರು ಬರೆದುಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.