ADVERTISEMENT

‘ಶೈಕ್ಷಣಿಕ ಧನಸಹಾಯ ವಂಚಿಸುವ ನಿಯಮ’

ಪಡಿತರ ಚೀಟಿ ಜೋಡಣೆ ಕಡ್ಡಾಯ ವಿರೋಧಿಸಿ ಕಟ್ಟಡ ಕಾರ್ಮಿಕರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2023, 5:57 IST
Last Updated 14 ಮಾರ್ಚ್ 2023, 5:57 IST
ಕಾರ್ಮಿಕರ ಮಕ್ಕಳಿಗಾಗಿ ಇರುವ ಶೈಕ್ಷಣಿಕ ಧನ ಸಹಾಯಕ್ಕೆ ಪಡಿತರ ಚೀಟಿ ಜೋಡಣೆ ಕಡ್ಡಾಯ ವಿರೋಧಿಸಿ ಕಾರ್ಮಿಕರು ಪ್ರತಿಭಟನೆ ಧರಣಿ ನಡೆಸಿದರು
ಕಾರ್ಮಿಕರ ಮಕ್ಕಳಿಗಾಗಿ ಇರುವ ಶೈಕ್ಷಣಿಕ ಧನ ಸಹಾಯಕ್ಕೆ ಪಡಿತರ ಚೀಟಿ ಜೋಡಣೆ ಕಡ್ಡಾಯ ವಿರೋಧಿಸಿ ಕಾರ್ಮಿಕರು ಪ್ರತಿಭಟನೆ ಧರಣಿ ನಡೆಸಿದರು   

ಕುಂದಾಪುರ: ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯೂ ಕಾರ್ಮಿಕರ ಮಕ್ಕಳಿಗಾಗಿ ಇರುವ ಶೈಕ್ಷಣಿಕ ಧನ ಸಹಾಯಕ್ಕೆ ಪಡಿತರ ಚೀಟಿ ಜೋಡಣೆ ಕಡ್ಡಾಯ ಎನ್ನುವ ನಿಯಮ ರೂಪಿಸಿರುವುದು ಮೂಲಕ ಧನ ಸಹಾಯದಿಂದ ವಂಚಿಸುವ ಕ್ರಮವಾಗಿದೆ ಎಂದು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ (ಸಿಐಟಿಯು)ದ ಕುಂದಾಪುರ ತಾಲ್ಲೂಕು ಅಧ್ಯಕ್ಷ ಸುರೇಶ್ ಕಲ್ಲಾಗರ ಆರೋಪಿಸಿದ್ದಾರೆ.

ಇಲ್ಲಿನ ಶಾಸ್ತ್ರೀ ವೃತ್ತದಲ್ಲಿ ಸೋಮವಾರ ಜಂಟಿ ರೇಷನ್ ಕಾರ್ಡ್‌ನಲ್ಲಿ ಹೆಸರು ಹಂಚಿಕೊಂಡಿರುವ ನೋಂದಾಯಿತ ಕಟ್ಟಡ ನಿರ್ಮಾಣ ಕಾರ್ಮಿಕರ ಮಕ್ಕಳಿಗೂ ಶೈಕ್ಷಣಿಕ ಧನ ಸಹಾಯ ನೀಡಲು ಆಗ್ರಹಿಸಿ ನಡೆದ ಪ್ರತಿಭಟನಾ ಧರಣಿಯನ್ನು ಉದ್ದೇಶಿಸಿ ಮಾತನಾಡಿದರು.

2022-23 ಸಾಲಿನ ಶೈಕ್ಷಣಿಕ ಧನ ಸಹಾಯಕ್ಕೆ ಪಡಿತರ ಚೀಟಿ ಕಡ್ಡಾಯ ಎಂಬ ಹೊಸ ನಿಯಮ ತಂದಿರುವುದು ಕಾರ್ಮಿಕ ವರ್ಗದ ಹಾಗೂ ಬಡ ಜನರ ಸಬ್ಸಿಡಿ, ಸಹಾಯಧನ ಕಡಿತ ಮಾಡುವ ಹುನ್ನಾರವಾಗಿದೆ. ಕೇಂದ್ರ ಸರ್ಕಾರದ ಒಂದು ದೇಶ ಒಂದು ರೇಷನ್ ಇದರ ಮುಂದಿನ ಭಾಗವಾಗಿಯೇ ಒಂದು ದೇಶ ಒಂದು ವಿದ್ಯಾರ್ಥಿ ವೇತನ ಎಂಬ ನಿಯಮ ಬರಲಿದೆ ಎನ್ನುವ ಆತಂಕ ವ್ಯಕ್ತಪಡಿಸಿದ ಅವರು ಶೀಘ್ರ ವಾಗಿ ಪಡಿತರ ಚೀಟಿಯ ಕಡ್ಡಾಯ ಮಾನದಂಡವನ್ನು ಕೈ ಬಿಡಬೇಕು ಎಂದು ಆಗ್ರಹಿಸಿದರು.

ADVERTISEMENT

ಸಿಐಟಿಯು ಸಂಚಾಲಕ ಚಂದ್ರಶೇಖರ, ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ಗೌರವಾಧ್ಯಕ್ಷ ಚಿಕ್ಕ ಮೊಗವೀರ, ಸಿಐಟಿಯು ಜಿಲ್ಲಾ ಅಧ್ಯಕ್ಷ ಕೆ ಶಂಕರ್ ಮಾತನಾಡಿದರು. ಸಂಘದ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಸಂತೋಷ್ ಹೆಮ್ಮಾಡಿ ಮನವಿ ಓದಿದರು. ಕಾರ್ಯದರ್ಶಿ ಶಶಿಕಾಂತ್ ಸ್ವಾಗತಿಸಿದರು. ವಿಜೇಂದ್ರ ಕೋಣಿ ವಂದಿಸಿದರು.ಪ್ರತಿಭಟನಾ ಸಭೆಯ ಬಳಿಕ ಸಾವಿರಾರು ಸಂಖ್ಯೆಯಲ್ಲಿ ಕಟ್ಟಡ ಕಾರ್ಮಿಕರು ಪೇಟೆಯಲ್ಲಿ ಮೆರವಣಿಗೆ ನಡೆಸಿ, ಕಾರ್ಮಿಕ ನಿರೀಕ್ಷಕರ ಕಚೇರಿಗೆ ತೆರಳಿ, ಅಲ್ಲಿನ ಸಿಬ್ಬಂದಿ ಸಹನ ಅವರ ಮೂಲಕ ಕಾರ್ಮಿಕರ ಕಲ್ಯಾಣ ಮಂಡಳಿ ಜಂಟಿ ಕಾರ್ಯದರ್ಶಿ ಹಾಗೂ ತಹಶೀಲ್ದಾರ್ ಕಚೇರಿಗೆ ತೆರಳಿ ತಹಶೀಲ್ದಾರ್ ಸಂತೋಷ ಭಂಡಾರಿ ಅವರ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.