ಶಹಾಬಾದ್: ಮೂಲ ಸಂಸ್ಕೃತಿ, ಆಚಾರ, ವಿಚಾರಗಳನ್ನು ತಲೆತಲಾಂತರದಿಂದ ಉಳಿಸಿಕೊಂಡು ಬಂದಿರುವ ಬಂಜಾರ ಸಮಾಜ ಸ್ವಾಭಿಮಾನದಿಂದ ದುಡಿದು ತಿನ್ನುವ ವರ್ಗವಾಗಿದೆ ಎಂದು ಚಿತ್ತಾಪುರದ ಕಂಬಳೇಶ್ವರ ಸಂಸ್ಥಾನ ಮಠದ ಸೋಮಶೇಖರ ಶಿವಾಚಾರ್ಯರು ಹೇಳಿದರು.
ಶುಕ್ರವಾರ ಶಹಾಬಾದ್ ತಾಲ್ಲೂಕಿನ ಮುಗುಳನಾಗಾವಿ ಸದ್ಗುರು ಯಲ್ಲಾಲಿಂಗ ಪುಣ್ಯಾಶ್ರದಲ್ಲಿ 34ನೇ ವರ್ಷದ ಜಾತ್ರಾ ಮಹೋತ್ಸವ ಹಾಗೂ ಪೀಠಾಧಿಪತಿ ಜೇಮಸಿಂಗ್ ಮಹಾರಾಜರ ಮೌನಾನುಷ್ಠಾನ ಮಂಗಳ ಸಮಾರಂಭದ ಸಾನ್ನಿಧ್ಯ ವಹಿಸಿ, ಮಾತನಾಡಿದರು.
‘ಕಳೆದ 34 ವರ್ಷದಿಂದ ಮೌನಾನುಷ್ಠಾನಗೈಯಿತ್ತಿರುವ ಜೇಮಸಿಂಗ್ ಮಹಾರಾಜರು ಕೇವಲ ಬಂಜಾರ ಸಮಾಜಕ್ಕೆ ಮಾತ್ರವಲ್ಲ; ಇಡೀ ಮನುಕುಲದ ಉದ್ಧಾರಕ್ಕಾಗಿ, ಮೌನಾನುಷ್ಠಾನ ನಡೆಸುತ್ತಿದ್ದು, ಅವರ ಮಾರ್ಗದರ್ಶನದಲ್ಲಿ ಬಂಜಾರ ಸಮಾಜ ಎಲ್ಲಾ ವಲಯದಲ್ಲೂ ಸದೃಢವಾಗಿ ಬೆಳೆಯಲಿ’ ಎಂದರು.
ಒಂದು ತಿಂಗಳ ಮೌನಾನುಷ್ಠಾನ ಮಂಗಲಗೊಳಿಸಿ ಮಾತನಾಡಿದ ಜೇಮಸಿಂಗ್ ಮಹಾರಾಜರು, ‘ಗುರುವಿನ ಅನುಗೃಹದಿಂದ ಈ ವರ್ಷ ಮಳೆ, ಬೆಳೆ ಸಮೃದ್ಧವಾಗಲಿ, ರೈತರ ಮುಖದಲ್ಲಿ ಮಂದಹಾಸ ಮೂಡಲಿ, ರಾಜ್ಯ, ದೇಶ ಸಮೃದ್ಧಿ ಸಾಧಿಸಲಿ, ವಿಶ್ವದಲ್ಲಿ ಶಾಂತಿ ಮೂಡಲಿ ಎಂದು ಹಾರೈಸಿದರು.
ಸಮ್ಮುಖ ವಹಿಸಿದ್ದ ಗೊಬ್ಬುರವಾಡಿಯ ಬಳಿರಾಮ ಮಹಾರಾಜ, ವಿಠಲ ಜಾಧವ ಮಾತನಾಡಿದರು.
ಸೈಯದ್ ಇಕ್ಬಾಲ್ ಅಲಿಸಾಬ್, ಮಾತಾ ಕಳಾವತಿ ದೇವಿ, ಮಾತಾ ಶಾಂತಾದೇವಿ, ಅನೀಲ ಮಹಾರಾಜ, ಅನೀಲ ಸಾಹೇಬ, ಮುಖಂಡರಾದ ಲತಾ ರಾಠೋಡ, ಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಶರಣಗೌಡ ಮಾಲಿ ಪಾಟೀಲ, ಜೇಮಸಿಂಗ್ ರಾಠೋಡ, ನಾಗಣ್ಣ ಕಂಠಿ, ಶ್ಯಾಮರಾವ ಪವಾರ, ರವಿ ಚವ್ಹಾಣ, ವಿನೋದ ಚವ್ಹಾಣ, ಸುರೇಶ ಜಾಧವ, ಶ್ರೀಮಂತ ಪವಾರ, ಶಂಕರ ಜಾಧವ ಮತ್ತಿತರರು ಇದ್ದರು.
ಸಿದ್ದೇಶ್ವರ ಶಾಸ್ತ್ರಿ ಪ್ರವಚನ ನೀಡಿದರು. ಬಸಯ್ಯ ಸ್ವಾಮಿ ಮಠ ಸಂಗೀತ ಸೇವೆ ಸಲ್ಲಿಸಿದರು. ಸುರೇಶ ಬೆನಕಟ್ಟಿ ತಬಲಾ ಸಾಥ್ ನೀಡಿದರು. ತಾ.ಪಂ.ಮಾಜಿ ಸದಸ್ಯ ನಾಮದೇವ ರಾಠೋಡ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಮಲ್ಲಿಕಾರ್ಜುನ ಶಾಸ್ತ್ರಿ ಐನಾಪುರ ನಿರೂಪಿಸಿದರು. ರಾಮು ಜಾಧವ ತುಲಾಭಾರ ಸೇವೆ ಸಲ್ಲಿಸಿದರು.
ಬೆಳಿಗ್ಗೆ ಕರ್ತೃ ಗದ್ದುಗೆಗೆ ರುದ್ರಾಭಿಷೇಕ, ಬಿಲ್ವಾರ್ಚನೆ ನಡೆಯಿತು. ಜೇಮಸಿಂಗ್ ಮಹಾರಾಜರು ಅಗ್ನಿ ಪ್ರವೇಶ ಮಾಡಿದರು. ಮಹಾಪ್ರಸಾದ ವಿತರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.