ADVERTISEMENT

ಶಖಾಪೂರ ರೊಟ್ಟಿ ಜಾತ್ರೆ; 50 ಕ್ವಿಂಟಲ್ ರೊಟ್ಟಿ ತಯಾರಿ

ಸಿದ್ದರಾಮ ಶಿವಯೋಗಿಗಳ ಪುಣ್ಯಸ್ಮರಣೋತ್ಸವ‌: 50 ಕ್ವಿಂಟಲ್ ರೊಟ್ಟಿ ತಯಾರಿ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2025, 7:54 IST
Last Updated 10 ಅಕ್ಟೋಬರ್ 2025, 7:54 IST
ಜೇವರ್ಗಿ ತಾಲ್ಲೂಕಿನ ಶಖಾಪೂರ ಮಠದಲ್ಲಿ ರೊಟ್ಟಿ ಜಾತ್ರೆ ಅಂಗವಾಗಿ ಸಿದ್ಧಪಡಿಸಿರುವ ರೊಟ್ಟಿಗಳನ್ನು ಸಿದ್ದರಾಮ ಶಿವಾಚಾರ್ಯರು ವೀಕ್ಷಣೆ ಮಾಡಿದರು
ಜೇವರ್ಗಿ ತಾಲ್ಲೂಕಿನ ಶಖಾಪೂರ ಮಠದಲ್ಲಿ ರೊಟ್ಟಿ ಜಾತ್ರೆ ಅಂಗವಾಗಿ ಸಿದ್ಧಪಡಿಸಿರುವ ರೊಟ್ಟಿಗಳನ್ನು ಸಿದ್ದರಾಮ ಶಿವಾಚಾರ್ಯರು ವೀಕ್ಷಣೆ ಮಾಡಿದರು   

ಜೇವರ್ಗಿ: ಭಕ್ತಿಭಾವ, ಉತ್ಸಾಹದಿಂದ ಸೌದೆ ಒಲೆಯ ಮೇಲೆ ರೊಟ್ಟಿ ಬಡಿಯುತ್ತಿರುವ ನೂರಾರು ಮಹಿಳೆಯರು, ಮಠದ ಆವರಣದಲ್ಲಿ ಎಲ್ಲಿ ನೋಡಿದರಲ್ಲಿ ರಾಶಿಗಟ್ಟಲೇ ಕಾಣುತ್ತಿರುವ ರೊಟ್ಟಿ...

ಇದು ತಾಲ್ಲೂಕಿನ ಶಖಾಪೂರದ ವಿಶ್ವರಾಧ್ಯರ ತಪೋವನ ಮಠದಲ್ಲಿ ಬರುವ ಅ.12ರಂದು ಜರುಗಲಿರುವ ರೊಟ್ಟಿ ಜಾತ್ರೆಗಾಗಿ ಸಿದ್ಧತೆಯಲ್ಲಿ ತೊಡಗಿರುವ ದೃಶ್ಯ ಗುರುವಾರ ಕಂಡುಬಂತು.

ಮಠದ ಪೀಠಾಧಿಪತಿ ಸಿದ್ದರಾಮ ಶಿವಾಚಾರ್ಯ ಸ್ವಾಮೀಜಿ‌ ಸಾನ್ನಿಧ್ಯದಲ್ಲಿ ನಡೆಯಲಿರುವ ಈ ರೊಟ್ಟಿ ಜಾತ್ರೆಗೆ ವಿವಿಧ ರಾಜ್ಯಗಳಿಂದ ಸಹಸ್ರಾರು ಜನ ಭಕ್ತಗಣ ಬಂದು ಸೇರಲಿದೆ.

ADVERTISEMENT

ಕೋಮು ಸೌಹಾರ್ದತೆ ಸಾರುವ ವಿಶ್ವರಾಧ್ಯ ತಪೋವನದಲ್ಲಿ ಪ್ರತಿ ವರ್ಷದಂತೆ ಲಿಂ.ಸಿದ್ದರಾಮ ಶಿವಯೋಗಿಗಳ 75ನೇ ಪುಣ್ಯಸ್ಮರಣೆ ನಿಮಿತ್ತ ವೈಭವದಿಂದ ರೊಟ್ಟಿ ಜಾತ್ರೆ ನಡೆಸಲಾಗುತ್ತಿದೆ. ಖಡಕ್ ಜೋಳ-ಸಜ್ಜೆ ರೊಟ್ಟಿ, ಕಡಲೆ, ಶೇಂಗಾ, ತೊಗರಿ, ಹುಲುಲಿ ಸೇರಿದಂತೆ ಎಲ್ಲಾ ತರಹದ ಕಾಳು ಹಾಗೂ ಹತ್ತಾರು ಕ್ವಿಂಟಲ್ ತರಕಾರಿಗಳಿಂದ ಸಿದ್ಧಪಡಿಸುವ ಭಜ್ಜಿ ಪಲ್ಯ ಈ ಜಾತ್ರೆಯ ವಿಶೇಷ.

ದಿನಪೂರ್ತಿ ನಡೆಯುವ ರೊಟ್ಟಿ ಜಾತ್ರೆಯಲ್ಲಿ ಸಹಸ್ರಾರು ಭಕ್ತರು ಪಾಲ್ಗೊಂಡು ರೊಟ್ಟಿ, ಭಜ್ಜಿ ಪಲ್ಯ ಪ್ರಸಾದ ಸವಿದು ವಿಶ್ವರಾಧ್ಯರ ದರ್ಶನ ಪಡೆಯುತ್ತಾರೆ. ಈ ವರ್ಷ 30 ಕ್ವಿಂಟಲ್ ಸಜ್ಜೆ ರೊಟ್ಟಿ, 20 ಕ್ವಿಂಟಲ್ ಬಿಳಿ ಜೋಳ ರೊಟ್ಟಿಗಳನ್ನು ಸಿದ್ಧಪಡಿಸಲಾಗುತ್ತಿದೆ. ಗ್ರಾಮದ ಮಹಿಳೆಯರು 15 ದಿನಗಳಿಂದ ನಿರಂತರವಾಗಿ ಲಕ್ಷಾಂತರ ರೊಟ್ಟಿಗಳನ್ನು ಬಡಿಯುತ್ತಿದ್ದಾರೆ. ಅಲ್ಲದೆ ಬೇರೆ ಬೇರೆ ಭಾಗದ ಭಕ್ತರು ಕೂಡ ಜಾತ್ರೆಗಾಗಿ ಸಾವಿರ ರೊಟ್ಟಿಗಳನ್ನು ಸಿದ್ಧಪಡಿಸಿಕೊಂಡು ಶ್ರೀಮಠದ ದಾಸೋಹಕ್ಕೆ ತಂದು ಸಲ್ಲಿಸುತ್ತಿದ್ದಾರೆ.

ವಿಶೇಷ ಪೂಜೆ: ಪುಣ್ಯಾರಾಧನೆ ನಿಮಿತ್ತ ಭಾನುವಾರ ಬೆಳಿಗ್ಗೆ 6 ಗಂಟೆಗೆ ಸಿದ್ದರಾಮ ಶಿವಯೋಗಿಗಳ ಕರ್ತೃ ಗದ್ದುಗೆಗೆ ವಿಶೇಷ ಪೂಜೆ, ರುದ್ರಾಭಿಷೇಕ, ಅಲಂಕಾರ, ನೈವೇದ್ಯ ಜರುಗಲಿದೆ. ಸಂಜೆ 5 ಗಂಟೆಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಅದ್ದೂರಿ ಪಲ್ಲಕ್ಕಿ ಉತ್ಸವ ನಡೆಯಲಿದೆ.

ರಾತ್ರಿ 8ಕ್ಕೆ ಧಾರ್ಮಿಕ ಸಭೆ: ಭಾನುವಾರ ರಾತ್ರಿ 8ಕ್ಕೆ ಧಾರ್ಮಿಕ ಸಭೆ ನಡೆಯಲಿದ್ದು, ಅಖಿಲ ಭಾರತ ಶಿವಾಚಾರ್ಯರ ಸಂಘದ ಅಧ್ಯಕ್ಷ ಸಿಂದಗಿಯ ಪ್ರಭು ಸಾರಂಗಧರ ಶಿವಾಚಾರ್ಯ ಸ್ವಾಮೀಜಿ, ಶಿವಸೇನಾ ರಾಜ್ಯಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಅವರನ್ನು ಸನ್ಮಾನಿಸಲಾಗುವುದು. ನೆಲೋಗಿಯ ಸಿದ್ದಲಿಂಗ ಸ್ವಾಮೀಜಿ, ಪಾಳಾದ ಗುರುಮೂರ್ತಿ ಶಿವಾಚಾರ್ಯರು ಸೇರಿದಂತೆ ವಿವಿಧ ಮಠಾಧೀಶರು, ಸಚಿವ ಡಾ.ಶರಣಪ್ರಕಾಶ ಪಾಟೀಲ, ಕೆಕೆಆರ್‌ಡಿಬಿ ಅಧ್ಯಕ್ಷ ಡಾ.ಅಜಯಸಿಂಗ್, ಶಾಸಕರಾದ ಅಲ್ಲಮಪ್ರಭು ಪಾಟೀಲ, ಬಸವರಾಜ ಮತ್ತಿಮಡು, ಕೆಕೆಆರ್‌ಟಿಸಿ ಅಧ್ಯಕ್ಷ ಅರುಣಕುಮಾರ ಪಾಟೀಲ, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ರೈತ ಮುಖಂಡ ಕೇದಾರಲಿಂಗಯ್ಯ ಹಿರೇಮಠ, ಮಲ್ಲಿನಾಥಗೌಡ ಯಲಗೋಡ, ಶಿವರಾಜ ಪಾಟೀಲ ರದ್ದೇವಾಡಗಿ, ರಾಜಶೇಖರ ಸಾಹು ಸೀರಿ ಪಾಲ್ಗೊಳ್ಳಲಿದ್ದಾರೆ ಎಂದು ಸಿದ್ದರಾಮ ಶಿವಾಚಾರ್ಯರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.