ಕಲಬುರ್ಗಿ: ಕಲ್ಯಾಣ ಕರ್ನಾಟಕದ ಆರಾಧ್ಯ ದೈವ ಇಲ್ಲಿನ ಶರಣ ಬಸವೇಶ್ವರ ರಥೋತ್ಸವ ಶಕ್ರವಾರ ಅತ್ಯಂತ ಸರಳ ರೀತಿಯಲ್ಲಿ ನೆರವೇರಿತು.
ಕೊರೊನಾ ವೈರಾಣು ಹರಡುವ ಭೀತಿಯ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಜಾತ್ರೆ, ಉತ್ಸವ, ಉರುಸ್, ಮೆರವಣಿಗೆಗಳನ್ನು ನಿಷೇಧಿಸಿದೆ. ಅದರಂತೆ ಸರ್ಕಾರದ ಮಾರ್ಗದರ್ಶಿ ಅನುಸಾರ ಸಾಂಕೇತಿಕವಾಗಿ ಜಾತ್ರೆ ಆಚರಿಸಲಾಯಿತು.
ಗುರುವಾರ ನಡೆದ ಉಚ್ಛಾಯಿ ರಥೋತ್ಸವವನ್ನೂ ಸರಳವಾಗಿ ಆಚರಿಸಲಾಗಿತ್ತು. ಅದೇ ರೀತಿ ಶುಕ್ರವಾರ ಮಧ್ಯಾಹ್ನ 2ರ ಸುಮಾರಿಗೆ ಶರಣಬಸವೇಶ್ವರ ದೊಡ್ಡ ಥರ ಎಳೆಯುವ ಮೂಲಕ ಉತ್ಸವ ಸಮಾಪನಗೊಂಡಿತು.
ಬೆಳಿಗ್ಗೆ ದೆವಸ್ಥಾನದಲ್ಲಿ ಧಾರ್ಮಿಕ ವಿಧಿ- ವಿಧಾನಗಳು ಸಾಂಗವಾಗಿ ನೆರವೇರಿದವು. ಮಹಾದಾಸೋಹ ಪೀಠಾಧಿಪತಿ ಡಾ.ಶರಣಬಸವಪ್ಪ ಅಪ್ಪ ಅವರು ಶರಣಬಸವೇಶ್ವರರು ಬಳಸುತ್ತಿದ್ದ ಪರುಷ ಬಟ್ಟಲನ್ನು ಭಕ್ತರಿಗೆ ತೋರಿಸುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು.
ಜಾತ್ರೆ ಮೈದಾನದಲ್ಲಿ ಸೇರಿದ್ದ ಕೆಲವು ಜನರಷ್ಟೇ ರಥ ಎಳೆದು ಸಂಭ್ರಮಿಸಿದರು. ಶರಣಬಸವೇಶ್ವರ ಮಹಾರಾಜ ಕಿ ಜೈ, ಜಗದ್ಗುರು ಬಸವೇಶ್ವರ ಮಹಾರಾಜ ಕಿ ಜೈ, ಹರಹರ ಮಹಾದೇವ, ಶಿವಶಿವ ಮಹಾದೇವ ಎಂದು ಘೋಷಣೆಗಳು ಮೊಳಗಿಸಿದರು.
ಭಕ್ತರು ಜಾತ್ರೆ ಮೈದಾನದಲ್ಲಿ ಗುಂಪುಗೂಡದಂತೆ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು. ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ಮೂರೂ ದಿಕ್ಕುಗಳಲ್ಲಿ ಬ್ಯಾರಿಕೇಡ್ ಇಟ್ಟು ಪ್ರವೇಶ ನಿರ್ಬಂಧಿಸಿದರು.
ದೇವಸ್ಥಾನದ ಆವರಣ, ಮುಖ್ಯ ರಸ್ತೆ, ಜಾತ್ರೆ ಮೈದಾನದಲ್ಲಿ ಈ ಬಾರಿ ಯಾವುದೇ ಅಂಗಡಿ ಮುಂಗಟ್ಟು ತೆರೆಯಲು ಅವಕಾಶ ನೀಡಲಿಲ್ಲ. ಇದರಿಂದ ಸುತ್ತಲಿನ ರಸ್ತೆಗಳು ಬಿಕೋ ಎನ್ನುತ್ತಿದ್ದವು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.