ADVERTISEMENT

ಸಂಶೋಧನೆಗಾಗಿ ವಿದೇಶ ಪ್ರಯಾಣ ಪ್ರವೃತ್ತಿಗೆ ತಡೆ

‘ರಾಷ್ಟ್ರೀಯ ಶಿಕ್ಷಣ ನೀತಿ–2019’ ಕುರಿತು ವಿಚಾರ ಸಂಕಿರಣದಲ್ಲಿ ಡಾ. ನಿಷ್ಠಿ

​ಪ್ರಜಾವಾಣಿ ವಾರ್ತೆ
Published 22 ಜುಲೈ 2019, 13:22 IST
Last Updated 22 ಜುಲೈ 2019, 13:22 IST
ರಾಷ್ಟ್ರೀಯ ಶಿಕ್ಷಣ ನೀತಿ ವಿಚಾರ ಸಂಕಿರಣವನ್ನು ವಿ.ವಿ. ಕುಲಪತಿ ಡಾ. ನಿರಂಜನ್ ನಿಷ್ಠಿ ದೀಪ ಬೆಳಗಿಸಿ ಉದ್ಘಾಟಿಸಿದರು
ರಾಷ್ಟ್ರೀಯ ಶಿಕ್ಷಣ ನೀತಿ ವಿಚಾರ ಸಂಕಿರಣವನ್ನು ವಿ.ವಿ. ಕುಲಪತಿ ಡಾ. ನಿರಂಜನ್ ನಿಷ್ಠಿ ದೀಪ ಬೆಳಗಿಸಿ ಉದ್ಘಾಟಿಸಿದರು   

ಕಲಬುರ್ಗಿ: ‘ಭಾರತದ ಪ್ರಾಚೀನ ವಿಶ್ವವಿದ್ಯಾಲಯಗಳಾದ ನಳಂದ ಮತ್ತು ತಕ್ಷಶಿಲಾವಿಶ್ವವಿದ್ಯಾಲಯಗಳು ವಿದೇಶಿ ಸಂಶೋಧಕರಿಗೆ ಜ್ಞಾನದ ಮೂಲಗಳಾಗಿವೆ. ನಮ್ಮ ಯುವಕರು ಸಂಶೋಧನಾ ಚಟುವಟಿಕೆಗಳಿಗಾಗಿ ವಿದೇಶಕ್ಕೆ ಪ್ರಯಾಣ ಬೆಳೆಸುವ ಪ್ರವೃತ್ತಿಯನ್ನು ತಡೆಯುವುದು ರಾಷ್ಟ್ರೀಯ ಶಿಕ್ಷಣ ನೀತಿ–2019ರ ಮೂಲಕ ಸಾಧ್ಯವಾಗುತ್ತದೆ’ ಎಂದು ಶರಣಬಸವ ವಿಶ್ವವಿದ್ಯಾಲಯದ ಕುಲಪತಿ ಡಾ. ನಿರಂಜನ್ ನಿಷ್ಠಿ ಅಭಿಪ್ರಾಯಪಟ್ಟರು.

‌ನಗರದ ಶರಣಬಸವ ವಿಶ್ವವಿದ್ಯಾಲಯದಲ್ಲಿ ಸೋಮವಾರ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ‘ರಾಷ್ಟ್ರೀಯ ಶಿಕ್ಷಣ ನೀತಿ –2019ರ ಅವಲೋಕನ’ ಎಂಬ ವಿಷಯ ಕುರಿತು ವಿಚಾರ ಮಂಡಿಸಿದ ಅವರು, ‘ದೇಶದ ಒಟ್ಟು ಉತ್ಪನ್ನದಲ್ಲಿ (ಜಿಡಿಪಿ) ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಿಗೆ ಹೆಚ್ಚಿನ ವ್ಯಯ ಮಾಡಲಾಗುತ್ತಿದೆ. ದೇಶದಲ್ಲಿ ಮಂದಗತಿಯಲ್ಲಿ ಸಾಗುತ್ತಿರುವ ಯೋಜನೆಗಳಿಂದ ದೇಶದ ಅಭಿವೃದ್ಧಿ ಸಾಧ್ಯವಾಗುತ್ತಿಲ್ಲ. ಹೀಗಾಗಿ ಭಾರತ ಬಡದೇಶವಾಗಿದೆ’ ಎಂದು ವಿಷಾದಿಸಿದರು.

ವಿ.ವಿ. ಕುಲಸಚಿವ ಡಾ. ಅನೀಲಕುಮಾರ ಬಿಡವೆ ಮಾತನಾಡಿ, ‘ರಾಷ್ಟ್ರೀಯ ಶಿಕ್ಷಣ ನೀತಿಯು ದೇಶದ ಸುಸ್ಥಿರತೆಯನ್ನು ಪರಿವರ್ತಿಸಲು ಸಹಾಯ ಮಾಡುತ್ತದೆ. ಸಮಾನತೆ ಮತ್ತು ಉನ್ನತ ಮಟ್ಟದ ಜ್ಞಾನದ ಆಧಾರದ ಮೇಲೆ ಸಮಾಜ ನಿರ್ಮಾಣಗೊಳ್ಳಲು ಸಹಕಾರಿಯಾಗಿದೆ. ಈ ನೀತಿಯು ಎಲ್ಲರಿಗೂ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುವ ಗುರಿ ಹೊಂದಿದೆ’ ಎಂದರು.

ADVERTISEMENT

ವಿ.ವಿ. ಸಮಕುಲಪತಿ ಡಾ.ವಿ.ಡಿ.ಮೈತ್ರಿ, ‘ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಪ್ರಸ್ತಾಪಿಸಲಾದ ಎಲ್ಲ ಪ್ರಮುಖ ಬದಲಾವಣೆ ಅಂಶಗಳು ಅಭಿವೃದ್ಧಿ ಹೊಂದಿದ ದೇಶದಲ್ಲಿ ಚಾಲ್ತಿಯಲ್ಲಿವೆ. ಈ ದೇಶಗಳಿಗೆ ಹೋಲಿಸಿದರೆ ಭಾರತ ಶೈಕ್ಷಣಿಕವಾಗಿ ಹಿನ್ನಡೆಯಲ್ಲಿದೆ’ ಎಂದರು.

ಡಾ. ಶಿವಕುಮಾರ ಜವಳಗಿ ನಿರೂಪಿಸಿದರು. ಪ್ರೊ. ಶೋಭನಾ ಪ್ರಾರ್ಥಿಸಿದರು. ಮೌಲ್ಯಮಾಪನ ಕುಲಸಚಿವ ಡಾ. ಲಿಂಗರಾಜ ಶಾಸ್ತ್ರಿ ಸ್ವಾಗತಿಸಿದರು. ಅಧಿವೇಶನದಲ್ಲಿ 200ಕ್ಕೂ ಹೆಚ್ಚು ಪ್ರಾಧ್ಯಾಪಕರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.