ADVERTISEMENT

ಸತ್ಯ ಹೇಳುವುದು ದ್ವೇಷ ಭಾಷಣ ಹೇಗಾಗುತ್ತದೆ: ಆಂದೋಲಾದ ಸಿದ್ದಲಿಂಗ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2025, 6:03 IST
Last Updated 9 ಡಿಸೆಂಬರ್ 2025, 6:03 IST
ಸಿದ್ದಲಿಂಗ ಸ್ವಾಮೀಜಿ
ಸಿದ್ದಲಿಂಗ ಸ್ವಾಮೀಜಿ   

ಕಲಬುರಗಿ: ‘ರಾಜ್ಯ ಸರ್ಕಾರ ಹಿಂದೂ ಸಮಾಜದ ನಾಯಕರನ್ನು ಗುರಿಯಾಗಿಸಿಕೊಂಡು ದ್ವೇಷ ಭಾಷಣ ಮತ್ತು ದ್ವೇಷಾಪರಾಧಗಳ ಕಾಯ್ದೆ ಜಾರಿಗೆ ಮುಂದಾಗಿದೆ’ ಎಂದು ಶಿವಸೇನಾ ರಾಜ್ಯ ಘಟಕದ ಅಧ್ಯಕ್ಷ ಆಂದೋಲಾದ ಸಿದ್ದಲಿಂಗ ಸ್ವಾಮೀಜಿ ಆರೋಪಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹಿಂದೂ ಸಮಾಜದ ನಾಯಕರು ಜನರಿಗೆ ಸತ್ಯವನ್ನು ದಾಟಿಸುವ ಕೆಲಸ ಮಾಡುತ್ತಿದ್ದಾರೆ. ಸತ್ಯ ಹೇಳುವುದು ದ್ವೇಷ ಭಾಷಣ ಹೇಗಾಗುತ್ತದೆ? ಎಲ್ಲ ಧರ್ಮ ಹಾಗೂ ಸಮಾಜದವರಿಗೂ ಇದು ಅನ್ವಯವಾಗಲಿದೆ ಎಂದು ಸುಳ್ಳು ಹೇಳಲಾಗುತ್ತಿದೆ. ಹಿಂದೂ ನಾಯಕರ ವಾಕ್ ಸ್ವಾತಂತ್ರ್ಯದ ಹಕ್ಕನ್ನು ಕಿತ್ತುಕೊಳ್ಳುವ ಹುನ್ನಾರ ಇದು’ ಎಂದರು.

‘ಬಿಜೆಪಿ ಜಾರಿಗೆ ತಂದಿದ್ದ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಹಾಗೂ ಸಂರಕ್ಷಣಾ ಕಾಯ್ದೆಗೆ ತಿದ್ದುಪಡಿ ತರಲು ರಾಜ್ಯ ಸರ್ಕಾರ ಮುಂದಾಗಿದೆ. ಇದರಿಂದ ಗೋ ಅಕ್ರಮ ಸಾಗಣೆದಾರರಿಗೆ ಅನುಕೂಲ ಮಾಡಿಕೊಟ್ಟಂತಾಗುತ್ತದೆ. ಗೋ ಹತ್ಯೆ ಹೆಚ್ಚಲಿದೆ. ಇದು ಮುಸ್ಲಿಂ ತುಷ್ಟೀಕರಣದ ಪರಮಾವಧಿಯಾಗಿದೆ’ ಎಂದ ಹೇಳಿದರು.

ADVERTISEMENT

‘ಘಟನೆ ನಡೆದ 33 ವರ್ಷಗಳ ಬಳಿಕ ಸಾಹಿತಿ ಬಾನು ಮುಷ್ತಾಕ್ ಬಾಬರಿ ಮಸೀದಿ ಧ್ವಂಸದ ಕುರಿತು, ‘ಧ್ವಂಸಗೊಂಡಿದ್ದು, ಮಸೀದಿಯಲ್ಲ. ಭಾರತದ ಭಾತೃತ್ವದ ಭಾವನೆ’ ಎಂದು ಹೇಳಿದ್ದಾರೆ. ದೇಶದ ವಿವಿಧೆಡೆ ವಿಧ್ವಂಸಕ ಕೃತ್ಯಗಳು ನಡೆದಾಗ ಅವರಿಗೆ ಭಾರತದ ಭಾತೃತ್ವ ಭಾವನೆಗೆ ಧಕ್ಕೆಯಾಗಿದೆ ಎಂದು ಯಾಕೆ ಅನಿಸಲಿಲ್ಲ? ಇದು ಅವರ ಮಾನಸಿಕತೆಯನ್ನು ತೋರಿಸುತ್ತದೆ’ ಎಂದರು.

ಸಹಿ ಸಂಗ್ರಹ ಅಭಿಯಾನ: ಕಾಂಗ್ರೆಸ್ ಸರ್ಕಾರದ ಈ ನೀತಿ ವಿರೋಧಿಸಿ ಡಿಸೆಂಬರ್ 11ರಂದು ನಗರದ ಎಸ್‌ವಿಪಿ ವೃತ್ತದಲ್ಲಿ ಸಹಿ ಸಂಗ್ರಹ ಅಭಿಯಾನ ನಡೆಸಲಾಗುವುದು. ಬಳಿಕ ರಾಜ್ಯಪಾಲರಿಗೆ ದೂರು ನೀಡಲಾಗುವುದು ಎಂದು ತಿಳಿಸಿದರು.

ಮುಖಂಡರಾದ ಬಾಗೇಶ, ರಾಕೇಶ ಜಮಾದಾರ ಹಾಗೂ ಸುರೇಶ ತಳವಾರ ಸೇರಿ ಹಲವರು ಹಾಜರಿದ್ದರು.

ಪಾಲಿಕೆಯಲ್ಲಿ ಭ್ರಷ್ಟಾಚಾರ: ಆರೋಪ

‘ಮಹಾನಗರ ಪಾಲಿಕೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಹಣ ಪಡೆದು ಆಂತರಿಕ ವರ್ಗಾವಣೆ ಮಾಡಲಾಗುತ್ತಿದೆ’ ಎಂದು ಸಿದ್ದಲಿಂಗ ಸ್ವಾಮೀಜಿ ಆರೋಪಿಸಿದರು. ‘ಮಹಾನಗರ ಪಾಲಿಕೆಯು ಮೂರು ವಲಯಗಳನ್ನು ಹೊಂದಿದೆ. ಒಂದನೇ ವಲಯದಲ್ಲಿ 14 2ನೇ ವಲಯದಲ್ಲಿ 20 ಹಾಗೂ ಮೂರನೇ ವಲಯದಲ್ಲಿ 21 ವಾರ್ಡ್‌ಗಳಿವೆ. 2 ಮತ್ತು 3ನೇ ವಲಯಗಳ ವ್ಯಾಪ್ತಿಯಲ್ಲಿ ಹೆಚ್ಚು ವಾಣಿಜ್ಯ ಸಂಕೀರ್ಣಗಳಿದ್ದರೂ ವಾರ್ಷಿಕವಾಗಿ ಕೇವಲ ₹4–5 ಕೋಟಿ ತೆರಿಗೆ ಸಂಗ್ರಹವಾಗುತ್ತಿದೆ. 1ನೇ ವಲಯದಲ್ಲಿ ವಾರ್ಷಿಕವಾಗಿ ₹20 ಕೋಟಿ ತೆರಿಗೆ ಸಂಗ್ರಹವಾಗುತ್ತಿದೆ. ಜನ ಸಾಮಾನ್ಯರಿಗೆ ತೆರಿಗೆ ಕಟ್ಟುವಂತೆ ಅಧಿಕಾರಿಗಳು ಕಿರುಕುಳ ಕೊಡುತ್ತಾರೆ. ಆದರೆ ದೊಡ್ಡವರ ಬಳಿ ತೆರಿಗೆ ಕಟ್ಟಿಸಿಕೊಳ್ಳುವುದಿಲ್ಲ’ ಎಂದು ದೂರಿದರು.

‘ಕೆಬಿಎನ್‌ ಸಂಸ್ಥೆಯವರು ₹ 17 ಕೋಟಿ ತೆರಿಗೆ ಬಾಕಿ ಉಳಿಸಿಕೊಂಡಿದ್ದಾರೆ. ಅದನ್ನು ಅಧಿಕಾರಿಗಳು ವಸೂಲಿ ಮಾಡುತ್ತಿಲ್ಲ. ಮೋದಿ ಬೂಟು ಸೂಟಿನ ಕುರಿತು ಮಾತನಾಡುವ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಯ ಸಮಸ್ಯೆಗಳ ಕುರಿತು ಯಾಕೆ ಮಾತನಾಡುವುದಿಲ್ಲ’ ಎಂದು ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.