ಕಲಬುರ್ಗಿ: ಉಪ ಚುನಾವಣೆ ನಂತರ ಬಿಜೆಪಿ ಸರ್ಕಾರ ಪತನವಾಗಲಿದೆ. ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನ ಗೆಲ್ಲುವ ಮೂಲಕ ಅಧಿಕಾರ ರಚಿಸಲಿದೆ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಭವಿಷ್ಯ ನುಡಿದರು.
ಕರ್ನಾಟಕ ಪ್ರದೇಶ ಕುರುಬರ ಸಂಘದ ಕಲಬುರ್ಗಿ ಜಿಲ್ಲಾ ಘಟಕ ಹಾಗೂ ಕುರುಬ ಗೊಂಡ ನೌಕರರ ಸಂಘದ ವತಿಯಿಂದ ನಗರದಲ್ಲಿ ಭಾನುವಾರ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದ ಅವರು, ‘ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡರ ಅವರು ತಮ್ಮ ಪಕ್ಷ ಇನ್ನುಮುಂದೆ ಏಕಾಂಗಿಯಾಗಿ ಸ್ಪರ್ಧಿಸಲಿ ಎಂದಿದ್ದಾರೆ. ಹೀಗಾಗಿ ಅವರ ಜೊತೆ ಮೈತ್ರಿ ಪ್ರಶ್ನೆಯೇ ಯಿಲ್ಲ. ಏಕಾಂಗಿಯಾಗಿಯೇ ಕಾಂಗ್ರೆಸ್ ಚುನಾವಣೆ ಎದುರಿಸಲಿದೆ ಎಂದರು.
‘ಚುನಾವಣಾ ಆಯೋಗ ಬಿಜೆಪಿ ಅಣತಿಯಂತೆ ಕೆಲಸ ಮಾಡುತ್ತಿದೆ. ಅನರ್ಹ ಶಾಸಕರಿಗೆ ಅನುಕೂಲವಾಗಲೆಂದೇ ಚುನಾವಣೆಯನ್ನು 65 ದಿನ ಮುಂಚಿತವಾಗಿ ಘೋಷಿಸಲಾಗಿದೆ. ಮೊದಲು ಚುನಾವಣೆ ಘೋಷಣೆ ಮಾಡಿದ ಆಯೋಗ ನಂತರ ರದ್ದು ಮಾಡಿತು. ಇದೀಗ ಏಕಾಏಕಿ ಮತ್ತೆ ಉಪ ಚುನಾವಣೆ ದಿನಾಂಕ ಘೋಷಿಸಿದೆ. ಬಿಜೆಪಿಯ ಅಣತಿಯಂತೆ ಆಯೋಗ ನಡೆದುಕೊಳ್ಳುತ್ತಿದೆ ಎಂಬುದಕ್ಕೆ ಈ ಬೆಳವಣಿಗೆಗಳ ಸಾಕ್ಷಿ. ಅವರು ಏನೇ ಮಾಡಿದರೂ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನ ಗೆಲ್ಲಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪಕ್ಷದಲ್ಲಿ ಭಿನ್ನಾಭಿಪ್ರಾಯವಿಲ್ಲ: ಕಾಂಗ್ರೆಸ್ ನಾಯಕರ ಮಧ್ಯೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಎಲ್ಲವೂ ಮಾಧ್ಯಮಗಳಲ್ಲಿ ಮಾತ್ರ ಕಾಣುತ್ತಿದೆ. ಪಕ್ಷದಲ್ಲಿ ಯಾರು ಯಾರನ್ನೂ ಮೂಲೆಗುಂಪು ಮಾಡಲು ಸಾಧ್ಯವಿಲ್ಲ.ಕೆ.ಎಚ್.ಮುನಿಯಪ್ಪ ನನಗೆ ಏಕವಚನದಲ್ಲಿ ಮಾತನಾಡಿಲ್ಲ.ನಾನೂ ಅವರನ್ನು ಏಕವಚನದಿಂದ ಮಾತನಾಡಿಸಿಲ್ಲ.ಏಕ ವಚನದಲ್ಲಿ ಮಾತಾಡಿ, ಬೈದಾಡಿದ್ದಾರೆ ಎಂಬುದೆಲ್ಲಾ ಸುಳ್ಳು.ನಾವೆಲ್ಲರೂ ಗೆಳೆಯರು, ಭಿನ್ನ ಅಭಿಪ್ರಾಯಗಳಿವೆ. ಹಾಗೆಂದು ವೈರಿಗಳಂತೆ ಪರಸ್ಪರ ದ್ವೇಷಿಸಿಕೊಳ್ಳುತ್ತಿಲ್ಲ’ ಎಂದು ಸ್ಪಷ್ಟಪಡಿಸಿದರು.
ಬರೀ ಘೋಷಣೆ ಸಾಲದು: ಹೈದರಾಬಾದ್ ಕರ್ನಾಟಕ ಹೆಸರನ್ನು ಕಲ್ಯಾಣ ಕರ್ನಾಟಕ ಎಂದು ಬದಲಿಸಿದರಷ್ಟೇ ಸಾಲದು. ಈಗ ಪ್ರತಿವರ್ಷ ಮೀಸಲಿಡುವ ₹ 1500 ಕೋಟಿ ಅನುದಾನವನ್ನು ₹ 3 ಸಾವಿರ ಕೋಟಿಗೆ ಹೆಚ್ಚಿಸಿದರೆ ಹೆಸರು ಬದಲಿಸಿದ್ದಕ್ಕೆ ಅರ್ಥ ಬರುತ್ತದೆ ಎಂದರು.
‘ಬೀದರ್, ಕಲಬುರ್ಗಿ, ಯಾದಗಿರಿ ಜಿಲ್ಲೆಯ ಕುರುಬ, ಕಾಡು ಕುರುಬ, ಜೇಣು ಕುರುಬ, ಗೊಂಡ, ರಾಜ ಗೊಂಡ, ಹಾಲುಮತ ಸಮುದಾಯದವರನ್ನು ಪರಿಶಿಷ್ಟ ಪಂಗಡದ ಪಟ್ಟಿಯಲ್ಲಿ ಸೇರಿಸುವಂತೆ ನಾನು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ್ದೇನೆ. ಸಿಂಧುತ್ವ ಪ್ರಮಾಣಪತ್ರ ನೀಡುವಾಗ ಅಧಿಕಾರಿಗಳು ತಕರಾರು ಮಾಡಿದರೆ ನನ್ನ ಗಮನಕ್ಕೆ ತನ್ನಿ’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.