ADVERTISEMENT

ಲಾಟರಿ ಮೂಲಕ ಕುಸನೂರ ಬಡಾವಣೆ ನಿವೇಶನ ಹಂಚಿಕೆ

ಬೆಳಿಗ್ಗೆಯಿಂದ ರಾತ್ರಿಯವರೆಗೂ ನಡೆದ 1302 ನಿವೇಶನ ಹಂಚಿಕೆ ಪ್ರಕ್ರಿಯೆ

​ಪ್ರಜಾವಾಣಿ ವಾರ್ತೆ
Published 18 ಮೇ 2022, 4:06 IST
Last Updated 18 ಮೇ 2022, 4:06 IST
ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಯಾಘನ ಧಾರವಾಡಕರ ಲಾಟರಿ ಎತ್ತುವ ಮೂಲಕ ನಿವೇಶನ ಹಂಚಿಕೆಗೆ ಚಾಲನೆ ನೀಡಿದರು. ಆಯುಕ್ತ ದಯಾನಂದ ಪಾಟೀಲ ಇತರರು ಇದ್ದರು
ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಯಾಘನ ಧಾರವಾಡಕರ ಲಾಟರಿ ಎತ್ತುವ ಮೂಲಕ ನಿವೇಶನ ಹಂಚಿಕೆಗೆ ಚಾಲನೆ ನೀಡಿದರು. ಆಯುಕ್ತ ದಯಾನಂದ ಪಾಟೀಲ ಇತರರು ಇದ್ದರು   

ಕಲಬುರಗಿ: ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಕುಸನೂರ ವಸತಿ ಬಡಾವಣೆಯಲ್ಲಿ ಅಭಿವೃದ್ಧಿಪಡಿಸಲಾದ 1302 ನಿವೇಶನಗಳನ್ನು ಇಲ್ಲಿನ ಗುಲಬರ್ಗಾ ವಿ.ವಿ.ಯ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಲಾಟರಿ ಮೂಲಕ ಹಂಚಿಕೆ ಮಾಡಲಾಯಿತು.

30x40 ಅಳತೆಯ 561, 40x60 ಅಳತೆಯ 142, 30x50 ಅಳತೆಯ 190, 20x30 ಅಳತೆಯ 409 ನಿವೇಶನಗಳನ್ನು ಹಂಚಲಾಯಿತು. ಬೆಳಿಗ್ಗೆ ಆರಂಭವಾದ ಕಾರ್ಯಕ್ರಮ ರಾತ್ರಿಯವರೆಗೂ ನಡೆಯಿತು.

ಪ್ರಾಧಿಕಾರದ ಅಧ್ಯಕ್ಷ ದಯಾಘನ ಧಾರವಾಡಕರ ಅವರು ಲಾಟರಿ ಎತ್ತುವ ಮೂಲಕ ನಿವೇಶನಗಳನ್ನು ಹಂಚಿದರು. 1989 ಜನರು ಅರ್ಜಿ ಸಲ್ಲಿಸಿದ್ದರು.

ADVERTISEMENT

ಕ್ರೀಡೆ ಹಾಗೂ ಪತ್ರಕರ್ತರ ಕೋಟಾದಲ್ಲಿಯೂ ನಿವೇಶನಗಳನ್ನು ಹಂಚಲಾಯಿತು.

ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ದಯಾಘನ, ‘ಕುಸನೂರ ಬಡಾವಣೆ ಯೋಜನೆ ನಾಲ್ಕೈದು ವರ್ಷದ ಹಿಂದಿನ ಯೋಜನೆಯಾಗಿದೆ. ಕಾರಣಾಂತರದಿಂದ‌ ನನೆಗುದಿಗೆ ಬಿದ್ದಿದ್ದ ಈ ಯೋಜನೆಗೆ ಎದುರಾದ ಸಮಸ್ಯೆಗಳನ್ನು ನಿವಾರಿಸಿ ನಿವೇಶನ ಹಂಚಿಕೆ ಪಾರದರ್ಶಕವಾಗಿ ಮಾಡಲಾಗಿದೆ. ಮುಂದಿನ ದಿನದಲ್ಲಿ ಇಂತಹ ಯೋಜನೆಗಳನ್ನು ನಿರಂತರವಾಗಿ ಜಾರಿಗೆ ತರಲಾಗುವುದು’ ಎಂದರು.

ನಗರದ ಶರಣಬಸವೇಶ್ವರ ಕೆರೆಯ ಒಂದು ಭಾಗದಲ್ಲಿ ಈಗಾಗಲೇ ಮಹಾನಗರ ಪಾಲಿಕೆ ಮತ್ತು ಕೆಕೆ‌ಆರ್‌ಡಿಬಿ ಜಂಟಿಯಾಗಿ ಅಭಿವೃದ್ಧಿಪಡಿಸುತ್ತಿದ್ದು, ಅದೇ ರೀತಿಯಾಗಿ ಇನ್ನೊಂದು ಭಾಗದಲ್ಲಿ ಪ್ರಾಧಿಕಾರವು ₹ 10 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಿದೆ ಎಂದರು.

ಕೆಕೆಆರ್‌ಡಿಬಿ ಅನುದಾನದೊಂದಿಗೆ ಈಗಾಗಲೇ ನಗರದ ಕಣ್ಣಿ ತರಕಾರಿ ಮಾರುಕಟ್ಟೆ ಕಾಮಗಾರಿಗೆ ಶಂಕುಸ್ಥಾಪನೆ‌ ನೆರವೇರಿಸಿದ್ದು, ಮುಂದಿನ 2 ತಿಂಗಳಲ್ಲಿ ಕಾಮಗಾರಿ ಆರಂಭಗೊಳ್ಳಲಿದೆ‌. ಇದರಿಂದ ಬೀದಿಯಲ್ಲಿ ತರಕಾರಿ‌ ಮಾರುತ್ತಿದ್ದ ರೈತಾಪಿ ಜನರಿಗೆ ಸುಸಜ್ಜಿತ ಸ್ಥಳ ದೊರೆಯಲಿದೆ ಎಂದು ಹೇಳಿದರು.

ಪ್ರಾಧಿಕಾರದ ಆಯುಕ್ತ ದಯಾನಂದ ಪಾಟೀಲ ಮಾತನಾಡಿ, ನಗರಾಭಿವೃದ್ಧಿ ಪ್ರಾಧಿಕಾರದಿಂದ 90.17 ಎಕರೆ ಪ್ರದೇಶದಲ್ಲಿ ಅಭಿವೃದ್ಧಿಪಡಿಸಲಾದ ಕುಸನೂರ ವಸತಿ ಯೋಜನೆಯಡಿ ಒಟ್ಟು 1490 ನಿವೇಶನಗಳಿದ್ದು, ಇದರಲ್ಲಿ ಮೂಲೆ‌ ನಿವೇಶನ 188 ಹೊರತುಪಡಿಸಿ 1302 ನಿವೇಶನಗಳನ್ನು ಹರಾಜಿಗೆ ಇಡಲಾಗಿದೆ. 1302 ನಿವೇಶನಕ್ಕೆ 1989 ಅರ್ಜಿ ಸ್ವೀಕೃತಗೊಂಡಿರುವುದರಿಂದ ಪ್ರವರ್ಗವಾರು ಲಾಟರಿ ಮೂಲಕ‌ ಪಾರದರ್ಶಕವಾಗಿ ಹಂಚಿಕೆ ಪ್ರಕ್ರಿಯೆ‌ ನಡೆಸಲಾಗಿದೆ ಎಂದರು.

ಕರ್ನಾಟಕ ಗೃಹ ಮಂಡಳಿಯ ಕಾರ್ಯನಿರ್ವಾಹಕ ಎಂಜಿನಿಯರ್ ಮುರಳಿಧರ ದೇಶಮುಖ, ಪ್ರಾಧಿಕಾರದ ನಗರ ಯೋಜನಾ ಸದಸ್ಯ ಎಸ್.ಎಸ್.ಗಾರಂಪಳ್ಳಿ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ದಿಲೀಪ್ ಜಾಧವ, ಕಾರ್ಯದರ್ಶಿ ವೀಣಾ ಕುಲಕರ್ಣಿ ಇದ್ದರು. ಸುಬ್ಬರಾವ್ ನಿರ್ವಹಣೆ‌ ಮಾಡಿದರು.

ಪ್ರಾಧಿಕಾರದ ಸಿಬ್ಬಂದಿ ಹಂಚಿಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.