ಕಲಬುರ್ಗಿ: ‘ಕಾಲಕ್ಕೆ ತಕ್ಕಂತೆ ವಿನೂತನ ಪ್ರಯೋಗಗಳ ಮೂಲಕ ನವ ಉದ್ಯಮಗಳನ್ನು ಸ್ಥಾಪಿಸಬೇಕು. ಆಗ ಮಾತ್ರ ಯಶಸ್ವಿ ಉದ್ಯಮಿ ಆಗಲು ಸಾಧ್ಯ’ ಎಂದು ವಿಧಾನ ಪರಿಷತ್ ಸದಸ್ಯ, ಎಸ್ಬಿಪಿ ಸಮೂಹ ಸಂಸ್ಥೆಗಳ ಮುಖ್ಯಸ್ಥ ಬಿ.ಜಿ. ಪಾಟೀಲ ಕಿವಿಮಾತು ಹೇಳಿದರು.
ಹೈದರಾಬಾದ್ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕೋದ್ಯಮಿಗಳ ಸಂಸ್ಥೆ ಹಾಗೂ ರೋಟರಿ ಕ್ಲಬ್ ಆಫ್ ಗುಲಬರ್ಗಾ ಸನ್ಸಿಟಿ ಆಶ್ರಯದಲ್ಲಿ ನಗರದಲ್ಲಿ ಭಾನುವಾರ ಯುವ ಉದ್ಯಮಿಗಳಿಗಾಗಿ ಆಯೋಜಿಸಿದ್ದ ‘ಉದ್ಯಮಶೀಲತಾ ಉಪನ್ಯಾಸ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಈಗ ಪೈಪೋಟಿ ಮಿತಿ ಮೀರಿದೆ. ಎಲ್ಲರೂ ಒಂದೇ ರೀತಿಯ ಉದ್ಯಮ, ಕೈಗಾರಿಕೆಗಳನ್ನು ಪ್ರಾರಂಭಿಸಿದರೆ ಉತ್ಪಾದನೆ ಹೆಚ್ಚುತ್ತದೆ. ಆದರೆ, ವ್ಯಾಪಾರದಲ್ಲಿ ಅನಾರೋಗ್ಯಕರ ಪೈಪೋಟಿ ಏರ್ಪಡುತ್ತದೆ. ಇದರಿಂದ ತಪ್ಪಿಸಿಕೊಳ್ಳಲು ಯುವ ಉದ್ಯಮಿಗಳು ನವ– ನವೀನ ಮಾದರಿಗಳನ್ನು ಅನುಸರಿಸಬೇಕು’ ಎಂದರು.
‘ಈಗಿನ ಪರಿಸ್ಥಿತಿಯಲ್ಲಿ ಉದ್ಯಮ, ವ್ಯಾಪಾರ ಮಾಡುವುದು ಸುಲಭದ ಮಾತಲ್ಲ. ಈ ಹಿಂದೆ ಪೈಪೋಟಿ ಕಡಿಮೆ ಇದ್ದು, ನಿಯಮಗಳೂ ಸಡಿಲವಾಗಿದ್ದವು. ಹಾಗಾಗಿ ಉದ್ಯಮ ಸ್ಥಾಪನೆ ಸರಳವಾಗಿತ್ತು. ಈಗ ಜಾಗತಿಕ ಮಟ್ಟದಲ್ಲಿ ಪೈಪೋಟಿ ನಡೆಸುವ ಸ್ಥಿತಿ ನಿರ್ಮಾಣವಾಗಿದೆ’ ಎಂದರು.
ಇದಕ್ಕೂ ಹೈದರಾಬಾದ್ ರಿಟೇಲ್ ಶಾಫಿ ರಿಟೇಲ್ ಲಿಮಿಟೆಡ್ ಸಂಸ್ಥಾಪಕ ದುರ್ಗೇಶ ಗುಪ್ತಾಮುನ್ನ ದಿಕ್ಸೂಚಿ ಭಾಷಣ ಮಾಡಿದರು. ಎಚ್ಕೆಸಿಸಿಐ ಅಧ್ಯಕ್ಷ ಅಮರನಾಥ ಸಿ.ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ದಾವಣಗೆರೆಯ ರೋಟರಿ ಗವರ್ನರ್ ನಯನ್ ಪಾಟೀಲ, ಬೆಂಗಳೂರಿನ ಬಿಸಿನೆಸ್ ಕನ್ಸಲ್ಟಂಟ್ ಡಾ.ಎ.ಬಾಲಮುರುಗನ್, ಎಚ್ಕೆಸಿಸಿಐ ಉಪಾಧ್ಯಕ್ಷ ಶರಣು ಪಪ್ಪಾ, ಶಶಿಕಾಂತ ಪಾಟೀಲ, ರೋಟರಿ ಕ್ಲಬ್ನ ಮಲ್ಲಿಕಾರ್ಜುನ ಮಹಾಂತಗೋಳ, ಉಮೇಶ ಪಾಟೀಲ, ಜಗದೀಶ ಮಾಲು, ಚೇಂಬರ್ ಸದಸ್ಯರಾದ ಚನ್ನಬಸಯ್ಯ ನಂದಿಕೋಲ, ಗೋಪಾಲ ಬುಚನಳ್ಳಿ, ಆನಂದ ದಂಡೋತಿ, ಮನೀಷ್ ಜಾಜು ಇದ್ದರು.
ಉದ್ಯಮಿಗಳಾದ ಪ್ರಶಾಂತ ಮಾನಕರ್, ಶಿವರಾಜ ಇಂಗಿನಶೆಟ್ಟಿ, ಅರುಣಕುಮಾರ ಪಪ್ಪಾ, ಅನಂತ ಚಿಂಚೂರೆ, ಮಣಿಲಾಲ್ ಷಾ, ಆರ್.ಕೆ.ಜಗದೀಶ, ರವಿಕುಮಾರ ಸರಸಂಬಿ, ಬಾಬುರಾವ ಶೇರಿಕಾರ, ಸೋಮಶೇಖರ ಸೇರಿದಂತೆ ಯುವ ಉದ್ಯಮಿಗಳು, ಚೇಂಬರ್ ಸದಸ್ಯರು, ವ್ಯವಸ್ಥಾಪನ ಶಿಕ್ಷಣ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.