ADVERTISEMENT

ಚಿಮ್ಮನಚೋಡ: ಬಸ್ಸಿಗಾಗಿ ವಿದ್ಯಾರ್ಥಿಗಳ ಮಿಂಚಿನ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2023, 5:59 IST
Last Updated 17 ನವೆಂಬರ್ 2023, 5:59 IST
<div class="paragraphs"><p>ಪ್ರತಿಭಟನಾ ನಿರತ ವಿದ್ಯಾರ್ಥಿಗಳು</p></div>

ಪ್ರತಿಭಟನಾ ನಿರತ ವಿದ್ಯಾರ್ಥಿಗಳು

   

ಚಿಂಚೋಳಿ ( ಕಲಬುರಗಿ) : ತಾಲ್ಲೂಕಿನ ಚಿಮ್ಮನಚೋಡದಲ್ಲಿ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಶುಕ್ರವಾರ ಬೆಳಿಗ್ಗೆ ಮಿಂಚಿನ ಪ್ರತಿಭಟನೆ ನಡೆಸಿದರು.

ವರ್ಷದ ಹಿಂದೆ ಘಟಕ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿ ಬಸ್ ಸೌಲಭ್ಯ ಕಲ್ಪಿಸಲು ಕೋರಿಕೊಂಡರೂ ಪ್ರಯೋಜನವಾಗಿಲ್ಲ ಎಂದು ಆರೋಪಿಸಿ ವಿದ್ಯಾರ್ಥಿಗಳು ಹಾಗೂ ಪಾಲಕರು ದಿಢೀರ್ ರಸ್ತೆ ತಡೆ ನಡೆಸಿದರು. ಬೆಳಿಗ್ಗೆ 9 ಗಂಟೆಯಿಂದ ರಸ್ತೆ ತಡೆ ಆರಂಭಿಸಿದ ವಿದ್ಯಾರ್ಥಿಗಳು ಅಧಿಕಾರಿಗಳ ಮನವಿಗೆ ಸ್ಪಂದಿಸದೇ ಸಮಸ್ಯೆ ಪರಿಹರಿಸುವವರೆಗೆ ಸ್ಥಳಬಿಟ್ಟು ಕದಲುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತರು.

ADVERTISEMENT

ಚಿಮ್ಮನಚೋಡದಿಂದ ಚಿಂಚೋಳಿಗೆ ಹೋಗಲು‌ ಬಸ್ ಸೌಲಭ್ಯವಿಲ್ಲದ ಕಾರಣ ವಿದ್ಯಾರ್ಥಿಗಳು ತೊಂದರೆ ಎದುರಿಸುತ್ತಿದ್ದಾರೆ. ಬೆಳಿಗ್ಗೆ ಕಲಬುರಗಿಯಿಂದ ಚಂದನಕೇರಾ ಮಾರ್ಗವಾಗಿ ಚಿಮ್ಮನಚೋಡ ಮೂಲಕ ಚಿಂಚೋಳಿಗೆ ಬಸ್ ಹೋಗುತ್ತದೆ. ಆದರೆ ಇದು ಅಲ್ಲಿಂದಲೇ ಪ್ರಯಾಣಿಕರಿಂದ ತುಂಬಿ ತುಳುಕುತ್ತಿರುತ್ತದೆ. ಹುಮನಾಬಾದ್ ಕಡೆಯಿಂದ ಬರುವ ಬಸ್ಸಿನ ಸ್ಥಿತಿಯೂ ಇದೇ ಆಗಿದೆ. ಹಾಗಾಗಿ ಬೆಳಿಗ್ಗೆ 8.30ಕ್ಕೆ ರಾಣಾಪುರ ಕ್ರಾಸ್ ನಿಂದ ಚಿಮ್ಮನಚೋಡ ಮೂಲಕ ಚಿಂಚೋಳಿ ಮತ್ತು ಬೆಳಿಗ್ಗೆ 9.30ಕ್ಕೆ ಸಲಗರ ಬಸಂತಪುರದಿಂದ ಚಿಮ್ಮನಚೋಡ ಮೂಲಕ ಚಿಂಚೋಳಿ ತೆರಳಲು ಎರಡು ಬಸ್ ಹಾಕಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ದಿಢೀರ್ ರಸ್ತೆತಡೆ ನಡೆಸಿದ ವಿದ್ಯಾರ್ಥಿಗಳು ಹಾಗೂ ಪಾಲಕರು

ಇದರಿಂದ ರಾಣಾಪುರ ತಾಂಡಾ, ನರನಾಳ, ನಾಗರಾಳ, ಸಲಗರ ಬಸಂತಪುರ, ತಾಜಲಾಪುರ, ಖೋದವಂದಪುರ, ದೋಟಿಕೊಳ, ಕನಕಪುರ, ಗಾರಂಪಳ್ಳಿ, ಹೂಡದಳ್ಳಿಯ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದರು.

ಪ್ರತಿಭಟನೆಯಲ್ಲಿ ಕಾಶಿನಾಥ ಸಿಂಧೆ, ರಾಮರಡ್ಡಿ ಪೊಲೀಸ್ ಪಾಟೀಲ, ಜಗನ್ನಾಥ ಹೊಸಮನಿ, ಆದರ್ಶರಡ್ಡಿ ಮಾತನಾಡಿದರು.

ಜಗದೀಶ ತೆಲ್ಕಾಪಳ್ಳಿ, ಶಿರಾಜುದ್ದೀನ್ ಬಿಬ್ಬಳ್ಳಿ, ಶರಣು ನೇತಿ, ಸಂಗಮೇಶ ಹಡಪದ ಮೊದಲಾದವರು ಇದ್ದರು.

ಚಿಂಚೋಳಿ ಘಟಕದ ಅಧಿಕಾರಿ ಅಶೋಕ ಚಿಮ್ಮನಚೋಡ ಬಸ್ ನಿಲ್ದಾಣದ ನಿಯಂತ್ರಣಾಧಿಕಾರಿ ಚನ್ನಬಸಪ್ಪ ಗಂಜಗಿರಿ ಮೊದಲಾದವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.