ADVERTISEMENT

₹ 1.3 ಕೋಟಿಯ ಕಬ್ಬು ಕಟಾವು ಯಂತ್ರ ಖರೀದಿಸಿದ ರೈತ

ಲಕ್ಷ್ಮೀಬಾಯಿ ಮೇತ್ರೆ ಸಕ್ಕರೆ ಕಾರ್ಖಾನೆ (ದುಧನಿ) ಕಾರ್ಖಾನೆಯಿಂದ ನೆರವಿನ ಹಸ್ತ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2020, 14:52 IST
Last Updated 11 ಡಿಸೆಂಬರ್ 2020, 14:52 IST
ಅಫಜಲಪುರ ತಾಲ್ಲೂಕಿನ ನಂದರಗಾ ಗ್ರಾಮದಲ್ಲಿ ಮಾತೋಶ್ರಿ ಲಕ್ಷ್ಮೀಬಾಯಿ ಮೇತ್ರೆ ಸಕ್ಕರೆ ಕಾರ್ಖಾನೆಯಿಂದ ಶಿವಶರಣಪ್ಪ ನಾಗಪ್ಪ ನಾಟೀಕಾರ ಅವರಿಗೆ ನೀಡಿದ ಕಬ್ಬು ಕಟಾವು ಯಂತ್ರಕ್ಕೆ ಶುಕ್ರವಾರ ಶಾಸಕ ಎಂ.ವೈ.ಪಾಟೀಲ ಪೂಜೆ ಸಲ್ಲಿಸಿದರು
ಅಫಜಲಪುರ ತಾಲ್ಲೂಕಿನ ನಂದರಗಾ ಗ್ರಾಮದಲ್ಲಿ ಮಾತೋಶ್ರಿ ಲಕ್ಷ್ಮೀಬಾಯಿ ಮೇತ್ರೆ ಸಕ್ಕರೆ ಕಾರ್ಖಾನೆಯಿಂದ ಶಿವಶರಣಪ್ಪ ನಾಗಪ್ಪ ನಾಟೀಕಾರ ಅವರಿಗೆ ನೀಡಿದ ಕಬ್ಬು ಕಟಾವು ಯಂತ್ರಕ್ಕೆ ಶುಕ್ರವಾರ ಶಾಸಕ ಎಂ.ವೈ.ಪಾಟೀಲ ಪೂಜೆ ಸಲ್ಲಿಸಿದರು   

ಅಫಜಲಪುರ: ‘ಕಾರ್ಮಿಕರ ಸಮಸ್ಯೆಯಿಂದ ಪ್ರತಿವರ್ಷ ಪರದಾಡುತ್ತಿರುವ ಕಬ್ಬು ಬೆಳೆಗಾರರಿಗೆ ‘ಕಬ್ಬು ಕಟಾವು ಯಂತ್ರ’ದಿಂದ ಸಮಯ, ಹಣ ಉಳಿತಾಯ ಆಗಲಿದೆ’ ಎಂದು ಶಾಸಕ ಎಂ.ವೈ.ಪಾಟೀಲ ತಿಳಿಸಿದರು.

ತಾಲ್ಲೂಕಿನ ನಂದರಗಾ ಗ್ರಾಮದಲ್ಲಿ ಮಾತೋಶ್ರಿ ಲಕ್ಷ್ಮೀಬಾಯಿ ಮೇತ್ರೆ ಸಕ್ಕರೆ ಕಾರ್ಖಾನೆ (ದುಧನಿ)ಯವರು ರೈತ ಶಿವಶರಣಪ್ಪ ನಾಗಪ್ಪ ನಾಟೀಕಾರ ಅವರಿಗೆ ನೀಡಿರುವ ಕಬ್ಬು ಕಟಾವು ಯಂತ್ರಕ್ಕೆ ಶುಕ್ರವಾರ ಪೂಜೆ ಸಲ್ಲಿಸಿ ಮಾತನಾಡಿದರು.

‘ಸುಮಾರು ₹ 1.3 ಕೋಟಿ ವೆಚ್ಚದ ಕಬ್ಬು ಕಟಾವು ಯಂತ್ರ ಶಿವಶರಣಪ್ಪ ನಾಟೀಕಾರ ರೈತರು ಧೈರ್ಯ ಮಾಡಿ ಇಷ್ಟೊಂದು ಬಂಡವಾಳ ಹಾಕಿ ಕಬ್ಬು ಕಟಾವು ಯಂತ್ರ ತಂದಿದ್ದಾರೆ. ಇದರಿಂದ ಈ ಭಾಗದ ರೈತರಿಗೆ ಅನುಕೂಲವಾಗಲಿದೆ. ಪ್ರತಿವರ್ಷ ಕಬ್ಬು ಕಟಾವು ಮಾಡಲು ಕಾರ್ಮಿಕರು ಸಿಗದೇ ಕಬ್ಬು ಬೆಳೆಗಾರರು ಕಷ್ಟ ಪಡುತ್ತಿದ್ದರು. ಅವರಿಗಾಗಿ ವಿನಾಕಾರಣ ಹಣ ಖರ್ಚು ಮಾಡುತ್ತಿದ್ದರು. ಈ ಯಂತ್ರದಿಂದ ಕಡಿಮೆ ಖರ್ಚಿನಲ್ಲಿ ಕಬ್ಬು ಕಾರ್ಖಾನೆಗೆ ಪೂರೈಕೆಯಾಗಲಿದೆ. ಇಂತಹ ರೈತರು ಮುಂದೆ ಬರಬೇಕು’ ಎಂದು ತಿಳಿಸಿದರು.

ADVERTISEMENT

ನಂದರಗಾ ಗ್ರಾಮದ ರೈತ ಮುಖಂಡರಾದ ಭೀಮರಾವ್ ಗೌಡ ಪಾಟೀಲ ಮಾತನಾಡಿ, ‘ಕರ್ನಾಟಕದಲ್ಲಿ ಕಬ್ಬು ಕಟಾವು ಯಂತ್ರ ಖರೀದಿ ಮಾಡಿದರೆ ಸರ್ಕಾರ ಸುಮಾರು ₹ 36 ಲಕ್ಷ ಸಹಾಯ ಧನ ನೀಡುತ್ತದೆ. ಅಂತಹ ರೈತರು ಮುಂದೆ ಬರುತ್ತಾರೆ’ ಎಂದು ತಿಳಿಸಿದರು.

ಸಕ್ಕರೆ ಕಾರ್ಖಾನೆಯ ವ್ಯವಸ್ಥಾಪಕ ಹೊಸುರೆಸಾಬ್‌ ಮಾತನಾಡಿ, ‘ನಮ್ಮ ಸಕ್ಕರೆ ಕಾರ್ಖಾನೆಯಿಂದ ನಂಬಿಕಸ್ಥ ಕಬ್ಬು ಬೆಳೆಗಾರರಿಗೆ ಕಬ್ಬು ಕಟಾವು ಯಂತ್ರಗಳನ್ನು ಖರೀದಿ ಮಾಡಲು ಆರ್ಥಿಕ ಸಹಾಯ ನೀಡಲಾಗುತ್ತದೆ. ಕಾರ್ಖಾನೆ ವ್ಯಾಪ್ತಿಯಲ್ಲಿ ಒಟ್ಟು 6 ಕಬ್ಬು ಕಟಾವು ಯಂತ್ರಗಳಿವೆ. ನಾವು ಪ್ರತಿ ಟನ್‌ ಕಬ್ಬಿಗೆ ₹ 400 ಕಡಿತ ಮಾಡುತ್ತೇವೆ ಮತ್ತು ₹ 1 ಲಕ್ಷಕ್ಕೆ 5 ಸಾವಿರ ಕಡಿತ ಮಾಡುತ್ತೇವೆ’ ಎಂದು ತಿಳಿಸಿದರು.

ಜಿಲ್ಲಾ ‍ಪಂಚಾಯಿತಿ ಮಾಜಿ ಸದಸ್ಯ ಪ್ರಕಾಶ ಜಮಾದಾರ, ರೈತ ಮುಖಂಡರಾದ ಶ್ರೀಶೈಲ ಗೌರ, ದಿವಾಣಜಿ, ಸಂತೋಷ ವಗದರಿಗಿ, ವಿಶ್ವನಾಥ ಕಾಮನಳ್ಳಿ, ಶಿವಶರಣಪ್ಪ ರೇವೂರ, ಮಹಾಂತೇಶ ಮಾಲಿ ಪಾಟೀಲ, ಗುಂಡು ರೇವೂರ, ನಾಗು ಬಾಲದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.