ಕಲಬುರಗಿ: ಜೇವರ್ಗಿಯ ಅಲ್ಹುದಾ ಉರ್ದು ಶಾಲೆಯ ಸಹ ಶಿಕ್ಷಕಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಪ್ರಕರಣ ದಾಖಲಾಗಿದ್ದು, ಆರೋಪಿಗಳಾದ ಸಂಸ್ಥೆಯ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಅಬ್ದುಲ್ ಸತ್ತಾರ್ ಸಾಬ್ ಗಿರಣಿ, ಮುಖ್ಯಶಿಕ್ಷಕ ರೋಷನ್ ಜಮೀರ್ನನ್ನು ಬಂಧಿಸಬೇಕು ಎಂದು ಮಹ್ಮದ್ ಶಹಬಾಜ್ ಒತ್ತಾಯಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ಪತ್ನಿ ಕಳೆದ 7 ವರ್ಷಗಳಿಂದ ಜೇವರ್ಗಿಯ ಅನುದಾನಿತ ಅಲ್ಹುದಾ ಬಾಲಕಿಯರ ಉರ್ದು ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ನಾಲ್ಕು ವರ್ಷಗಳಿಂದ ಪ್ರತಿನಿತ್ಯ ಶಾಲೆಯ ಮುಖ್ಯಶಿಕ್ಷಕ ರೋಷನ್ ಜಮೀರ್ ಹಾಗೂ ಸಂಸ್ಥೆಯ ಮಾಜಿ ಅಧ್ಯಕ್ಷ ಅಬ್ದುಲ್ ಸತ್ತಾರ್ಸಾಬ್ ಗಿರಣಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಸಹಕರಿಸಿದ್ದಕ್ಕೆ ಕೆಲಸದಿಂದ ತೆಗೆದುಹಾಕುವ ಬೆದರಿಕೆ ಹಾಕಿದಲ್ಲದೇ ಮಾನಸಿಕ ಕಿರುಕುಳ ನೀಡಿದ್ದಾರೆ. ಇದರಿಂದ ಬೇಸತ್ತು ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ 15 ದಿನಗಳಾದರೂ ಈವರೆಗೂ ಬಂಧಿಸಿಲ್ಲ ಎಂದು ಆರೋಪಿಸಿದರು.
ಪ್ರಕರಣ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೂ ಮನವಿ ಮಾಡಲಾಗಿದೆ. ಬಹಳ ಪ್ರಭಾವಿಗಳಾದ ಇಬ್ಬರೂ ಆರೋಪಿಗಳಿಗೆ ಸ್ಥಳೀಯ ಶಾಸಕ ಡಾ.ಅಜಯ್ಸಿಂಗ್ ಅವರ ಬೆಂಬಲವಿದ್ದು, ಆರೋಪಿಗಳ ಬಂಧಿಸದಂತೆ ಶಾಸಕರ ಒತ್ತಡ ಇರುವುದರಿಂದ ಆರೋಪಿಗಳನ್ನು ಬಂಧಿಸಿಲ್ಲ ಎಂದು ದೂರಿದರು.
ಸಂಸ್ಥೆಯ ಮಾಜಿ ಅಧ್ಯಕ್ಷ ಅಬ್ದುಲ್ ಸತ್ತಾರ್ ಸಾಬ್ ಗಿರಣಿ ಅವರು ವಿನಾಕಾರಣ ಕಚೇರಿಗೆ ಕರೆಸಿ ಅಶ್ಲೀಲವಾಗಿ ಮಾತನಾಡುವುದು, ಅನಗತ್ಯ ಸ್ಪರ್ಶಿಸುವುದು, ಪೆಟ್ರೋಲ್ ಬಂಕ್ ಕಚೇರಿಯಲ್ಲಿ ಭೇಟಿ ಆಗುವಂತೆ ಹೇಳುತ್ತಿದ್ದರು. ಇದಕ್ಕೆ ಸಹಕರಿಸುವಂತೆ ಮುಖ್ಯಶಿಕ್ಷಕ ರೋಷನ್ ಜಮೀರ್ ಒತ್ತಡ ಹಾಕುತ್ತಿದ್ದರು. ಇಲ್ಲದಿದ್ದರೆ ಕೆಲಸದಿಂದ ವಜಾಗೊಳಿಸುವ ಬೆದರಿಕೆ ಹಾಕುತ್ತಿದ್ದರು ಎಂದು ಸಂತ್ರಸ್ತ ಶಿಕ್ಷಕಿ ಅಳಲು ತೋಡಿಕೊಂಡರು.
ಸುದ್ದಿಗೋಷ್ಠಿಯಲ್ಲಿ ಮಹ್ಮದ್ ಫಸಿಯೂದ್ದೀನ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.