ಯಾಗಾಪುರ (ವಾಡಿ): ಶಿಕ್ಷಕ ದೇಶ ಕಟ್ಟುವ ಶಿಲ್ಪಿ ಇದ್ದಂತೆ, ನಡೆನುಡಿ ಶುದ್ದವಾಗಿಟ್ಟುಕೊಂಡ ಶಿಕ್ಷಕ ಸಮಾಜದಲ್ಲಿ ಸದಾ ಆದರ್ಶಪ್ರಾಯ' ಎಂದು ಯಾಗಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಮದನ ರಾಠೋಡ ಹೇಳಿದರು.
ಶಿಕ್ಷಕರ ದಿನಾಚರಣೆ ನಿಮಿತ್ತ ಯಾಗಾಪುರ ಗ್ರಾ.ಪಂ ವ್ಯಾಪ್ತಿಯ ವಿವಿಧ ಗ್ರಾಮ ಹಾಗೂ ೮ ತಾಂಡಾಗಳ ಶಿಕ್ಷಕರಿಗೆ ಗ್ರಾಪಂ ವತಿಯಿಂದ ಸನ್ಮಾನಿಸಿ ಮಾತನಾಡಿದ ಅವರು, ಪೆಟ್ಟು ತಿನ್ನುವ ಕಲ್ಲು ದೇವರ ಮೂರ್ತಿಯಾಗುವ ಹಾಗೇ ಗುರುಗಳಿಂದ ಶಿಕ್ಷಿಸಿಕೊಂಡ ವಿದ್ಯಾರ್ಥಿ ಸಮಾಜದಲ್ಲಿ ಉತ್ತಮ ನಾಗರಿಕನಾಗುತ್ತಾನೆ ಎಂದರು.
ಸಮಾಜದ ಬಗ್ಗೆ ಏನೂ ಅರಿಯದ ವಿದ್ಯಾರ್ಥಿಯ ಎದೆಯಲ್ಲಿ ಅಕ್ಷರ ಮೂಡಿಸಿ ಗೌರವದ ಬದುಕು ಕಟ್ಟಿಕೊಳ್ಳಲು ಶಿಕ್ಷಕ ತನ್ನ ಇಡೀ ಜೀವನ ಮೀಸಲಿಡುತ್ತಾನೆ. ಅದಕ್ಕೆ ಪರ್ಯಾಯವಾಗಿ ಸಮಾಜ ಶಿಕ್ಷಕ ವರ್ಗಕ್ಕೆ ಋಣಿಯಾಗಿರುತ್ತದೆ. ಶಿಕ್ಷಕರು ಸಹ ಸಮಾಜ ನೀಡಿದ ಅತಿದೊಡ್ಡ ಜವಾಬ್ದಾರಿ ಹಾಗೂ ಗೌರವವನ್ನು ಅತ್ಯಂತ ಶ್ರದ್ಧೆಯಿಂದ ಕಾಪಾಡಿಕೊಂಡು ಬರಬೇಕಿದೆ ಎಂದು ಕಿವಿಮಾತು ಹೇಳಿದ ಅವರು, ಪ್ರತಿ ಮಗುವಿಗೆ ಶಿಕ್ಷಕ ಜೀವಂತ ಉದಾಹರಣೆಯಾಗಿದ್ದು, ಮಕ್ಕಳು ಶಿಕ್ಷಕರನ್ನು ಅನುಕರಿಸುವ ಸಾಧ್ಯತೆ ಇದ್ದು, ಪ್ರಜ್ಞಾವಂತಿಕೆಯಿಮದ ವರ್ತಿಸಬೇಕಿದೆ ಎಂದರು.
ಶಿಕ್ಷಣ ಸ್ಥಾಯಿ ಅಧ್ಯಕ್ಷ ಧನರಾಜ ಸಾಹುಕಾರ, ಪಿಡಿಓ ಮಲ್ಲಿಕಾರ್ಜುನ ರೆಡ್ಡಿ ಹಾಗೂ ಫ್ರೌಢಶಾಲೆ ಮುಖ್ಯಗುರು ರಿಯಾಜ್ ಆಹ್ಮದ್ ಮಾತನಾಡಿದರು.
ಯಾಗಾಪುರ ಗ್ರಾ.ಪಂ ವ್ಯಾಪ್ತಿಯ ಹೀರಾಮಣಿ ತಾಂಡಾ, ಮುಂಗಿ ತಾಂಡಾ, ಬೆಳಗೇರಾ ಸಣ್ಣ ತಾಂಡಾ, ಜೈರಾಂ ತಾಂಡಾ, ಚಂದು ನಾಯಕ ತಾಂಡಾ, ಬಾಮ್ಲಾ ನಾಯಕ ತಾಂಡಾ, ಪತ್ತು ನಾಯಕ ತಾಂಡಾ, ಬೆಳಗೇರಾ ಹಾಗೂ ಯಾಗಾಪುರ ಗ್ರಾಮ ವ್ಯಾಪ್ತಿಯ 22 ಶಿಕ್ಷಕರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕ ಗಳಿಸಿದ ಕುಮಾರ ಚವ್ಹಾಣನಿಗೆ ಸನ್ಮಾನಿಸಿ ಗೌರವಿಸಲಾಯಿತು. ಗ್ರಾಪಂ ಉಪಾಧ್ಯಕ್ಷ ಮೇಘನಾಥ ಚವ್ಹಾಣ, ಎಸ್ಡಿಎಂಸಿ ಅಧ್ಯಕ್ಷ ಸಾಬಣ್ಣ ಕೊಟ್ರಿಕಿ, ಮುಖ್ಯಶಿಕ್ಷಕರಾದ ಶ್ರೀಧರ ರಾಠೋಡ, ಮಹಾಂತೇಶ, ಪಂಪಾಪತಿ, ಮುಖಂಡರಾದ ನಾಮದೇವ ರಾಠೋಡ, ರಾಮು ಪವಾರ, ಅಶೋಕ ಚವ್ಹಾಣ, ರವಿ ರಾಠೋಡ, ಚಂದ್ರಕಾಂತ ರಾಠೋಡ, ಭರಮರೆಡ್ಡಿ, ಈಶ್ವರ ರಾಠೋಡ, ಶಿಕ್ಷಕರಾದ ಪುಷ್ಪಾ, ಪ್ರತಾಪ ರಾಠೋಡ, ಸಂಗೀತಾ, ಮಲ್ಲಮ್ಮ, ಶಾಂತಮಲ್ಲಪ್ಪ, ಮನೋಹರ ಸೇರಿದಂತೆ ಹಲವರಿದ್ದರು. ಅತಿಥಿ ಶಿಕ್ಷಕ ಪರಶುರಾಮ ಯಾಗಾಪುರ ನಿರೂಪಿಸಿ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.