ಚಿಂಚೋಳಿ: ನೆರೆಯ ತೆಲಂಗಾಣ ರಾಜ್ಯದ ಮಂತಟ್ಟಿ ಗ್ರಾಮದ ದಂಪತಿ ತಾಲ್ಲೂಕಿನ ಜಟ್ಟೂರು ಗ್ರಾಮದ ಬಳಿ ಕಾಗಿಣಾ ನದಿಯ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದ್ದು, ಬುಧವಾರ ಬೆಳಿಗ್ಗೆ ಶವವಾಗಿ ಪತ್ತೆಯಾದರು.
ಬುಗ್ಗಪ್ಪ ನರಸಮ್ಮ( 60) ಮತ್ತು ಯಾದಮ್ಮ ಬುಗ್ಗಪ್ಪ (55) ನದಿ ಪ್ರವಾಹಕ್ಕೆ ಸಿಲುಕಿ ಮೃತರಾದವರು. ತರಕಾರಿ ಮಾರಲು ಬಶೀರಾಬಾದ್ಗೆ ತೆರಳಿದ್ದ ದಂಪತಿ, ಮರಳಿ ಮಂತಟ್ಟಿಗೆ ಬರುತ್ತಿದ್ದಾಗ ಕಾಗಿಣಾ ನದಿ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ನೀರಲ್ಲಿ ಕೊಚ್ಚಿ ಹೋಗಿದ್ದವರ ಪೈಕಿ ಮಹಿಳೆಯ ದೇಹ ಮಂಗಳವಾರ ಕಾಣಿಸಿತ್ತು. ಆದರೆ, ಪೊಲೀಸರು ಅಲ್ಲಿಗೆ ತೆರಳುವಷ್ಟರಲ್ಲಿ ಅದು ಮುಂದಕ್ಕೆ ಹೋಗಿತ್ತು. ಬುಧವಾರ ಬೆಳಿಗ್ಗೆ ಪ್ರವಾಹ ತಗ್ಗಿದ್ದರಿಂದ ದಂಪತಿ ಮೃತದೇಹಗಳು ಜಟ್ಟೂರು ಸಮೀಪದಲ್ಲಿ ಸಿಕ್ಕಿವೆ. ಮೃತರ ಪುತ್ರ ವೆಂಕಟಪ್ಪ ಅವರು ದೇಹಗಳನ್ನು ಗುರುತಿಸಿದರು ಎಂದಿದ್ದಾರೆ.
ಸುಲೇಪೇಟ ಸಬ್ ಇನ್ಸ್ಪೆಕ್ಟರ್ ಸುಖಾನಂದ ಸಿಂಗೆ ಸ್ಥಳಕ್ಕೆ ಭೇಟಿ ನೀಡಿದ್ದು, ಸುಲೇಪೇಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.