ADVERTISEMENT

ಪ್ರಿಯಾಂಕ್ ಹೇಳಿಕೆಗೆ ರಾಜಕುಮಾರ ಪಾಟೀಲ ತೆಲ್ಕೂರ ಖಂಡನೆ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2021, 2:32 IST
Last Updated 15 ಆಗಸ್ಟ್ 2021, 2:32 IST
ರಾಜಕುಮಾರ ಪಾಟೀಲ
ರಾಜಕುಮಾರ ಪಾಟೀಲ   

ಕಲಬುರ್ಗಿ: ಶಾಸಕ, ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ಅವರು ಶನಿವಾರ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಜಿ ಪ್ರಧಾನಿ ಅಟಲ ಬಿಹಾರಿ ವಾಜಪೇಯಿ ಅವರ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಅವರ ಹೇಳಿಕೆ ಕೆಟ್ಟ ಪರಂಪರೆಯನ್ನು ತೋರಿಸುತ್ತದೆ ಎಂದು ಶಾಸಕ, ಬಿಜೆಪಿ ವಕ್ತಾರ ರಾಜಕುಮಾರ ಪಾಟೀಲ ತೆಲ್ಕೂರ ಟೀಕಿಸಿದ್ದಾರೆ.

ಈ ಕುರಿತು ಹೇಳಿಕೆ ನೀಡಿದ ಅವರು, ‘ದೇಶ ಕಂಡ ಅತ್ಯುತ್ತಮ ನಾಯಕ ವಾಜಪೇಯಿ ಅವರ ಬಗ್ಗೆ ಬಹಳ ಹಗುರವಾಗಿ ಮಾತನಾಡಿರುವುದು ಅತ್ಯಂತ ಖೇದದ ಸಂಗತಿ. ಅವರ ಬಗ್ಗೆ ಕುಡುಕರು ಎಂಬಂತೆ ವ್ಯಾಖ್ಯಾನ ಮಾಡಿರುವುದು ಕಾಂಗ್ರೆಸ್ ಸಂಸ್ಕೃತಿಯನ್ನು ಎತ್ತಿ ಹಿಡಿದಿದೆ. ಕಾಂಗ್ರೆಸ್ಸಿಗರು ತಮ್ಮ ಸ್ಥಿತಿಗತಿಯ ಕುರಿತು ಮನನ ಮಾಡಿಕೊಳ್ಳದಿದ್ದರೆ ಆ ಪಕ್ಷದ ಸರ್ವನಾಶ ಖಚಿತ’ ತಿಳಿಸಿದ್ದಾರೆ.

‘ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರನ್ನು ಶೌಚಾಲಯಕ್ಕೆ ಇಡಬೇಕೆಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ. ಅದಕ್ಕೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಉತ್ತರಿಸುವಾಗ ಕಾಂಗ್ರೆಸ್ ಭಾಷೆಯಲ್ಲೇ ಉತ್ತರಿಸಿದರೆ ಅವರಿಗೆ ಅರ್ಥವಾಗುತ್ತದೆ ಎಂಬ ದೃಷ್ಟಿಯಿಂದ ಹುಕ್ಕಾ ಬಾರ್ ವಿಚಾರವನ್ನೂ ಎತ್ತಿದ್ದರು’ ಎಂದಿದ್ದಾರೆ.

ADVERTISEMENT

‘ಪ್ರಧಾನಿಯವರ ಬಗ್ಗೆ ಕೀಳಾಗಿ ಮಾತನಾಡುವುದು ಉತ್ತಮ ಸಂಸ್ಕೃತಿಯೇ? ಹುಕ್ಕಾ ಬಾರ್ ಬಗ್ಗೆ ಮಾತನಾಡಿದರೆ ಅದು ಕೀಳು ಸಂಸ್ಕೃತಿ ಎನಿಸಿದೆಯೇ? ಇದಕ್ಕೆ ಇಷ್ಟೆಲ್ಲ ರಾದ್ಧಾಂತ ಬೇಕಿತ್ತೇ’ ಎಂದು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.