ADVERTISEMENT

ಡಿಸಿಸಿ ಬ್ಯಾಂಕ್‌ ಶಾಖೆಯಲ್ಲಿ ಕಳವು ಯತ್ನ

ಶನಿವಾರ ರಾತ್ರಿ ಬ್ಯಾಂಕಿಗೆ ಕನ್ನ, ಲಾಕರ್‌ ಬೀಗ ಮುರಿಯಲು ಸಾಧ್ಯವಾಗದೇ ಹಾಗೇ ಮರಳಿದ ಕಳ್ಳರು

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2021, 6:31 IST
Last Updated 15 ಫೆಬ್ರುವರಿ 2021, 6:31 IST
ಚಿತ್ತಾಪುರದಲ್ಲಿನ ಡಿಸಿಸಿ ಬ್ಯಾಂಕ್‌ ಶಾಖೆಯಲ್ಲಿ ಕಳ್ಳತನಕ್ಕೆ ಯತ್ನ ನಡೆದ ಹಿನ್ನೆಲೆಯಲ್ಲಿ, ಭಾನುವಾರ ಶ್ವಾನದಳ ಸಿಬ್ಬಂದಿ ಪರಿಶೀಲನೆ ನಡೆಸಿದರು
ಚಿತ್ತಾಪುರದಲ್ಲಿನ ಡಿಸಿಸಿ ಬ್ಯಾಂಕ್‌ ಶಾಖೆಯಲ್ಲಿ ಕಳ್ಳತನಕ್ಕೆ ಯತ್ನ ನಡೆದ ಹಿನ್ನೆಲೆಯಲ್ಲಿ, ಭಾನುವಾರ ಶ್ವಾನದಳ ಸಿಬ್ಬಂದಿ ಪರಿಶೀಲನೆ ನಡೆಸಿದರು   

ಚಿತ್ತಾಪುರ: ಪಟ್ಟಣದಲ್ಲಿರುವ ಕಲಬುರ್ಗಿ ಮತ್ತು ಯಾದಗಿರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಚಿತ್ತಾಪುರ ಶಾಖೆಯ ಕಚೇರಿಯಲ್ಲಿ ಶನಿವಾರ ರಾತ್ರಿ ದುಷ್ಕರ್ಮಿಗಳು ಲಾಕರ್ ಮುರಿದು ಕಳ್ಳತನಕ್ಕೆ ಪ್ರಯತ್ನಿಸಿದ್ದಾರೆ.

ಬ್ಯಾಂಕಿನ ಸಿಬ್ಬಂದಿ ಮಧ್ಯರಾಜ ಪಾಟೀಲ ಅವರು ಭಾನುವಾರವೂ ಬೆಳಿಗ್ಗೆ ಕಚೇರಿ ಕೆಲಸಕ್ಕೆಂದು ಬಂದಾಗ ಬಾಗಿಲಿನ ಬೀಗ ಮುರಿದಿರುವುದು ಗಮನಕ್ಕೆ ಬಂದಿದೆ. ತಕ್ಷಣ ಬ್ಯಾಂಕ್ ವ್ಯವಸ್ಥಾಪಕರಿಗೆ ವಿಷಯ ತಿಳಿಸಿದ್ದಾರೆ‌.ಜಿಲ್ಲಾ ಡಿಸಿಸಿ ಬ್ಯಾಂಕ್ ಜನರಲ್ ಮ್ಯಾನೇಜರ್ ಮುತ್ತುರಾಜ ಅವರು ದೌಡಾಯಿಸಿ, ಪೊಲೀಸರಿಗೆ ವಿಷಯ ತಿಳಿಸಿದರು.

ಕಳ್ಳತನಕ್ಕೆ ಬಂದವರು ಲಾಕರ್ ಬೀಗ ಮುರಿಯಲು ಪ್ರಯತ್ನಿಸಿದ್ದಾರೆ. ಆದರೆ, ಬೀಗ ಮುರಿಯಲು ವಿಫಲವಾಗಿದ್ದರಿಂದ ಹಾಗೆಯೆ ತೆರಳಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.ಬ್ಯಾಂಕಿನಲ್ಲಿ ಯಾವುದೇ ರೀತಿಯಲ್ಲಿ ವಸ್ತು, ಹಣ ಕಳ್ಳತನ ಆಗಿಲ್ಲ ಎಂದು ಜಿಲ್ಲಾ ಡಿಸಿಸಿ ಬ್ಯಾಂಕ್ ಜನರಲ್ ಮ್ಯಾನೇಜರ್ ಮುತ್ತುರಾಜ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಪಿಎಸ್ಐ ಮಂಜುನಾಥರೆಡ್ಡಿ ಅವರು ಸಿಬ್ಬಂದಿಯೊಂದಿಗೆ ಬ್ಯಾಂಕಿಗೆ ತರಳಿ ಪರಿಶೀಲಿಸಿದರು. ನಂತರಜಿಲ್ಲಾ ಶ್ವಾನದಳ ಮತ್ತು ಬೆರಳಚ್ಚು ತಜ್ಞರನ್ನು ಕರೆಯಿಸಿ ತೀವ್ರ ತಪಾಸಣೆ ಮಾಡಲಾಯಿತು. ಬ್ಯಾಂಕಿನ ಒಳಗಡೆ ಓಡಾಡಿದ ಶ್ವಾನವು ಹೊರಬಂದು, ಬ್ಯಾಂಕ್ ಕಟ್ಟಡವನ್ನು ಸುತ್ತುಹಾಕಿ ನೇರವಾಗಿ ಬಸ್ ನಿಲ್ದಾಣಕ್ಕೆ ತೆರಳಿ ಮತ್ತೆ ವಾಪಾಸ್‌ ಬಂದು ನಿಂತಿತು.

ಶ್ವಾನವು ತಿರುಗಾಡಿದ ರಸ್ತೆಯ ಮಾರ್ಗದಲ್ಲಿ ಎಸ್‌ಬಿಐ ಬ್ಯಾಂಕಿನ ಹೊರಗಡೆ ಮತ್ತು ಬಸ್ ನಿಲ್ದಾಣದಲ್ಲಿ ಸಿಸಿಟಿವಿ ಕ್ಯಾಮೆರಾಗಳಿವೆ. ಅವುಗಳ ಪರಿಶೀಲನೆಗೆ ಪೊಲೀಸರು ಮುಂದಾಗಿದ್ದಾರೆ.

ಬ್ಯಾಂಕ್ ಸಿಬ್ಬಂದಿ ಮಧ್ವರಾಜ ಅವರು ಚಿತ್ತಾಪುರ ಠಾಣೆಗೆ ದೂರು ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.