ಶಹಾಬಾದ್: ‘ತಾಲ್ಲೂಕಿನ ತೊನಸನಹಳ್ಳಿ ಎಸ್ ಗ್ರಾಮದ ಮಾರ್ಗವಾಗಿ ಹೋಗುವ ರಾಜ್ಯ ಹೆದ್ದಾರಿ 125 ಸಂಪೂರ್ಣವಾಗಿ ಹದಗೆಟ್ಟು ದಶಕಗಳು ಕಳೆದಿದೆ. ಇದರಿಂದ ಪ್ರಯಾಣಿಕರು ಸಮಸ್ಯೆ ಎದುರುಸುತ್ತಿದ್ದಾರೆ. ತಗ್ಗು ಗುಂಡಿಗಳನ್ನು ಮುಚ್ಚಿ ತಾತ್ಕಾಲಿಕ ರಿಪೇರಿ ಆದರೂ ಮಾಡಬೇಕು’ ಎಂದು ಯುವ ಮುಖಂಡ ಬಸವರಾಜ ಮದ್ರಿಕಿ ಆಗ್ರಹಿಸಿದರು.
ತೊನಸನಹಳ್ಳಿ ಎಸ್ ಗ್ರಾಮಸ್ಥರು ರಾಜ್ಯ ಹೆದ್ದಾರಿ ತಡೆದು ರಸ್ತೆ ದುರಸ್ತಿಗಾಗಿ ಹಮ್ಮಿಕೊಂಡ ರಸ್ತಾರೊಕೊ ಚಳುವಳಿ ಉದ್ದೇಶಿಸಿ ಅವರು ಮಾತನಾಡಿದರು.
‘ರಸ್ತೆ ಹದಗೆಟ್ಟಿರುವುದರಿಂದ ತೋನಸನಹಳ್ಳಿ ಇಂದ ಜೇವರ್ಗಿ ಮತ್ತು ಶಹಾಬಾದಿಗೆ ತೆರಳುವ ಪ್ರಯಾಣಿಕರಿಗೆ ಬಹಳಷ್ಟು ತೊಂದರೆಯಾಗುತ್ತಿದೆ. ರಸ್ತೆ ದುರಸ್ತಿಗೆ ಹಲವು ಬಾರಿ ಹೋರಾಟಗಳು ಮಾಡಿದ್ದೇವೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಕೂಡಲೇ ರಸ್ತೆ ದುರಸ್ತಿ ಮಾಡಿಸಬೇಕು. ಇಲ್ಲವಾದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ತಾಲ್ಲೂಕು ದಂಡಾಧಿಕಾರಿ ನೀಲಪ್ರಭ ಬಬಲಾದ ಅವರು ಮನವಿ ಪತ್ರ ಸ್ವಿಕರಿಸಿದರು. ಪ್ರತಿಭಟನೆ ನೇತೃತ್ವ ದಸಂಸ ರಾಜ್ಯ ಸಂಘಟನಾ ಸಂಚಾಲಕ ಮರಿಯಪ್ಪ ಹಳ್ಳಿ ವಹಿಸಿದ್ದರು. ನಾಗೇಂದ್ರಪ್ಪ ಹುಗ್ಗಿ ಮಾತನಾಡಿದರು. ಪ್ರತಿಭಟನೆಯಲ್ಲಿ ಅಲ್ಲಾಭಕ್ಷ ಜಮಾದಾರ್, ಹೊನ್ನಪ್ಪಗೌಡ ಪೋಲಿಸ್ ಪಾಟೀಲ್, ಮಲ್ಲಿಕಾರ್ಜುನ ಇಂಗಿನ, ಸಂಗಣ್ಣ ಗೋಳೇದ, ಪ್ರಭು ಟೇಲರ್, ಶಾಲಾ ಕಾಲೇಜು ವಿದ್ಯಾರ್ಥಿಗಳು, ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ನೂರಾರು ಜನ ಗ್ರಾಮಸ್ಥರು ಪ್ರತಿಭಟನೆಯಲ್ಲಿ ಭಾಗವಹಿಸಿದರು.