ಅಫಜಲಪುರ: ಇಲ್ಲಿನ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಬುಧವಾರ ಅಪಾರ ಸಂಖ್ಯೆಯಲ್ಲಿ ಅಭ್ಯರ್ಥಿಗಳ ಬೆಂಬಲಿಗರು ಬಂದಿದ್ದರಿಂದ ಜನದಟ್ಟಣೆ ಉಂಟಾಯಿತು. ಇದರಿಂದಾಗಿ 2 ಗಂಟೆ ಸಂಚಾರ ಸ್ಥಗಿತಗೊಂಡಿತ್ತು.
28 ಗ್ರಾಮ ಪಂಚಾಯಿತಿಗಳ ಚುನಾವಣೆ ಫಲಿತಾಂಶ ಒಂದೊಂದಾಗಿ ಬರುತ್ತಿದ್ದಂತೆ, ವಿಜೇತ ಅಭ್ಯರ್ಥಿಗಳ ಬೆಂಬಲಿಗರು ವಿಜಯೋತ್ಸವ ಆಚರಿಸಿದರು.
ಘತ್ತರಗಿ ಮತ್ತು ಆನೂರ ರಸ್ತೆಗಳು ವಾಹನ ಮತ್ತು ಜನರಿಂದ ತುಂಬಿಕೊಂಡಿದ್ದವು. ಹೀಗಾಗಿ ಘತ್ತರಗಿ, ಆನೂರ ಮತ್ತು ದೇವಲಗಾಣಗಾಪುರಕ್ಕೆ ಹೋಗುತ್ತಿರುವವರು ತೀವ್ರ ತೊಂದರೆ ಅನುಭವಿಸಿದರು.
ಹೆಚ್ಚಿನ ಗ್ರಾಮ ಪಂಚಾಯಿತಿಗಳಲ್ಲಿ ಪೆನಲ್ ಮಾಡಿಕೊಂಡು ಚುನಾವಣೆ ಸ್ಪರ್ಧೆಗಿಳಿದಿದ್ದರು. ಮತ್ತೊಂದೆಡೆ ಕಾಂಗ್ರೆಸ್, ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದ ಮೇಲೆ ಅವರವರ ನಾಯಕರಿಗೆ ಜಯಘೋಷ ಹಾಕಿದರು. ಇನ್ನೊಂದು ಕಡೆ ಮಾಶಾಳದಲ್ಲಿ ಜೆ.ಎಂ.ಕೊರಬು ಫೌಂಡೇಶನ್ ಬೆಂಬಲಿತ ಅಭ್ಯರ್ಥಿಗಳು ಜಯ ಸಾಧಿಸಿದ್ದಾರೆ.
ಗೆದ್ದ ಅಭ್ಯರ್ಥಿಗಳು ತಮ್ಮ ಗ್ರಾಮಗಳಲ್ಲಿ ವಿಜಯೋತ್ಸವ ಆಚರಿಸಿದರು. ಸಂಜೆ 6 ಗಂಟೆಯವರೆಗೂ ಮತ ಏಣಿಕೆ ಕೇಂದ್ರದಲ್ಲಿ ಜನರು ಕಿಕ್ಕಿರಿದು ನಿಂತಿದ್ದರು. ಜನರನ್ನು ಚದುರಿಸಲು ಪೊಲೀಸ್ ಸಿಬ್ಬಂದಿ ಹರಸಾಹಸ ಪಟ್ಟರು. ಡಿವೈಎಸ್ಪಿ ಸಿಪಿಐ ಮಹಾದೇವ ಪಂಚಮುಖಿ, ಪಿಎಸ್ಐ ವಿಶ್ವನಾಥ ಮುದರೆಡ್ಡಿ, ಅಪರಾಧ ವಿಭಾಗದ ಪಿಎಸ್ಐ ಅಶೋಕ ಪಾಟೀಲ ಮತ ಕೇಂದ್ರದ ಸುತ್ತಮುತ್ತ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.