ಕಲಬುರಗಿ: ಜಿಲ್ಲೆಯ 7 ಗ್ರಾಮಗಳಲ್ಲಿ ಯೋಗ್ಯವಾದ ರಸ್ತೆಗಳು ಇಲ್ಲದ ಕಾರಣ ಸಾರಿಗೆ ಬಸ್ ಸೌಲಭ್ಯ ಕಲ್ಪಿಸಲು ಸಾಧ್ಯವಾಗಿಲ್ಲ ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ತಿಳಿಸಿದ್ದಾರೆ.
ವಿಧಾನಪರಿಷತ್ ಸದಸ್ಯ ಬಿ.ಜಿ. ಪಾಟೀಲ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಸಚಿವ ಶ್ರೀರಾಮುಲು, ಜಿಲ್ಲೆಯ ವ್ಯಾಪ್ತಿಯಲ್ಲಿ ಒಟ್ಟು 896 ಗ್ರಾಮಗಳಿದ್ದು, ಪ್ರಯಾಣಿಕರ ಬೇಡಿಕೆ ಹಾಗೂ ಶಾಲಾ–ಕಾಲೇಜು ವಿದ್ಯಾರ್ಥಿಗಳಿಗಾಗಿ 889 ಗ್ರಾಮಗಳಿಗೆ ಬಸ್ ಸೌಲಭ್ಯ ಕಲ್ಪಿಸಲಾಗಿದೆ. ಇನ್ನೂ 7 ಗ್ರಾಮಗಳು ಮಾತ್ರ ಉಳಿದುಕೊಂಡಿವೆ ಎಂದು ತಿಳಿಸಿದ್ದಾರೆ.
ಯಾದಗಿರಿ ಜಿಲ್ಲೆಯಲ್ಲಿರುವ 481 ಗ್ರಾಮಗಳಲ್ಲಿ 465 ಗ್ರಾಮಗಳಿಗೆ ಬಸ್ ಸೌಲಭ್ಯ ಕಲ್ಪಿಸಲಾಗಿದೆ. ಇನ್ನೂ 16 ಗ್ರಾಮಗಳಿಗೆ ಬಸ್ ಸೌಲಭ್ಯ ಕಲ್ಪಿಸಬೇಕಾಗಿದೆ ಎಂದು ಉತ್ತರ ನೀಡಿದ್ದಾರೆ.
ಆದರೆ, ಬಸ್ ಸೌಲಭ್ಯ ಕಲ್ಪಿಸದೇ ಇರುವುದಕ್ಕೆ ಯೋಗ್ಯವಾದ ರಸ್ತೆಗಳು ಇಲ್ಲ ಎಂದು ಸಾರಿಗೆ ಸಚಿವರು ನೀಡಿದ ಉತ್ತರದಲ್ಲಿ ತಿಳಿಸಿದ್ದಾರೆ. ಈ ಗ್ರಾಮಗಳ ರಸ್ತೆ ದುರಸ್ತಿ ಮಾಡುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳಿಗೆ ಪತ್ರ ಬರೆದು ಸೂಚನೆ ನೀಡಲಾಗಿದೆ ಎಂದೂ ಉತ್ತರದಲ್ಲಿ ತಿಳಿಸಿದ್ದಾರೆ.
ಕಲಬುರಗಿಯ ಸೋಮನಾಥ ಹಳ್ಳಿ, ಆಳಂದದ ತೋರವಿವಾಡಿ, ಯಡ್ರಾಮಿಯ ಜಂಬೆರಾಳ, ಅಕ್ಕಂಡಳ್ಳಿ, ಅಫಜಲಪುರದ ಇಂಗಳಗಿ, ಅವರಾದ, ಉಪ್ಪಾರಹಟ್ಟಿ, ಗುರುಮಠಕಲ್ನ ಪಾಡಪಲ್ಲೊ, ಬೊಮ್ಮರಾಲ ದೊಡ್ಡಿ, ಹುಣಸಗಿಯ ಉಪ್ಪಲದಿನ್ನಿ, ಹಂದ್ರಾಳ, ಪತ್ತೇಪುರ, ಸುರಪುರದ ಮಾಲಹಳ್ಳಿ, ಯಾದಗಿರಿಯ ಸಮಣಾಪುರ, ಹೋರುಂಚಾ, ವಡಗೇರಾದ ಕೊಂಗಡಿ, ಸೂಗುರು, ಮಾಳಹಳ್ಳಿ, ಶ್ರೀರಂಗಪುರ, ಶಹಾಪುರದ ಬೇವಿನಹಳ್ಳಿ, ತಿಪ್ಪಣ್ಣಹಳ್ಳಿ, ಹಾಲಭಾವಿ ಈ ಗ್ರಾಮಗಳಿಗೆ ಬಸ್ ಸೌಕರ್ಯ ಕಲ್ಪಿಸುವ ಕೆಲಸ ಪ್ರಗತಿಯಲ್ಲಿದೆ ಎಂದು ಸಚಿವರು ನೀಡಿದ ಉತ್ತರದಲ್ಲಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.