
ಕಲಬುರಗಿ: ನಗರದ ಬ್ರಹ್ಮಪುರ ಪ್ರದೇಶದ ನ್ಯೂ ರಾಘವೇಂದ್ರ ಕಾಲೊನಿಯಲ್ಲಿರುವ ವೆಂಕಟೇಶ್ವರ (ಬಾಲಾಜಿ) ದೇವಸ್ಥಾನದ 38ನೇ ವರ್ಧಂತಿ ಉತ್ಸವದ ಅಂಗವಾಗಿ ಬುಧವಾರ ಅದ್ದೂರಿ ರಥೋತ್ಸವ ನಡೆಯಿತು.
ಬೆಳಿಗ್ಗೆ 11.30 ಹೊತ್ತಿಗೆ ಸರ್ವಾಲಂಕೃತ ವೆಂಕಟೇಶ್ವರ ಸ್ವಾಮಿ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ತಂದು ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ಪುಷ್ಪಾರ್ಚನೆ ಸಹಿತ ಪೂಜೆ ಸಲ್ಲಿಸಿದ ಬಳಿಕ ಭಕ್ತರು ತೇರು ಎಳೆದರು. ‘ಗೋವಿಂದಾ ಗೋಂವಿದಾ’ ಘೋಷಣೆ ಮೊಳಗಿಸಿದರು.
ಮಹಿಳೆಯರು ಭಜನೆ ಮಾಡುತ್ತ, ಕೋಲಾಟವಾಡುತ್ತ ರಥೋತ್ಸವದ ಮೆರುಗು ಹೆಚ್ಚಿಸಿದರು.
ಇದಕ್ಕೂ ಮುನ್ನ ಬೆಳಿಗ್ಗೆ 5ರಿಂದ ಸುಪ್ರಭಾತ ನಡೆಯಿತು. ಬಳಿಕ ವೆಂಕಟೇಶ್ವರ ಸ್ವಾಮಿ ಅಷ್ಟೋತ್ತರ ಪಾರಾಯಣ, 108 ಕಲಶಗಳಿಂದ ಕುಂಭಾಭಿಷೇಕ, ಪವಮಾನ ಹೋಮ, ವಿಷ್ಣು ಸಹಸ್ರನಾಮ ಹೋಮ, ಸತ್ಯನಾರಾಯಣ ಪೂಜೆಗಳು ನಡೆದವು.
ಅದ್ದೂರಿ ರಥೋತ್ಸವದ ಬಳಿಕ ಪಂಡಿತರಿಂದ ಪ್ರವಚನ ಮಂಗಲ ನಡೆಯಿತು. ಬಳಿಕ ಭಕ್ತರಿಗೆಲ್ಲ ತೀರ್ಥ ಪ್ರಸಾದ ವಿತರಣೆ ನಡೆಯಿತು.
ಸಂಜೆ 7.30ರ ಹೊತ್ತಿಗೆ ಮಹಾಮಂಗಳಾರತಿಯೊಂದಿಗೆ ಧಾರ್ಮಿಕ ಕಾರ್ಯಕ್ರಮಗಳು ಸಂಪನ್ನಗೊಂಡವು.
ವರ್ಧಂತಿ ಉತ್ಸವದ ಅಂಗವಾಗಿ ಫೆ.1ರಿಂದ 3ರತನಕ ನಿತ್ಯ ಸಂಜೆ 6ರಿಂದ 7.30ರವರೆಗೆ ಪಂ.ದ್ವೈಪಾಯನಾಚಾರ್ಯ ಜೋಶಿ ಅವರಿಂದ ಪ್ರವಚನ ಹಮ್ಮಿಕೊಳ್ಳಲಾಗಿತ್ತು.
ಫೆ.2ರಂದು ಸಂಜೆ ಸಂಗೀತ ಕಾರ್ಯಕ್ರಮ, ಫೆ.3ರಂದು ದಾಸವಾಣಿ ಕಾರ್ಯಕ್ರಮಗಳು ನಡೆದಿದ್ದವು. ಕೊನೆಯ ದಿನವಾದ ಬುಧವಾರ ಸಂಜೆ 7 ಗಂಟೆಗೆ ಬಾನ್ಸುರಿ ವಾದನ ಹಾಗೂ ಸಂಜೆ 7.30ಕ್ಕೆ ಅಂಬಾ ಕೃಪಾ ನೃತ್ಯ ನಿಕೇತನ ವತಿಯಿಂದ ‘ಶ್ರೀನಿವಾಸ ಕಲ್ಯಾಣ’ ನೃತ್ಯ ಪ್ರಸ್ತುತ ಪಡಿಸಲಾಯಿತು.
ರಥೋತ್ಸವದ ಸಂದರ್ಭದಲ್ಲಿ ದೇವಸ್ಥಾನದ ಟ್ರಸ್ಟ್ ಅಧ್ಯಕ್ಷ ವಿದ್ಯಾಸಾಗರ ಕುಲಕರ್ಣಿ, ಶ್ರೀನಿವಾಸರಾವ ಜಿ.ಕೆ., ಪ್ರಧಾನ ಅರ್ಚಕ ಶ್ರೀನಿವಾಸಚಾರ್ಯ ಜೋಶಿ ನೆಲೊಗಿ, ಜಯತೀರ್ಥ ತೆಂಗಳಿ, ದೀಪಕ ಸಾವಳಗಿ, ಬಾಬಣ್ಣ ಮೈನಾಳ, ಮನೋಹರರಾವ, ಪ್ರಹ್ಲಾದ ಭಟ್, ನಾರಾಯಣರಾವ್, ನಾಗೇಶ ಸಿಂದೆ, ಗೋವರ್ಧನ ದೇಶಪಾಂಡೆ, ವಿಜಯಾಬಾಯಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.