
ಕಲಬುರಗಿ: ‘ಶಾಸಕ ಬಿ.ಆರ್.ಪಾಟೀಲ ಅವರು ಮಾಡಿರುವ ವೋಟ್ ಚೋರಿ ಆರೋಪ ಕಟ್ಟುಕಥೆ. ಹಿಂದೆ ನನ್ನ ಮೇಲೆ 23 ಮರ್ಡರ್ ಕೇಸ್ ಕೂಡ ಹಾಕಿದ್ದರು. ನ್ಯಾಯಾಲಯಕ್ಕೆ ಹೋದ ಮೇಲೆ ನ್ಯಾಯ ಸಿಕ್ಕಿದೆ. ಈ ಪ್ರಕರಣದಲ್ಲೂ ನಾವು ಕೋರ್ಟ್ಗೆ ಹೋಗುತ್ತೇವೆ’ ಎಂದು ಮಾಜಿ ಶಾಸಕ ಸುಭಾಷ್ ಗುತ್ತೇದಾರ ಶನಿವಾರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮುಂದಿನ ಚುನಾವಣೆಯಲ್ಲಿ ಗೆಲ್ಲುವುದಿಲ್ಲ ಎಂದುಕೊಂಡು ನಾನು ಹಾಗೂ ನನ್ನ ಮಗ (ಹರ್ಷಾನಂದ) ಸಹ ಚುನಾವಣೆಯಲ್ಲಿ ಸ್ಪರ್ಧಿಸದಂತೆ ಮಾಡುವುದು ಬಿ.ಆರ್.ಪಾಟೀಲರ ಉದ್ದೇಶವಾಗಿದೆ’ ಎಂದು ಆರೋಪಿಸಿದರು.
‘2023ರಲ್ಲಿ ಚುನಾವಣೆ ನಡೆದಿದೆ. ಎರಡೂವರೆ ವರ್ಷ ಮಾತನಾಡಿಲ್ಲ. ಈಗ ರಾಹುಲ್ ಗಾಂಧಿ ಹೇಳಿದ ಮೇಲೆ ನಮ್ಮಲ್ಲಿಯೂ ವೋಟ್ ಚೋರಿ ಆಗಿದೆ ಎಂದಿದ್ದಾರೆ’ ಎಂದು ಹೇಳಿದರು.
‘ಎಸ್ಐಟಿಯವರು ನನಗೆ, ಮಗನಿಗೆ ಕರೆಯಿಸಿ ಹೇಳಿಕೆ ಪಡೆದಿದ್ದಾರೆ. ‘ಏನೂ ಗೊತ್ತಿಲ್ಲ. ವೋಟ್ ಚೋರಿ ಮಾಡಿಲ್ಲ’ ಎಂದು ಹೇಳಿದ್ದೇವೆ. ರಾಜ್ಯದ ಕಾಂಗ್ರೆಸ್ ಸರ್ಕಾರದ ಮಾತು ಕೇಳಿ ನಮ್ಮ ವಿರುದ್ಧ ಚಾರ್ಚ್ಶೀಟ್ ಹಾಕಿದ್ದಾರೆ. ಆಳಂದದಲ್ಲಿ ವೋಟ್ ಚೋರಿ ಆಗಿಲ್ಲ ಎಂದು ಸ್ವತಃ ಚುನಾವಣಾ ಅಧಿಕಾರಿಯೇ ಹೇಳಿದ್ದಾರೆ. ಇದಕ್ಕಿಂತ ಇನ್ನೇನು ಬೇಕು?’ ಎಂದರು.
ಆಳಂದ ಕ್ಷೇತ್ರದಲ್ಲಿ ಮತಗಳವು ಆರೋಪ ಕುರಿತು ಈಗಾಗಲೇ ಚುನಾವಣಾ ಆಯೋಗ ಸ್ಪಷ್ಟನೆ ನೀಡಿದೆ. ದೋಷಾರೋಪ ಪಟ್ಟಿಯಲ್ಲಿ ಏನಿದೆ ಎಂದು ತಿಳಿದಿಲ್ಲ. ಆ ಕುರಿತು ಕೋರ್ಟ್ ತೀರ್ಪು ಸಹ ನೀಡಿಲ್ಲ.ಪ್ರಲ್ಹಾದ ಜೋಶಿ, ಕೇಂದ್ರ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.