
ವಾಡಿ: ಕಲಬುರಗಿ – ಯಾದಗಿರಿ ನಡುವಣ ರಾಷ್ಟ್ರೀಯ ಹೆದ್ದಾರಿ–150ರ ಈಚೆಗೆ ವಾಹನಗಳ ಓಡಾಟ ಹೆಚ್ಚಾಗುತ್ತಿದ್ದು, ಸರ್ವಿಸ್ ರಸ್ತೆ ಇಲ್ಲದ ಕಾರಣ ಸಾರಿಗೆ ಬಸ್ಗಳು ರಸ್ತೆ ಮೇಲೆಯೇ ನಿಂತು ಪ್ರಯಾಣಿಕರನ್ನು ಹತ್ತಿ ಇಳಿಸಿಕೊಳ್ಳುವುದು ಮಾಡುತ್ತಿವೆ. ಬಸ್ಗಳು ನಿಂತಾಗ ಹಿಂದೆ ಸಾಲಾಗಿ ವಾಹನಗಳು ನಿಂತು ಟ್ರಾಫಿಕ್ ಸಮಸ್ಯೆ ಉಂಟು ಮಾಡುತ್ತಿವೆ. ಇದು ಸುರಕ್ಷತೆಗೆ ಸಹ ದೊಡ್ಡ ಸವಾಲಾಗುತ್ತಿದೆ.
ಹೆದ್ದಾರಿ ವಿನ್ಯಾಸ ಮಾಡುವಾಗ ಜನ ವಸತಿ ಪ್ರದೇಶದಲ್ಲಿ ಕಡ್ಡಾಯವಾಗಿ ಸರ್ವಿಸ್ ರಸ್ತೆ ಇಲ್ಲವೇ ಬಸ್ ವೇ (ಹೆದ್ದಾರಿ ಅಥವಾ ಮುಖ್ಯ ರಸ್ತೆಯ ಬದಿಯಲ್ಲಿ, ಮುಖ್ಯ ಸಂಚಾರಕ್ಕೆ ಅಡ್ಡಿಯಾಗದಂತೆ ಬಸ್ಗಳು ನಿಲ್ಲಲು ನಿರ್ದಿಷ್ಟವಾಗಿ ನಿರ್ಮಿಸಲಾದ ಒಂದು ಸಣ್ಣ ಪಕ್ಕದ ಮಾರ್ಗ ಅಥವಾ ಜಾಗ) ನಿರ್ಮಿಸಬೇಕು ಎನ್ನುವ ನಿಯಮ ಎಲ್ಲಿಯೂ ಪಾಲನೆಯಾಗಿಲ್ಲ.
ರಾವೂರು, ಬಲರಾಮ ಚೌಕ್, ಹಲಕರ್ಟಿ, ನಾಲವಾರ ಗ್ರಾಮಗಳಲ್ಲಿ ಜನದಟ್ಟಣೆ ಅಧಿಕವಾಗಿರುತ್ತದೆ. ಇಲ್ಲಿ ಸರ್ವಿಸ್ ರಸ್ತೆಗಳು ಇಲ್ಲದ ಕಾರಣ ಚಾಲಕರು ಅನಿವಾರ್ಯವಾಗಿ ಹೆದ್ದಾರಿ ಮೇಲೆಯೇ ಬಸ್ಗಳನ್ನು ನಿಲ್ಲಿಸಿ ಪ್ರಯಾಣಿಕರನ್ನು ಇಳಿಸುವ ಮತ್ತು ಹತ್ತಿಸಿಕೊಳ್ಳುವುದು ನಡೆಯುತ್ತಿದ್ದು ಟ್ರಾಫಿಕ್ ಕಿರಿಕಿರಿಗೆ ಕಾರಣವಾಗುತ್ತಿದೆ.
ಹೆದ್ದಾರಿ ಪಕ್ಕದಲ್ಲಿ ಸರ್ವಿಸ್ ರಸ್ತೆ ನಿರ್ಮಾಣಕ್ಕೆ ಒತ್ತುವರಿ ಬಹುದೊಡ್ಡ ಸವಾಲಾಗಿದೆ. ಹೆದ್ದಾರಿಗೆ ಹೊಂದಿಕೊಂಡೆ ಅಂಗಡಿಗಳು ನಿರ್ಮಿಸಿದ್ದು, ಸಮಸ್ಯೆಗೆ ಮೂಲಕಾರಣವಾಗಿದೆ. ಹೆದ್ದಾರಿ ಪ್ರಾಧಿಕಾರ ಮತ್ತು ಸ್ಥಳೀಯ ಸರ್ಕಾರಗಳು ರಸ್ತೆ ಸುರಕ್ಷತೆ ನೀತಿಗಳ ಅಡಿಯಲ್ಲಿ ಇಂತಹ ಸ್ಥಳಗಳನ್ನು ಗುರುತಿಸಿ, ಅಗತ್ಯವಿರುವ ಕಡೆಗಳಲ್ಲಿ ಸರ್ವೀಸ್ ರಸ್ತೆಗಳನ್ನು ನಿರ್ಮಿಸಲು ಕ್ರಮ ಕೈಗೊಳ್ಳಬೇಕು ಎನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.