
ವಾಡಿ: ಪಟ್ಟಣದ ರೈಲು ನಿಲ್ದಾಣ ಪರಿಶೀಲನೆ ಹಾಗೂ ಅಭಿವೃದ್ಧಿ ಕಾಮಗಾರಿ ವೀಕ್ಷಣೆಗೆ ಬುಧವಾರ ಪಟ್ಟಣದ ರೈಲು ನಿಲ್ದಾಣಕ್ಕೆ ಬಂದಿಳಿದ ಮಧ್ಯೆ ರೈಲ್ವೆ ಮುಖ್ಯ ವ್ಯವಸ್ಥಾಪಕ ಪ್ರತೀಕ ಗೋಸ್ವಾಮಿ ಅವರಿಗೆ ಮನವಿ ವಾಡಿಯ ರೈಲು ನಿಲ್ದಾಣಕ್ಕೆ ನಾಗರಿಕ ಸೌಲಭ್ಯ ಒದಗಿಸುವಂತೆ ಸ್ಥಳೀಯ ಜನಧ್ವನಿ ಜಾಗೃತಿ ಸಮಿತಿ ಸದಸ್ಯರು ಒತ್ತಾಯಿಸಿ ಸೌಲಭ್ಯ ಕಲ್ಪಿಸಲು ನಿರ್ಲಕ್ಷಿಸಿದರೆ ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದಾರೆ.
ಸ್ಥಳೀಯ ರೈಲು ನಿಲ್ದಾಣದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಹೊಸದಾಗಿ 5ನೇ ಪ್ಲಾಟ್ಫಾರ್ಮ್ ನಿರ್ಮಿಸಬೇಕು, ಪ್ರತಿ ಪ್ಲಾಟ್ಫಾರ್ಮ್ಗೆ ಲಿಫ್ಟ್ ಅಥವಾ ಎಸ್ಕಲೇಟರ್ ನಿರ್ಮಿಸಬೇಕು ಹಾಗೂ ಹೈದರಾಬಾದದಿಂದ ಬರುವ ಫಲಕನಾಮ್ ರೈಲು ಕಲಬುರಗಿವರೆಗೂ ವಿಸ್ತರಿಸಬೇಕು, ಕೊಲ್ಲಾಪುರ ಎಕ್ಸಪ್ರೆಸ್ ವಾಡಿಯಿಂದ ಆರಂಭಿಸಬೇಕು ಎಂದು ಸಮಿತಿಯ ಪ್ರಧಾನ ಕಾರ್ಯದರ್ಶಿ ಶೇಖ್ ಅಲ್ಲಾಭಕ್ಷ, ಉಪಾಧ್ಯಕ್ಷ ಸಿದ್ದಯ್ಯಶಾಸ್ತ್ರಿ ನಂದೂರಮಠ, ಮಹ್ಮದ್ ಯೂಸೂಫ ಸಾಬ್ ಮುಲ್ಲಾ, ಆನಂದ ಆರ್.ಎನ್., ವಿಠ್ಠಲ್ ರಾಠೋಡ, ಈರಣ್ಣ ಯಲಗಟ್ಟಿ, ಸುರೇಶ ನಾಟೇಕರ್ ಅವರ ನಿಯೋಗ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿತು.
ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರು ಎರಡು ಬಾರಿ ಪಟ್ಟಣದ ರೈಲು ನಿಲ್ದಾಣದಲ್ಲಿ ಇಳಿದು ಹಲವು ಗಂಟೆಗಳ ಸಮಯ ಕಳೆದ ಇತಿಹಾಸ ವಾಡಿ ಪಟ್ಟಣಕ್ಕಿದ್ದು, ರೈಲು ನಿಲ್ದಾಣಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ರೈಲು ನಿಲ್ದಾಣ ಎಂದು ಮರುನಾಮಕರಣ ಮಾಡಬೇಕು ಎಂದು ಗೋಸ್ವಾಮಿ ಅವರಿಗೆ ಬೌದ್ಧ ಸಮಾಜದ ಮುಖಂಡರು ಹಾಗೂ ವಾಡಿ ಟೌನ್ ಡೆವಲಪ್ಮೆಂಟ್ ಅಂಡ್ ಸಿಟಿಜನ್ ವೆಲ್ಫೇರ್ ಕಮಿಟಿ ಪದಾಧಿಕಾರಿಗಳು ಒತ್ತಾಯಿಸಿದರು.
ಕಲಬುರಗಿಯಿಂದ ಬೆಂಗಳೂರಿಗೆ ಪ್ರತ್ಯೇಕ ಫಾಸ್ಟ್ ಪ್ಯಾಸೆಂಜರ್ ರೈಲು ಆರಂಭಿಸಬೇಕು, ಕೋವಿಡ್ ಅವಧಿಯಲ್ಲಿ ರದ್ದುಮಾಡಿರುವ ರೈಲುಗಳು ಪುನಃ ಆರಂಭಿಸಬೇಕು, 5ನೇ ಪ್ಲಾಟ್ಫಾರ್ಮ್ ನಿರ್ಮಿಸಬೇಕೆಂದು ಅಧ್ಯಕ್ಷ ಅಮೃತ ಕೋಮಟೆ, ಉಪಾಧ್ಯಕ್ಷ ನಾಗೇಂದ್ರ ಜೈಗಂಗಾ, ಕಾರ್ಯದರ್ಶಿ ಶೇಖ್ ಅಲ್ತಾಫ್ ಸೌದಾಗರ, ವಿಶಾಲ ನಾಯಕ, ಬಸವರಾಜ ಕೇಶ್ವರ ಮನವಿಪತ್ರ ಮೂಲಕ ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.