ದೇವಾಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರೊಬ್ಬರು ಮಕ್ಕಳ ದಿನಾಚರಣೆಯ ನಿಮಿತ್ಯ ಸ್ವಂತ ಖರ್ಚಿನಲ್ಲಿ ಮಕ್ಕಳಿಗೆ ಬಟ್ಟೆ ವಿತರಿಸಿದರು
ವಾಡಿ: ಚಿತ್ತಾಪುರ ತಾಲ್ಲೂಕಿನ ದೇವಾಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕರೊಬ್ಬರು ಮಕ್ಕಳ ದಿನಾಚರಣೆಯ ಪ್ರಯುಕ್ತ ಸ್ವಂತ ಖರ್ಚಿನಲ್ಲಿ ಮಕ್ಕಳಿಗೆ ಬಟ್ಟೆ ಹಾಗೂ ಕಲಿಕಾ ಪರಿಕರ ವಿತರಿಸಿ ಮಕ್ಕಳ ದಿನಾಚರಣೆಗೆ ಮುನ್ನುಡಿ ಬರೆದಿದ್ದಾರೆ.
ಕಮರವಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೇವಾಪುರ ಸರ್ಕಾರಿ ಶಾಲೆಯ ಮುಖ್ಯಶಿಕ್ಷಕ ವಿಜಯಕುಮಾರ ಹರಿಭಟ್ಟ ಅವರು 26 ಮಕ್ಕಳಿಗೆ ಟೀ ಶರ್ಟ್ ಹಾಗೂ ಪ್ಯಾಂಟ್ ಜತೆಗೆ ಸುಮಾರು ₹3 ಸಾವಿರ ವೆಚ್ಚದ ಕಲಿಕಾ ಸಾಮಾಗ್ರಿ ನೀಡಿದರು.
ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉತ್ತೇಜನ ನೀಡಲು, ಮಕ್ಕಳು ಸಮವಸ್ತ್ರ ಧರಿಸಬೇಕು ಎನ್ನುವ ಉದ್ದೇಶದಿಂದ ಅಲ್ಪ ಹಣ ವ್ಯಯಿಸಿ ಈ ಕಾರ್ಯ ಮಾಡಿದ್ದು ವಾರದಲ್ಲಿ ಎರಡು ದಿನ ಈ ಸಮವಸ್ತ್ರ ಹಾಕಿಕೊಂಡು ಬರಲು ತಿಳಿಸಿದ್ದೇನೆ ಎನ್ನುತ್ತಾರೆ.ಮುಖ್ಯಶಿಕ್ಷಕ ವಿಜಯಕುಮಾರ.
ಮುಖ್ಯಶಿಕ್ಷಕರ ಕಾರ್ಯಕ್ಕೆ ಸಮೂಹ ಸಂಪನ್ಮೂಲ ವ್ಯಕ್ತಿ ಹೀರಾಬಾಯಿ ಸಾಗನೂರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಎಸ್ಡಿಎಂಸಿ ಅಧ್ಯಕ್ಷ ಕುಮಾರ ರಾಠೋಡ, ಗ್ರಾಮ ಪಂಚಾಯಿತಿ ಸದಸ್ಯ ಡಾಕು ರಾಠೋಡ, ರಮೇಶ ರಾಠೋಡ, ಹೀರಾ ಮಹಾರಾಜ್ ಅತಿಥಿ ಶಿಕ್ಷಕ ಬಸವರಾಜ ಪಾಟೀಲ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.