ವಾಡಿ: ಚಿತ್ತಾಪುರ ತಾಲ್ಲೂಕಿನ ಅಳ್ಳೊಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂಕನೂರು ಗ್ರಾಮಸ್ಥರಿಗೆ ಇಲ್ಲಿಯವರೆಗೂ ನಳದ ವ್ಯವಸ್ಥೆಯ ಪರಿಚಯವೇ ಇಲ್ಲ!
ಈಗಲೂ ಮಕ್ಕಳು, ವಯೋವೃದ್ಧರು, ಹಾಗೂ ಮಹಿಳೆಯರು ಬೆಳಿಗ್ಗೆ ಮತ್ತು ಸಂಜೆ ತಲೆ ಮೇಲೆ ಕೊಡ ಹೊತ್ತು ನೀರು ತರುವುದು ಇಲ್ಲಿ ಸಾಮಾನ್ಯ ಸಂಗತಿಯಾಗಿದೆ. ಮನೆಗೆ, ಜಾನುವಾರುಗಳಿಗೆ ಬೇಕಾದ ಅಪಾರ ಪ್ರಮಾಣದ ನೀರನ್ನು ಹೊತ್ತು ತರುವುದು ಇಲ್ಲಿ ನಿತ್ಯ ಕಾಯಕವಾಗಿದೆ.
3 ಸಾವಿರ ಜನಸಂಖ್ಯೆ ಇರುವ ಗ್ರಾಮಕ್ಕೆ ಕೇವಲ ಒಂದು ತೆರೆದ ಬಾವಿ ಆಸರೆಯಾಗಿದೆ. 1 ಕಿ.ಮೀ ದೂರದ ರಾಮಲಿಂಗೇಶ್ವರ ದೇವಸ್ಥಾನದ ಹತ್ತಿರ ಖಾಸಗಿ ವ್ಯಕ್ತಿಯೊಬ್ಬರ ಜಮೀನಿನಲ್ಲಿ ಹಾಕಲಾದ ಕೊಳವೆಬಾವಿಯ ನೀರನ್ನೇ ಬಾವಿಗೆ ಹರಿಸಲಾಗುತ್ತಿದೆ. ಬಾವಿಗೆ ಬೀಳುವ ನೀರನ್ನು ಜನರು ಸರದಿ ಸಾಲಿನಲ್ಲಿ ನಿಂತು ಹಗ್ಗದ ಮೂಲಕ ಸೇದಿ ತೆಗೆದುಕೊಂಡು ಹೋಗಬೇಕು.
ಬಾವಿಗೆ ಅಳವಡಿರುವ ಗಿರಕಿಗಳು ಮುರಿದು ಹೋಗಿವೆ. ಈಚೆಗೆ ಗ್ರಾಮದಲ್ಲಿ ಗುಮ್ಮಿ ಕೂಡಿಸಲಾಗಿದ್ದರೂ ಅದು ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಾಗಿದೆ ಎನ್ನುತ್ತಾರೆ ಗ್ರಾಮಸ್ಥರು.
ಸ್ವಲ್ಪ ಅನುಕೂಲ ಇದ್ದವರು ಎತ್ತಿನ ಬಂಡಿ ಮೂಲಕ ನೀರು ತರಿಸುತ್ತಾರೆ. ಬಡವರಿಗೆ ಮಾತ್ರ ಆ ಭಾಗ್ಯವಿಲ್ಲ. ಅವರು ನೀರನ್ನು ಹೊತ್ತುಕೊಂಡೇ ತರಬೇಕು. ಹಲವು ಸಲ ಇಡೀ ಕುಟುಂಬದ ಸದಸ್ಯರು ನೀರಿಗಾಗಿ ಬೀದಿಗಿಳಿಯುತ್ತಾರೆ.
'ಪ್ರತಿ ದಿನ ಮನೆಗೆ ಬೇಕಾದ ನೀರನ್ನು ಹೊತ್ತು ತಂದು ಹೈರಾಣಾಗುತ್ತಿದ್ದೇವೆ. ಸಣ್ಣ ಮಕ್ಕಳನ್ನು ಹಾಗೂ ವಯಸ್ಸಾದವರನ್ನು ದೂರದ ಬಾವಿಯಿಂದ ನೀರು ಸೇದಿ ತರಲು ಕಳಿಸಬೇಕಾದರೆ ಹೊಟ್ಟೆಯೊಳಗೆ ಬೆಂಕಿ ಬಿದ್ದಂಗ ಆಗುತ್ತದೆ. ನೀರಿನ ವ್ಯವಸ್ಥೆ ಇಲ್ಲದ ಕಾರಣ ಶೌಚಾಲಯ ಕಟ್ಟಿಸಿಕೊಳ್ಳಲು ಸಮಸ್ಯೆ ಆಗುತ್ತಿದೆ' ಎಂದು ಗ್ರಾಮಸ್ಥರು ‘ಪ್ರಜಾವಾಣಿ’ಯೊಂದಿಗೆ ಅಳಲು ತೋಡಿಕೊಂಡರು.
ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಗ್ರಾಮಸ್ಥರ ಆಹವಾಲು ಸ್ವೀಕರಿಸಿ ನೀರಿನ ವ್ಯವಸ್ಥೆ ಕಲ್ಪಿಸದಿರುವುದು ಆಶ್ಚರ್ಯ ಉಂಟು ಮಾಡಿದೆ. ಪ್ರತಿಷ್ಠಿತ ರಾಜಕಾರಣಿಗಳ ತವರೂರು ಆಗಿರುವ ಈ ಗ್ರಾಮದಲ್ಲಿ ನೀರಿನ ಸೌಲಭ್ಯ ಇಲ್ಲದಿರುವುದು ಬೇಸರ ಮೂಡಿಸಿದೆ. ನೀರು ನಿರ್ವಹಣೆ ಹೆಸರಿನಲ್ಲಿ ಗ್ರಾಮಕ್ಕೆ ಅನುದಾನ ಹರಿದು ಬಂದಿದೆ. ಆದರೆ ಅದು ಕೇವಲ ಕಾಗದಕ್ಕಷ್ಟೇ ಸೀಮಿತವಾಗಿದ್ದು, ವಾಸ್ತವದಲ್ಲಿ ಇಲ್ಲ ಎಂದು ಗಂಭೀರವಾಗಿ ಆರೋಪಿಸುತ್ತಾರೆ ಸ್ಥಳೀಯರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.