ಕಾಳಗಿ ತಾಲ್ಲೂಕಿನ ಕೋಡ್ಲಿ ಹೊರವಲಯದ ಹನುಮಾನ ಮಂದಿರದ ಬಳಿ ಹರಿಯುತ್ತಿರುವ ನೀರಿನ ಮನಮೋಹಕ ದೃಶ್ಯ
ಕಾಳಗಿ: ದೃಷ್ಟಿ ಹಾಯಿಸಿದಲ್ಲೆಲ್ಲ ಹಚ್ಚಹಸಿರಿನ ಹೊದಿಕೆ. ಏರಿಳಿತದ ಸಸ್ಯಕ್ಷೇತ್ರದ ನಡುವೆ ಕೇಸರಿ ಬಣ್ಣದ ಶಿಖರ. ಇಲ್ಲಿ ಬಂದು ನೋಡಿದಾಗ ಜುಳುಜುಳು ಹರಿಯುವ ನೀರಿನ ಶಬ್ದ ಕಿವಿಗೆ ಬೀಳದೆ ಇರದು.
ಹೌದು, ಅಂಥದೊಂದು ಜಲಪಾತದ ಅನುಭವ ಕಾಣಸಿಗುವುದು ತಾಲ್ಲೂಕಿನ ಕೋಡ್ಲಿ ಹೊರವಲಯದ ಒಡೆಯ ಹನುಮಾನ ಮಂದಿರ ಬಳಿ.
ಕೋಡ್ಲಿ ಗ್ರಾಮದಿಂದ 2ಕಿ.ಮೀ ಅಂತರದಲ್ಲಿರುವ ಕಿತ್ತೂರುರಾಣಿ ಚನ್ನಮ್ಮ ವಸತಿ ಶಾಲೆ ಬಳಿವಿರುವ ಹನುಮಾನ ಗುಡಿ ಕಡೆಗೆ ಬಂದರೆ ಸಾಕು ಮನಮೋಹಕ ದೃಶ್ಯ ಕಾಣಸಿಗುತ್ತದೆ.
ದೇವಸ್ಥಾನದ ಹಿಂಬದಿಯ ಗುಡ್ಡದಲ್ಲಿ ಚಾಚಿದ ಹಸಿರು, ಈ ನಡುವೆ ಬಲಬದಿಯಲ್ಲಿ ಮೆಟ್ಟಿಲಂತಿರುವ ಕರಿಕಲ್ಲುಗಳ ಸಂದುಗಳಲ್ಲಿ ಕೇಳಿಬರುವ ನೀರಿನ ನಾದ ಕಿವಿಗೆ ಇಂಪು ನೀಡುತ್ತದೆ. ಈ ಶಬ್ದ ಕೇಳುತ್ತ ಗುಡ್ಡ ಹತ್ತುತ್ತಿದ್ದರೆ ಚಾರಣದ ಅನುಭವ. ಹಾಲ್ನೊರೆಯಂತೆ ಧುಮಕುವ ನೀರು ನೋಡುವುದೇ ಕಣ್ಣಿಗೆ ಹಬ್ಬ.
ಜುಳುಜುಳು ಹರಿಯುವ ಜಲದ ರಮ್ಯನೋಟ ಆನಂದಿಸುತ್ತ ಜಲಪಾತದ ಅನುಭವ ಸವಿಯುವುದು ಒಂದೆಡೆಯಾದರೆ, ಅಲ್ಲಿ ನಿಂತು ಕಣ್ಣಾಡಿಸುವ ಪ್ರವಾಸಿಗರ ದೂರದೃಷ್ಟಿಗೆ ಮಿನಿ ಮಲೆನಾಡು ಕಾಣಿಸದೆ ಇರದು.
ಇನ್ನು ಕೆಳಗಿಳಿದು ಎಡಭಾಗದ ಕಚ್ಚಾರಸ್ತೆಯಲ್ಲಿ ಹೆಜ್ಜೆ ಹಾಕಿದರೆ, ಅಲ್ಲಾಪುರ ಕೆರೆ ಆಕರ್ಷಣೆ ಮನಸ್ಸಿಗೆ ಮುದ ನೀಡುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.