ಚಿಂಚೋಳಿ: ತಾಲ್ಲೂಕಿನ ರುದ್ನೂರು ಗ್ರಾಮದ ಪ್ರಗತಿಪರ ಲಿಂಗಶೆಟ್ಟಿ ತಟ್ಟೆಪಳ್ಳಿ ಅವರು ತಮ್ಮ ತೋಟದಲ್ಲಿ ಒಂದು ಹೆಕ್ಟೇರ್ನಲ್ಲಿ ಬೆಳೆದ ಕಲ್ಲಂಗಡಿ ಹಣ್ಣುಗಳನ್ನು ಮಾರಾಟವಾಗದ ಕಾರಣ ಮನೆಯ ಎಮ್ಮೆ ಹಾಗೂ ಹಸುಗಳಿಗೆ ಮೇವಿನ ರೂಪದಲ್ಲಿ ತಿನ್ನಿಸುತ್ತಿದ್ದಾರೆ.
‘ಕೊರೊನಾ ತಡೆಗೆ ಲಾಕ್ಡೌನ್ ಜಾರಿಯಾಗಿದ್ದರಿಂದ ಕೃಷಿಕರ ಉತ್ಪನ್ನಗಳು ನೆಲ ಕಚ್ಚಿವೆ. ರಂಜಾನ್ ಸಮಯದಲ್ಲಿ ಉತ್ತಮ ದರ ಸಿಗಬೇಕಿದ್ದ ಕಲ್ಲಂಗಡಿ ಹಣ್ಣುಗಳನ್ನು ಕೇಳುವವರೇ ಇಲ್ಲದಂತಾಗಿದೆ’ ಎಂದು ತಾಲ್ಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ ಹಾಗೂ ಪಿಕಾರ್ಡ್ ಬ್ಯಾಂಕಿನ ಮಾಜಿ ಅಧ್ಯಕ್ಷರೂ ಆದ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
‘10-12 ದಿನಗಳ ಹಿಂದೆ 18 ಟನ್ ಕಲ್ಲಂಗಡಿ ಹಣ್ಣುಗಳನ್ನು ಶಾಂತಲಿಂಗ ಮಾಶಾಳ ಎಂಬುವವರಿಗೆ ಪ್ರತಿ ಕೆ.ಜಿಗೆ ₹6 ದರದಲ್ಲಿ ಮಾರಾಟ ಮಾಡಿದ್ದಾರೆ. ಇನ್ನೂ 10ರಿಂದ12 ಟನ್ ಕಲ್ಲಂಗಡಿ ಕೊಯ್ಲಿಗೆ ಬಂದಿದ್ದು, ಹಣ್ಣುಗಳನ್ನು ಕೊಯ್ಲು ಮಾಡಿ ನೆರಳಿನಲ್ಲಿಡಿ ನಾನು ಲಾರಿ ತೆಗೆದುಕೊಂಡು ಬಂದು ಹಣ್ಣು ಒಯ್ಯುತ್ತೇನೆ ಎಂದು ಹೇಳಿದವನು ಮರಳಿ ಬಂದಿಲ್ಲ. ಹಣ್ಣುಗಳನ್ನು ಮಾರಾಟ ಮಾಡಲಾಗದೆ ಮನೆಯ ಜಾನುವಾರುಗಳಿಗೆ ತಿನ್ನಿಸುತ್ತಿದ್ದೇವೆ’ ಎಂದರು.
‘ಕಲ್ಲಂಗಡಿ ಬೇಸಾಯಕ್ಕೆ ₹1.5 ಲಕ್ಷ ಖರ್ಚು ಮಾಡಿದ್ದೇನೆ. ₹1.10 ಲಕ್ಷ ಆದಾಯ ಬಂದಿದೆ. ₹40 ಸಾವಿರ ನಷ್ಟ ಅನುಭವಿಸಿದ್ದೇನೆ’ ಎಂದರು.
‘ಪಕ್ಕದ 4 ಎಕರೆ ಹೊಲದಲ್ಲಿ ಈರುಳ್ಳಿ ಗಡ್ಡೆ ಬೆಳೆದಿರುವ ಈ ರೈತ ಇದರಿಂದ ₹1 ಲಕ್ಷ ಆದಾಯ ಪಡೆದಿದ್ದಾರೆ. ಇನ್ನೂ ಮನೆಯಲ್ಲಿ, ಬಂಧು ಬಾಂಧವರ ಮನೆಗಳಲ್ಲಿ ಅಂದಾಜು 10 ಟನ್ ಈರುಳ್ಳಿ ಗಡ್ಡೆ ಶೇಖರಿಸಿ ಇಟ್ಟಿದ್ದೇವೆ. ಇವುಗಳು ಮಾರಾಟ ಆಗುತ್ತಿಲ್ಲ. ಗಡ್ಡೆಗಳು ಕೆಡದಂತೆ ಕಾಪಾಡಲು ನಿತ್ಯ ಕೈಯಾಡಿಸುವುದೇ ಕೆಲಸವಾಗಿದೆ’ ಎಂದರು.
‘ಈರುಳ್ಳಿ ಬೇಸಾಯಕ್ಕೆ ₹2.5 ಲಕ್ಷ ಖರ್ಚು ಮಾಡಿದ್ದೇನೆ. ಸದ್ಯ ₹1 ಲಕ್ಷ ಆದಾಯ ಬಂದಿದೆ. ಮನೆಯಲ್ಲಿರುವ ಗಡ್ಡೆಗಳು ಮಾರಾಟವಾದರೆ ₹50ರಿಮದ 60 ಸಾವಿರ ಬರುತ್ತದೆ. ಆದರೆ ಬೇಸಾಯಕ್ಕೆ ಮಾಡಿದ ಖರ್ಚಿನಲ್ಲೇ ₹1 ಲಕ್ಷ ಖೋತಾ ಆಗುತ್ತಿದೆ. ಈ ರೀತಿ ಕಳೆದ ನಾಲ್ಕು ತಿಂಗಳಲ್ಲಿ ₹1.5 ಲಕ್ಷ ನಷ್ಟವಾಗಿದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.