ADVERTISEMENT

ಅಕ್ಷರ ದಾಸೋಹ: ವೇತನ ಹೆಚ್ಚಳಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2012, 7:40 IST
Last Updated 12 ಅಕ್ಟೋಬರ್ 2012, 7:40 IST

ಮಡಿಕೇರಿ:  ಜಿಲ್ಲೆಯೂ ಸೇರಿದಂತೆ ರಾಜ್ಯದ ಶಾಲೆಗಳಲ್ಲಿ ದುಡಿಯುತ್ತಿರುವ ಅಕ್ಷರ ದಾಸೋಹ ನೌಕರರಿಗೆ ವೇತನ ಹೆಚ್ಚಿಸುವಂತೆ ಒತ್ತಾಯಿಸಿ ಅಕ್ಷರ ದಾಸೋಹ ನೌಕರರ ಸಂಘದ ಪದಾಧಿಕಾರಿಗಳು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.

ಅಕ್ಷರ ದಾಸೋಹ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಎ.ಮಹಾದೇವ ಮಾತನಾಡಿ, ಕಳೆದ ಹಲವು ವರ್ಷಗಳಿಂದ ಕಡಿಮೆ ವೇತನಕ್ಕೆ ದುಡಿಯುತ್ತಿರುವ ನೌಕರರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.

ಅಕ್ಷರ ದಾಸೋಹ ನೌಕರರನ್ನು ಕಾಯಂ ಮಾಡಬೇಕು. ದಿನವೊಂದಕ್ಕೆ 200 ರೂಪಾಯಿ ವೇತನ ನೀಡಬೇಕು. ಬೆಲೆ ಏರಿಕೆಯ ಆಧಾರದಲ್ಲಿ ತಿಂಗಳ ಸಂಭಾವನೆ ಹೆಚ್ಚಿಸಬೇಕು ಎಂದು ಅವರು ಒತ್ತಾಯಿಸಿದರು.

ಈಗಾಗಲೇ ವಿಲೀನವಾಗಿರುವ ಶಾಲೆಗಳ ಶಿಕ್ಷಕರನ್ನು ಬೇರೆ ಶಾಲೆಗೆ ವರ್ಗಾವಣೆ ಮಾಡುತ್ತಿರುವಂತೆ ಬಿಸಿಯೂಟ ನೌಕರರನ್ನೂ ವರ್ಗಾವಣೆ ಮಾಡಬೇಕೆಂದು ಆಗ್ರಹಿಸಿದರು.

ನೌಕರರಿಗೆ ಪಂಚಾಯಿತಿ ನೌಕರರು ಹಾಗೂ ಸದಸ್ಯರಿಂದ ಕಿರುಕುಳ ನೀಡುವುದು ನಿಲ್ಲಬೇಕು. ಅಕ್ಷರ ದಾಸೋಹವನ್ನು ಖಾಸಗೀಕರಣ ಮಾಡಬಾರದು. ನೌಕರರ ನೇಮಕಾತಿಯ ಅಧಿಕಾರವನ್ನು ಪಂಚಾಯಿತಿಗೆ ನೀಡದೆ ಇಲಾಖೆಯೇ ನಿರ್ವಹಿಸಬೇಕು. ಏಪ್ರಿಲ್ ಹಾಗೂ ಮೇ ತಿಂಗಳ ರಜೆ ಸಂಬಳ ನೀಡಬೇಕು ಎಂದು ಆಗ್ರಹಿಸಿದರು.

ಅಡುಗೆ ಮಾಡುವ ಸಂದರ್ಭದಲ್ಲಿ ಯಾವುದಾದರು ಅನಾಹುತ ಸಂಭವಿಸಿದ್ದಲ್ಲಿ 1 ಲಕ್ಷ ರೂಪಾಯಿ ಪರಿಹಾರ ನೀಡಬೇಕು. ನೌಕರರಿಗೆ ಅಂತ್ಯೋದಯ ಕಾರ್ಡ್ ನೀಡಬೇಕು ಎಂದು ಆಗ್ರಸಿದರು.

ತಮ್ಮ ಬೇಡಿಕೆ ಈಡೇರದಿದ್ದಲ್ಲಿ ಅ.20 ರಂದು ವಿಧಾನಸೌಧ ಚಲೋ ಚಳವಳಿ ನಡೆಸುವುದಾಗಿ ಅವರು ಎಚ್ಚರಿಕೆ ನೀಡಿದರು.

ಸಂಘದ ಅಧ್ಯಕ್ಷೆ ಕಾವೇರಿ, ಉಪಾಧ್ಯಕ್ಷೆ ನಾಗಮ್ಮ ಹಾಗೂ ಕುಸುಮಾ, ಕಾರ್ಯದರ್ಶಿ ಜಾಜಿ, ಖಜಾಂಚಿ ಪ್ರಮೀಳಾ ಹಾಗೂ ಜಿಲ್ಲೆಯ ಹಲವು ಶಾಲೆಯ ಅಕ್ಷರ ದಾಸೋಹ ನೌಕರರು ಪಾಲ್ಗೊಂಡಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.