ADVERTISEMENT

ಆಸ್ತಿ ಕಲಹ: ಮಗನಿಂದಲೇ ತಂದೆಯ ಕೊಲೆ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2013, 5:25 IST
Last Updated 13 ಏಪ್ರಿಲ್ 2013, 5:25 IST

ಶನಿವಾರಸಂತೆ: ಆಸ್ತಿಯಲ್ಲಿ  ಸರಿಯಾಗಿ ಪಾಲು ಕೊಡಲಿಲ್ಲ ಎಂಬ ಕಾರಣಕ್ಕೆ ಮಗನೊಬ್ಬ ತಂದೆಯನ್ನೇ ದೊಣ್ಣೆ ಯಿಂದ ಹೊಡೆದು ಕೊಲೆ ಮಾಡಿದ ಘಟನೆ ಸಮೀಪದ ಹೊನ್ನೆಕೋಡಿ ಗ್ರಾಮದಲ್ಲಿ ಗುರುವಾರ ಬೆಳಿಗ್ಗೆ ನಡೆದಿದೆ.

ಕೊಡ್ಲಿಪೇಟೆ ಹೋಬಳಿಯ ಹೊನ್ನೆಕೋಡಿ ಗ್ರಾಮದ ಕೂಲಿ ಕಾರ್ಮಿಕ ಮರಿಶೆಟ್ಟಿ (65) ಕೊಲೆಗೀಡಾದ ವ್ಯಕ್ತಿ. ಇವರ ಮಗ ಕೆ.ಎಂ. ಪ್ರಸನ್ನ ಕೊಲೆ ಆರೋಪಿ. ಆಸ್ತಿಯಲ್ಲಿ ತನಗೆ ಕಡಿಮೆ ಪಾಲು ಬಂದಿದೆ ಎಂಬ ಕಾರಣಕ್ಕೆ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.

ಮರಿಶೆಟ್ಟಿ ಅವರಿಗೆ ಐವರು ಮಕ್ಕಳಿದ್ದು, ಮೂವರು ಪುತ್ರಿಯರಿಗೆ ವಿವಾಹವಾಗಿದೆ. ಇಬ್ಬರು ಗಂಡು ಮಕ್ಕಳಲ್ಲಿ ಹಿರಿಯ ಮಗ ಕೆ.ಎಂ. ಪ್ರಸನ್ನನಿಗೆ ಜೀವನ ನಿರ್ವಹಣೆಗಾಗಿ ಪಾಲಿನ ರೂಪದಲ್ಲಿ ಒಂದು ಮ್ಯಾಕ್ಸಿಕ್ಯಾಬ್ ವಾಹನ ಹಾಗೂ ಬೈಕ್ ತೆಗೆದುಕೊಟ್ಟಿದ್ದರು. ಕಿರಿಯ ಮಗ ಕೆ.ಎಂ. ಯೋಗೇಶ್‌ಗೆ ಟ್ರ್ಯಾಕ್ಟರ್ ಕೊಡಿ ಸಲಾಗಿತ್ತು. ಇಬ್ಬರೂ ಬೇರೆಬೇರೆ ಯಾಗಿ ಸಂಸಾರ ಮಾಡಿಕೊಂಡಿದ್ದರು. ಅಸಮಾಧಾನ ಗೊಂಡಿದ್ದ ಪ್ರಸನ್ನ ಆಗಾಗ್ಗೆ ತಂದೆಯ ಮನೆಗೆ ಬಂದು ತನಗೆ ಕೊಟ್ಟ ಪಾಲು ಕಡಿಮೆಯಾಗಿದೆ. ಉಳಿದ ಆಸ್ತಿಯಲ್ಲೂ ಪಾಲು ಕೊಡು ಎಂದು ಜಗಳವಾಡಿ ತಂದೆ ಮರಿಶೆಟ್ಟಿ ಹಾಗೂ ತಾಯಿ ಮೀನಾಕ್ಷಮ್ಮನಿಗೆ ಹೊಡೆ ಯುತ್ತಿದ್ದ ಎನ್ನಲಾಗಿದೆ.

ಅದೇ ರೀತಿ ಗುರುವಾರ ಯುಗಾದಿ ಹಬ್ಬದಂದು ನಸುಕಿನಲ್ಲೇ ಮನೆಗೆ ನುಗ್ಗಿದ ಪ್ರಸನ್ನ ಗಲಾಟೆ ಮಾಡಿ ತಂದೆ ಮರಿಶೆಟ್ಟಿಯನ್ನು ಹೊರಗೆಳೆದುಕೊಂಡು ಬಂದು ದೊಡ್ಡ ದೊಣ್ಣೆಯಿಂದ ತಲೆಯ ಹಿಂಭಾಗಕ್ಕೆ ಹಾಗೂ ಎಡಗಾಲಿಗೆ ಹೊಡೆದ. ತಲೆಯನ್ನು ಪಕ್ಕದಲ್ಲೇ ಇದ್ದ ಟ್ರ್ಯಾಕ್ಟರ್‌ನ ಟ್ರಾಲಿಯ ಕೊಂಡಿಗೆ ಅಪ್ಪಳಿಸಿದ. ಇದರಿಂದ ರಕ್ತದ ಮಡುವಿನಲ್ಲಿ ಬಿದ್ದು ಮರಿಶೆಟ್ಟಿ ಮೃತಪಟ್ಟರು.

ಬೆಳಕು ಹರಿಯುತ್ತಿದ್ದಂತೆ ರಸ್ತೆಯಲ್ಲಿ ಬಿದ್ದಿದ್ದ ರಕ್ತದ ಕಲೆಗಳನ್ನು ನೀರಿನಲ್ಲಿ ಒರೆಸಿ, ಸ್ವಚ್ಛಗೊಳಿಸಿದ. ಅಲ್ಲದೇ ತಂದೆಯ ಅಂತ್ಯಸಂಸ್ಕಾರಕ್ಕೆ ಸಿದ್ಧತೆ ನಡೆಸಿದ್ದ. ವಾದ್ಯದವರಿಗೂ ಹೇಳಿ ಕಳುಹಿಸಿದ್ದ ಎನ್ನಲಾಗಿದೆ. ವಿಚಾರ ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸುತ್ತಿದ್ದಂತೆ ತನ್ನ ಬೈಕ್ ಏರಿದ ಆರೋಪಿ ಪ್ರಸನ್ನ ತಪ್ಪಿಸಿಕೊಳ್ಳಲು ಯತ್ನಿಸಿದ. ಪೊಲೀಸರೂ ಬೆನ್ನಟ್ಟಿ ಆರೋಪಿಯನ್ನು ನಿಲುವಾಗಿಲು ಗ್ರಾಮದ ಬಳಿ ಬಂಧಿಸಿದರು.

ಮರಿಶೆಟ್ಟಿ ಅವರ ಪತ್ನಿ ಮೀನಾಕ್ಷಮ್ಮ ನೀಡಿದ ದೂರಿನ ಅನ್ವಯ ಪಿಎಸ್‌ಐ ಆನಂದ್‌ಕುಮಾರ್ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಆರೋಪಿ ಪ್ರಸನ್ನ ಈ ಹಿಂದೆಯೂ 1999ರಲ್ಲಿ ತನ್ನ ಬಾವ ಕೃಷ್ಣಮೂರ್ತಿ ಎಂಬುವವರ ಕೊಲೆಯಲ್ಲಿ ಭಾಗಿಯಾಗಿ ಜೈಲುವಾಸ ಅನುಭವಿಸಿದ್ದ. ಈ ಮೊಕದ್ದಮೆ ಇನ್ನೂ ನ್ಯಾಯಾಲ ಯದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.