ADVERTISEMENT

ಇಂದು ಚುನಾವಣೆ: ತ್ರಿಕೋನ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2011, 9:25 IST
Last Updated 27 ಫೆಬ್ರುವರಿ 2011, 9:25 IST

ವಿರಾಜಪೇಟೆ: ಪಟ್ಟಣ ಪಂಚಾಯಿತಿಯ 12ನೇ ವಾರ್ಡ್ ಉಪ ಚುನಾವಣೆಗೆ ಮೂರು ಪಕ್ಷಗಳ ಅಭ್ಯರ್ಥಿಗಳು ಸ್ಪರ್ಧಿಸಿದ್ದು, ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.
ಕಾಂಗ್ರೆಸ್ ಪಕ್ಷದಿಂದ ಖದೀಜಾ, ಬಿಜೆಪಿಯಿಂದ ಎಂ.ಕೆ. ದೇಚಮ್ಮ ಹಾಗೂ ಜೆಡಿಎಸ್‌ನಿಂದ ಸಿ.ಪಿ. ಶೀಬಾ ಸ್ಪರ್ಧಿಸಿದ್ದಾರೆ. ಮಹಿಳಾ ಮೀಸಲು ಕ್ಷೇತ್ರವಾದ ಈ ವಾರ್ಡ್‌ನಲ್ಲಿ ಒಟ್ಟು 620 ಮತದಾರರಿದ್ದು, ಮೂರು ಪಕ್ಷಗಳ ನಡುವೆ ತೀವ್ರ ಪೈಪೋಟಿ ಉಂಟಾಗಿದೆ.

2007ರ ಜುಲೈನಲ್ಲಿ ಪಟ್ಟಣ ಪಂಚಾಯಿತಿಯ ಈ ಪ್ರತಿಷ್ಠಿತ ಕ್ಷೇತ್ರದಲ್ಲಿ ಜೆಡಿಎಸ್‌ನ ಕೆ.ಕಾಂತಿ ಬೆಳ್ಳಿಯಪ್ಪ ಗೆಲುವು ಸಾಧಿಸಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ರಾಜೀನಾಮೆ ನೀಡಿದ್ದರಿಂದ ಈ ಸ್ಥಾನ ತೆರವಾಗಿತ್ತು.

ಭಾನುವಾರ ಚುನಾವಣೆ ನಡೆಯಲಿದ್ದು, ಜೆಡಿಎಸ್‌ನ ಶೀಬಾ ಪಕ್ಷದ ಸ್ಥಾನ ಉಳಿಸಿಕೊಳ್ಳಲು ಪ್ರಯತ್ನ ನಡೆಸುತ್ತಿದ್ದರೆ, ಬಿಜೆಪಿ ಕೂಡ ಗೆಲುವು ಸಾಧಿಸಿ ಪಟ್ಟಣ ಪಂಚಾಯಿತಿಯಲ್ಲಿ ಬಹುಮತ ಪಡೆಯಲು ಶತಾಯ ಗತಾಯ ಹೋರಾಟ ನಡೆಸುತ್ತಿದೆ. ಕಾಂಗ್ರೆಸ್ ಅಲ್ಪಸಂಖ್ಯಾತ ಮತದಾರರು ಹಾಗೂ ಪಕ್ಷದ ಹಿತೈಷಿಗಳ ಬೆಂಬಲವನ್ನು ನಿರೀಕ್ಷಿಸಿ ಇತರ ಪಕ್ಷಗಳೊಂದಿಗೆ ಸಮಬಲ ಹೋರಾಟಕ್ಕೆ ಇಳಿದಿದೆ. ಸೋಮವಾರ ಮತಗಳ ಎಣಿಕೆ ನಡೆಯಲಿದೆ.

 ಕ್ರಮ ಎಚ್ಚರಿಕೆ
ವಿರಾಜಪೇಟೆ:
ಒಂದು ವರ್ಷದ ಹಿಂದೆಯೇ ಪಟ್ಟಣದಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧಿಸಿದ್ದರೂ ಕೆಲವು ವರ್ತಕರು ಅಕ್ರಮವಾಗಿ ಪ್ಲಾಸ್ಟಿಕ್ ಬ್ಯಾಗ್‌ಗಳನ್ನು ಮಾರಾಟ ಮಾಡುತ್ತಿರುವ ದೂರು ಪಟ್ಟಣ ಪಂಚಾಯಿತಿ ಕಚೇರಿಗೆ ಬಂದಿದ್ದು, ಇಂತಹ ವರ್ತಕರ ವಿರುದ್ಧ ದಂಡ ವಿಧಿಸುವುದರೊಂದಿಗೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಾಧಿಕಾರಿ ನಾಗರತ್ನಮ್ಮ ತಿಳಿಸಿದ್ದಾರೆ. ಈ ಹಿಂದೆ ಅಕ್ರಮವಾಗಿ ಪ್ಲಾಸ್ಟಿಕ್ ಬ್ಯಾಗ್ ಮಾರಾಟ ಮಾಡುವ ವರ್ತಕರನ್ನು ಪತ್ತೆ ಹಚ್ಚಿ ದಂಡ ವಿಧಿಸಲಾಗಿದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.