ADVERTISEMENT

ಕೊಡವ ನಾಟಕಗಳ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2012, 6:43 IST
Last Updated 14 ಡಿಸೆಂಬರ್ 2012, 6:43 IST

ಮಡಿಕೇರಿ: ಕೊಡವ ನಾಟಕಗಳ ಬಗ್ಗೆ  ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಲ್ಲಿ ಆಸಕ್ತಿ ಮೂಡಿಸಲು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಮೂಲಕ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ ಎಂದು ಅಕಾಡೆಮಿಯ ಅಧ್ಯಕ್ಷ ಅಡ್ಡಂಡ ಕಾರ್ಯಪ್ಪ ತಿಳಿಸಿದರು.

ನಗರದಲ್ಲಿರುವ ಈಚೆಗೆ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಅವರು, ಕೊಡಗಿನ ಆದಿ ಕವಿ ಮತ್ತು ರಂಗಭೂಮಿಯ ಆದ್ಯ ಪ್ರವರ್ತಕ ಹರದಾಸ ಅಪ್ಪಚ್ಚ ಕವಿಯ ನಾಲ್ಕು ನಾಟಕಗಳ ಸ್ಪರ್ಧೆಯನ್ನು ಕಾಲೇಜು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ಆಯೋಜಿಸಲಾಗಿದೆ.

ಅಪ್ಪಚ್ಚ ಕವಿಯ ಕಾವೇರಿ, ಯಾಯಾತಿ, ಸುಬ್ರಹ್ಮಣ್ಯ ಮತ್ತು ಸಾವಿತ್ರಿ ನಾಟಕಗಳಲ್ಲಿ ಯಾವುದಾದರೊಂದನ್ನು ಬಳಸಬೇಕು. ನಾಟಕವು 60ರಿಂದ 70 ನಿಮಿಷ ಅವಧಿಯೊಳಗಿರಬೇಕು.

ಬಹುಮಾನಗಳ ವಿವರ: ಪ್ರಥಮ ರೂ. 25 ಸಾವಿರ ಮತ್ತು ಪಾರಿತೋಷಕ. ದ್ವಿತೀಯ ರೂ. 15 ಸಾವಿರ ಮತ್ತು ಪಾರಿತೋಷಕ ಹಾಗೂ ತೃತೀಯ ರೂ. 10 ಸಾವಿರ ಮತ್ತು ಪಾರಿತೋಷಕವನ್ನು ನೀಡಲಾಗುವುದು.

ಯಾವುದೇ ನಾಟಕ ಪ್ರಯೋಗ
10ನೇ ತರಗತಿ ಒಳಗಿನ ವಿದ್ಯಾರ್ಥಿಗಳಿಗಾಗಿ ಕೊಡವ ಭಾಷೆಯಲ್ಲಿನ ಸಾಮಾಜಿಕ, ಚಾರಿತ್ರಿಕ, ಪೌರಾಣಿಕ ಯಾವುದೇ ನಾಟಕವನ್ನು ಪ್ರಯೋಗಿಸಲು ಅವಕಾಶವಿದೆ. (ಅಪ್ಪಚ್ಚ ಕವಿಯ ನಾಟಕವನ್ನು ಹೊರತುಪಡಿಸಿ ).

ಬಹುಮಾನಗಳ ವಿವರ: ಪ್ರಥಮ ರೂ. 15 ಸಾವಿರ ಮತ್ತು ಪಾರಿತೋಷಕ, ದ್ವಿತೀಯ ರೂ. 10 ಸಾವಿರ ಮತ್ತು ಪಾರಿತೋಷಕ ಹಾಗೂ ತೃತೀಯ ರೂ.  7 ಸಾವಿರ ಮತ್ತು ಪಾರಿತೋಷಕ ನೀಡಲಾಗುವುದು.

ಕೊಡವ ಪಾಟ್‌ಕೋರ್ ಆಟ್ ಪೈಪೋಟಿ: ಕೊಡವ ಹಾಡುಗಳಿಗೆ ನೃತ್ಯ ಸಂಯೋಜಿಸಿ, ಕೊಡವ ನೃತ್ಯ ಮತ್ತು ಗಾಯನ ಅಭಿವೃದ್ಧಿಪಡಿಸಲು ಅಕಾಡೆಮಿ ವಿಶೇಷ ಕಾರ್ಯಯೋಜನೆ ರೂಪಿಸಿದೆ. ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕ ನೃತ್ಯ ತಂಡಗಳಿಗೆ ಒಂದು ವಿಭಾಗ ಹಾಗೂ 10ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಒಂದು ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ.

ಬಹುಮಾನಗಳ ವಿವರ: ಪ್ರಥಮ ರೂ. 10 ಸಾವಿರ ಮತ್ತು ಪಾರಿತೋಷಕ. ದ್ವಿತೀಯ ರೂ. 7 ಸಾವಿರ ಮತ್ತು ಪಾರಿತೋಷಕ. ತೃತೀಯ ಬಹುಮಾನ ರೂ. 5 ಸಾವಿರ ಮತ್ತು ಪಾರಿತೋಷಕ ನೀಡಲಾಗುವುದು. ಈ ಸ್ಪರ್ಧೆಗಳಲ್ಲಿ ಭಾಗವಹಿಸುವ ತಂಡಗಳು ಡಿ. 20ರ ಒಳಗೆ ಪ್ರವೇಶ ಪತ್ರವನ್ನು ಅಕಾಡೆಮಿಯ ವಿಳಾಸಕ್ಕೆ ಕಳುಹಿಸಿಕೊಡಬೇಕು.

ಸ್ಪರ್ಧೆ ಜನವರಿ ಮೊದಲ ವಾರದಲ್ಲಿ ಮಡಿಕೇರಿಯಲ್ಲಿ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08272 229074, 94489 09788 ಅನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು. ಅಕಾಡೆಮಿ ಸದಸ್ಯರಾದ ಕಸ್ತೂರಿ ಗೋವಿಂದಮ್ಮ, ಮಿಟ್ಟು ಪೂಣಚ್ಚ, ಚರ್ಮಂಡ ಅಪ್ಪಣ್ಣ ಪೂವಯ್ಯ, ರೆಜಿಸ್ಟ್ರಾರ್ ಶಾಂತಮ್ಮ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.