ಸೋಮವಾರಪೇಟೆ (ಕೊಡಗು ಜಿಲ್ಲೆ): ಕಾಸರಗೋಡು ದೇವಸ್ಥಾನವೊಂದರ ಹೆಸರಿನಲ್ಲಿ ಕೊರಿಯರ್ ಮೂಲಕ ಬಂದಿದ್ದ ಪ್ರಸಾದ ಸೇವಿಸಿದ ತಣ್ಣೀರುಹಳ್ಳ ಗ್ರಾಮದ ವ್ಯಕ್ತಿಯೊಬ್ಬರು ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾರೆ.
‘ಕಣಾರ’ ಹೋಟೆಲ್ನಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ ಸುರೇಶ್ (38) ಮೃತಪಟ್ಟವರು.
‘ಕೊರಿಯರ್ನಲ್ಲಿ ಬಂದ ದ್ರಾವಣವನ್ನು ಸೇವಿಸಿ ಮೃತಪಟ್ಟಿದ್ದಾರೆ’ ಎಂದು ಅವರ ಪತ್ನಿ ರಾಧಾ ದೂರು ನೀಡಿದ್ದು ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಭಾನುವಾರ ಹೋಟೆಲ್ನಲ್ಲಿ ಕೆಲಸ ಮಾಡುತ್ತಿರುವಾಗ ಸುರೇಶ್ ಹೆಸರಿಗೆ ಕೊರಿಯರ್ನಲ್ಲಿ ಪಾರ್ಸಲ್ ಬಂದಿತ್ತು. ಅದನ್ನು ಮನೆಗೆ ತಂದ ಅವರು, ಅದನ್ನು ಮನೆಯ ಯಜಮಾನ ಮಾತ್ರ ಸೇವಿಸಬೇಕೆಂದು ಪತ್ರದಲ್ಲಿ ಬರೆದಿದ್ದಾರೆ ಎಂದು ತಿಳಿಸಿದರು. ನಂತರ, ಸ್ನಾನ ಮಾಡಿ ಪ್ರಸಾದ ಸೇವಿಸಿದ ಐದು ನಿಮಿಷದಲ್ಲಿಯೇ ರಕ್ತಕಾರಿ ಬಿದ್ದು ಮೃತಪಟ್ಟಿದ್ದಾರೆ’ ಎಂದು ರಾಧಾ ದೂರಿನಲ್ಲಿ ತಿಳಿಸಿದ್ದಾರೆ.
‘ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಮಾದರಿಯನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿ ಬಂದ ಬಳಿಕ ಕಾರಣ ತಿಳಿಯಲಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಕೊಲೆ ಉದ್ದೇಶವೇ?:
ಕೊಲೆ ಮಾಡುವ ಉದ್ದೇಶದಿಂದ ಕಾಸರುಗೋಡಿನಿಂದ ವಿಷ ಪೂರಿತ ದ್ರಾವಣವನ್ನು ಕೊರಿಯರ್ ಮೂಲಕ ದುಷ್ಕರ್ಮಿಗಳು ಕಳುಹಿಸಿರಬಹುದೇ ಎಂಬ ಶಂಕೆಯೂ ವ್ಯಕ್ತವಾಗಿದ್ದು ಪೊಲೀಸರು ಆ ನಿಟ್ಟಿನಲ್ಲಿ ತನಿಖೆ ಚುರುಕುಗೊಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.