ಕುಶಾಲನಗರ: ಜಿಲ್ಲೆಯಲ್ಲೇ ದೊಡ್ಡ ಗ್ರಾಮವೆಂಬ ಕೀರ್ತಿ ಪಡೆದಿರುವ ಹೆಬ್ಬಾಲೆಯ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂಭಾಗ ಪ್ರಯಾಣಿಕರು ಮತ್ತು ರೋಗಿಗಳಿಗೆ ಅನುಕೂಲವಾಗಲೆಂದು ನಿರ್ಮಿಸಿರುವ ತಂಗುದಾಣ ಗಿಡಗಂಟಿಗಳು ಬೆಳೆದು ಪಾಳುಬಿದ್ದಿದೆ. ಇಲ್ಲಿಗೆ ಬರುವ ರೋಗಿಗಳು ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.
ರಾಜ್ಯಸಭಾ ಸದಸ್ಯರಾಗಿದ್ದ ಪ್ರೇಮಾ ಕಾರ್ಯಪ್ಪ ಅವರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನಡಿ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಕಬ್ಬಿಣದಿಂದ ನಿರ್ಮಾಣಗೊಂಡಿರುವ ಈ ತಂಗುದಾಣ ಸಂಪೂರ್ಣ ಕಾಡು ಪಾಲಾಗಿದೆ. ಕಳೆದ ಒಂದು ವರ್ಷದವರೆಗೆ ತುಸುವೇ ಸರಿಯಾಗಿದ್ದ ಈ ತಂಗುದಾಣವು, ನೂತನವಾಗಿ ಕೊಣನೂರಿನಿಂದ ಮಾಕುಟ್ಟಕ್ಕೆ ರಾಜ್ಯ ಹೆದ್ದಾರಿ ನಿರ್ಮಿಸುವ ಸಂದರ್ಭದಲ್ಲಿ ಬಹುತೇಕ ಮುಚ್ಚಿ ಜನರು ಅಲ್ಲಿಗೆ ಹೋಗದ ಸ್ಥಿತಿ ನಿರ್ಮಾಣವಾಗಿದೆ.
ಇದರಿಂದಾಗಿ ಕ್ರಮೇಣ ಗಿಡಗಂಟಿಗಳು ಬೆಳೆದು, ಈಗ ಸಂಪೂರ್ಣ ನಿಷಿದ್ಧ ಪ್ರದೇಶ ಎಂಬಂತಾಗಿದೆ.
ಮುಖ್ಯವಾಗಿ ಶಿರಂಗಾಲ, ಹೆಬ್ಬಾಲೆ, ಹಳೇಗೋಟೆ, ಆರನೇ ಹೊಸಕೋಟೆ, ಅಳುವಾರ, ಚಿಕ್ಕಳುವಾರ, ದೊಡ್ಡಳುವಾರ ಸೇರಿದಂತೆ ಹತ್ತಾರು ಗ್ರಾಮಗಳ ಜನರು ಚಿಕ್ಕಪುಟ್ಟ ಆರೋಗ್ಯದ ಸಮಸ್ಯೆಯಾದರೂ ಇಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬರುತ್ತಾರೆ. ಇನ್ನೂ ಮುಖ್ಯವಾದ ಅಂಶವೆಂದರೆ, ಇಲ್ಲಿರುವ ಹೆರಿಗೆ ಆಸ್ಪತ್ರೆ ವಾರದ 24 ಗಂಟೆಯೂ ತೆರೆದಿರುತ್ತದೆ.
ಆಸ್ಪತ್ರೆಗೆ ಬರುವ ರೋಗಿಗಳು ಆಯಾಸವಾದರೆ ಕ್ಷಣಕಾಲ ಕುಳಿತು ಸುಧಾರಿಸಿಕೊಳ್ಳಲು ಬಯಸುತ್ತಾರೆ. ಅದರಲ್ಲೂ ಬೇರೆ ಗ್ರಾಮಗಳಿಂದ ಬರುವ ರೋಗಿಗಳು ಹೆಬ್ಬಾಲೆ ಬಸ್ ತಂಗುದಾಣದಲ್ಲಿ ಇಳಿದು ಅಲ್ಲಿಂದ ಅರ್ಧ ಕಿಲೋಮೀಟರ್ ಆಸ್ಪತ್ರೆಗೆ ನಡೆಯಬೇಕು. ಈ ಸಂದರ್ಭ ಆಯಾಸವಾದರೆ ಕುಳಿತು ಸುಧಾರಿಸಿಕೊಳ್ಳಲು ಸ್ಥಳಾವಕಾಶಕ್ಕಾಗಿ ಪರದಾಡುವ ದೃಶ್ಯ ಕಂಡುಬರುವುದು ಸರ್ವೇ ಸಾಮಾನ್ಯ.
ಆದರೆ, ಪ್ರಯಾಣಿಕರ ತಂಗುದಾಣ ಗಿಡಗಂಟಿಗಳ ಕೊಂಪೆಯಾಗಿ ಮಾರ್ಪಟ್ಟಿರುವುದರಿಂದ ಇಲ್ಲಿಗೆ ಯಾರು ಹೋಗುವಂತಿಲ್ಲ. ಬಸ್ ನಿಲ್ದಾಣದಿಂದ ಆಸ್ಪತ್ರೆಗೆ ನಡೆದು ಹೋಗುವ ಸಂದರ್ಭ ಆಯಾಸವಾದರೆ ರಸ್ತೆ ಬದಿಯಲ್ಲೇ ಕುಳಿತುಕೊಳ್ಳಬೇಕು. ಇಲ್ಲವೆ, ನೇರವಾಗಿ ಆಸ್ಪತ್ರೆವರೆಗೆ ನಡೆದು ಸಾಗಬೇಕು. ಹೀಗಾಗಿ, ಇಲ್ಲಿಗೆ ಬರುವ ರೋಗಿಗಳು ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.
ಇನ್ನಾದರೂ, ಸಂಬಂಧಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳು ಇತ್ತ ಗಮನಹರಿಸಿ ನಿಲ್ದಾಣವನ್ನು ಸ್ವಚ್ಛಗೊಳಿಸಿ ಕ್ಷಣಕಾಲದ ವಿಶ್ರಾಂತಿಗೆ ಅನುವು ಮಾಡಿಕೊಡಬೇಕು ಎಂಬುದು ರೋಗಿಗಳ ಆಗ್ರಹ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.