ಶನಿವಾರಸಂತೆ: ‘ಇಲ್ಲಿನ ನೆಮ್ಮದಿ ಕೇಂದ್ರದಿಂದ ಜನಸಾಮಾನ್ಯರಿಗೆ ನೆಮ್ಮದಿಯೇ ಇಲ್ಲವಾಗಿದೆ. ಬಹುತೇಕ ರೈತರು, ಕಾರ್ಮಿಕರೇ ಇರುವ ಹೋಬಳಿಯಲ್ಲಿ ಒಂದು ಚಿಕ್ಕ ಕೆಲಸಕ್ಕೂ 15 ದಿನಗಳವರೆಗೆ ಕೇಂದ್ರಕ್ಕೆ ಅಲೆದಾಡಬೇಕಾಗುತ್ತದೆ’ ಎಂದು ಜೆಡಿಎಸ್ ಮುಖಂಡರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ನೆಮ್ಮದಿ ಕೇಂದ್ರದ ಮುಂದೆ ಉಂಟಾಗಿದ್ದ ನೂಕುನುಗ್ಗಲು ಕಂಡು ಪ್ರತಿಕ್ರಿಯಿಸಿದ ಅವರು, ಆಧಾರ್ ಕಾರ್ಡ್, ವೃದ್ಧಾಪ್ಯ ವೇತನ, ಆರ್.ಟಿ.ಸಿ., ಆದಾಯ, ಜಾತಿ ದೃಢೀಕರಣ ಪತ್ರ ಇತರ ಎಲ್ಲಾ ಮಾಹಿತಿಗಳನ್ನು ನೆಮ್ಮದಿ ಕೇಂದ್ರದಿಂದಲೇ ಪಡೆಯಬೇಕಾಗಿದ್ದು, ಹೋಬಳಿಯ ಸಾವಿರಾರು ರೈತರು, ಕಾರ್ಮಿಕರು ಹಾಗೂ ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಗಿದೆ ಎಂದು ದೂರಿದರು.
ನೆಮ್ಮದಿ ಕೇಂದ್ರದಲ್ಲಿ ಒಂದೇ ಕಂಪ್ಯೂಟರ್ ಇದ್ದು, ಮತ್ತೊಂದರ ಅವಶ್ಯಕತೆಯಿದೆ. ಪಕ್ಕದ ಕೊಡ್ಲಿಪೇಟೆ ಹೋಬಳಿಯ ಕೇಂದ್ರದಲ್ಲಿ ಕಂದಾಯ ಪರಿವೀಕ್ಷಕರು ಇಲ್ಲದೆ ತೊಂದರೆಯಾಗಿದೆ. ಇಲ್ಲಿಗೂ ಶೀಘ್ರ ಅಧಿಕಾರಿಯ ನೇಮಕವಾಗಿ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ಡಿ.ಪಿ.ಭೋಜಪ್ಪ ಆಗ್ರಹಿಸಿದರು.
ಜಿಲ್ಲಾ ವಕ್ತಾರ ಆದಿಲ್ ಪಾಶ, ಕ್ಷೇತ್ರ ಉಪಾಧ್ಯಕ್ಷ ಬಿ.ಎನ್.ಮುತ್ತೇಗೌಡ, ಹೋಬಳಿ ಮಹಿಳಾ ಘಟಕದ ಅಧ್ಯಕ್ಷೆ ಕುಸುಮಾ ಸುಧಾಕರ್, ಆಲೂರು ಸಿದ್ದಾಪುರ ಕ್ಷೇತ್ರದ ಅಧ್ಯಕ್ಷ ಸೀಗೆಮರೂರು ಕುಮಾರಸ್ವಾಮಿ, ಪ್ರಮುಖರಾದ ಸಿ.ಕೆ.ಪೃಥ್ವಿ, ಲಿಯಾಕತ್, ರಾಜು, ಕೃಷ್ಣೇಗೌಡ ಇತರರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.