ADVERTISEMENT

ಸಂದೇಹ ಬಂದರೆ ಮತಯಂತ್ರ ಬದಲಾವಣೆ

ಕಾರ್ಯಾಗಾರದಲ್ಲಿ ವಿ.ವಿ ಪ್ಯಾಟ್‌ ಕುರಿತು ರಾಜಕೀಯ ಪಕ್ಷಗಳ ಮುಖಂಡರಿಗೆ ಮಾಹಿತಿ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2018, 12:09 IST
Last Updated 2 ಏಪ್ರಿಲ್ 2018, 12:09 IST

ಮಡಿಕೇರಿ: ವಿಧಾನಸಭೆ ಚುನಾವಣೆ ಸಂಬಂಧ ವಿದ್ಯುನ್ಮಾನ ಮತಯಂತ್ರ ಹಾಗೂ ವಿ.ವಿ ಪ್ಯಾಟ್ ಕಾರ್ಯ ವಿಧಾನದ ಬಗ್ಗೆ ಈಚೆಗೆ ಕಾರ್ಯಾಗಾರ ನಡೆಯಿತು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಈ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು. ಕಂಟ್ರೋಲ್ ಯುನಿಟ್ ಮತ್ತು ಬ್ಯಾಲೆಟ್ ಯುನಿಟ್ ಜೊತೆಗೆ ಮತದಾನ ಮಾಡಿರುವುದನ್ನು ಖಾತರಿ ಪಡಿಸಿಕೊಳ್ಳಲು ವಿ.ವಿ ಪ್ಯಾಟ್ ಬಳಕೆಗೆ ಬಂದಿದೆ. ವಿ.ವಿ ಪ್ಯಾಟ್‌ನಿಂದ ಮತದಾರರು ತಮ್ಮ ಮತವನ್ನು ಯಾರಿಗೆ ಚಲಾಯಿಸಲಾಗಿದೆ ಎಂಬುದನ್ನು ಖಾತರಿ ಪಡಿಸಿಕೊಳ್ಳಬಹುದು ಎಂದು ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಹೇಳಿದರು.

ವಿ.ವಿ ಪ್ಯಾಟ್ ಮೂಲಕ ಮತದಾರರು ತಾನು ಚಲಾಯಿಸಿದ ಮತವನ್ನು ಏಳು ಸೆಕೆಂಡ್‌ ವೀಕ್ಷಿಸಬಹುದು. ಚುನಾವಣೆ ಸಂದರ್ಭದಲ್ಲಿ ಮತದಾನಕ್ಕೆ ಮೊದಲು ಎಲ್ಲಾ ರಾಜಕೀಯ ಪಕ್ಷಗಳ ಸಮ್ಮುಖದಲ್ಲಿ ಅಣಕು ಮತದಾನ ಮಾಡಲಾಗುವುದು. ಯಾವುದೇ ಸಂದೇಹವಿದ್ದರೂ ಮತಯಂತ್ರ ಬದಲಾಯಿಸಲಾಗುವುದು ಎಂದು ಶ್ರೀವಿದ್ಯಾ ಹೇಳಿದರು.

ಮಾದರಿ ನೀತಿ ಸಂಹಿತೆ ಸಂಬಂಧಿಸಿದಂತೆ ಮಾಧ್ಯಮ ದೃಢೀಕರಣ ಮತ್ತು ನಿರ್ವಹಣಾ ಸಮಿತಿಯನ್ನು ರಚಿಸಲಾಗಿದ್ದು, ಜಾಹೀರಾತುಗಳಿಗೆ ಸಂಬಂಧಿಸಿದಂತೆ ಮಾಧ್ಯಮ ಸಮಿತಿಯ ಗಮನಕ್ಕೆ ತಂದು ಪ್ರಕಟಿಸಬೇಕಿದೆ ಎಂದು ಜಿಲ್ಲಾಧಿಕಾರಿ ಕೋರಿದರು.ಜಾಹೀರಾತುಗಳು ವೈಯಕ್ತಿಕ, ಪ್ರಚೋದಾನ್ಮಾತಕ, ಧಾರ್ಮಿಕ ನಿಂದನೆ ಬರಹಗಳನ್ನು ಒಳಗೊಂಡಿರಬಾರದು. ಆ ನಿಟ್ಟಿನಲ್ಲಿ ಗಮನಹರಿಸಬೇಕಿದೆ ಎಂದು ಸಲಹೆ ಮಾಡಿದರು. ಮತದಾನದ ಮಹತ್ವ ಕುರಿತು ಜಾಗೃತಿ ಅಭಿಯಾನ ಆಯೋಜಿಸಲಾಗುತ್ತದೆ. ಆ ನಿಟ್ಟಿನಲ್ಲಿ ಮತದಾರರ ಪಟ್ಟಿಯಲ್ಲಿ 18 ವರ್ಷ ಪೂರ್ಣಗೊಂಡಿರುವವರು, ತಮ್ಮ ಹೆಸರು ಸೇರ್ಪಡೆಗೆ ಅವಕಾಶವಿದೆ ಎಂದು ಶ್ರೀವಿದ್ಯಾ ಹೇಳಿದರು.ರಾಜಕೀಯ ಪಕ್ಷಗಳ ಮುಖಂಡರಾದ ಸಜಿಲ್ ಕೃಷ್ಣ, ತನ್ನೇರಾ ಮೈನಾ, ಪ್ರೇಮಕುಮಾರ್ ಹಾಜರಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.