ADVERTISEMENT

ಸರ್ವೆ ನಡೆಸಲು ಆಗ್ರಹ, ಪ್ರತಿಭಟನೆ

ಸೋಮವಾರಪೇಟೆ ತಾಲ್ಲೂಕು ಕಚೇರಿ ಬಳಿ ಧರಣಿ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2018, 10:26 IST
Last Updated 20 ಮಾರ್ಚ್ 2018, 10:26 IST

ಸೋಮವಾರಪೇಟೆ: ಸೂಕ್ಷ್ಮ ಪರಿಸರ ತಾಣ ಎಂದು ಕಂದಾಯ ಇಲಾಖೆ ಎರಡು ಗ್ರಾಮಗಳಲ್ಲಿ ಸರ್ವೆ ಕಾರ್ಯ ನಡೆಸದೆ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿ ಸೋಮವಾರ ಬೆಟ್ಟದಳ್ಳಿ ಗ್ರಾ.ಪಂ ವ್ಯಾಪ್ತಿಯ ಕುಮಾರಳ್ಳಿ, ಕೊತ್ನಳ್ಳಿ ಗ್ರಾಮಸ್ಥರು ತಾಲ್ಲೂಕು ಕಚೇರಿಗೆ ಬಳಿ ಪ್ರತಿಭಟಿಸಿದರು.

ಮೂಲ ನಿವಾಸಿಗಳಾದ ನಾವು ಹಲವಾರು ವರ್ಷಗಳಿಂದ ಭೂಮಿ ಒತ್ತುವರಿ ಮಾಡಿ ಕೃಷಿ ಮಾಡುತ್ತಿದ್ದೇವೆ. ಹಕ್ಕುಪತ್ರ ಕೋರಿ ನಮೂನೆ 50 ಮತ್ತು 53ಯಲ್ಲಿ ಅರ್ಜಿ ಸಲ್ಲಿಸಿ ವರ್ಷಗಳೇ ಕಳೆದಿವೆ. ಈ ಸಂಬಂಧ ನಡೆಸುತ್ತಿದ್ದ ಸಮೀಕ್ಷೆಯನ್ನು ಏಕಾಏಕಿ ನಿಲ್ಲಿಸಲಾಗಿದೆ ಎಂದು ದೂರಿದರು.

ಕೂಡಲೇ ಸರ್ವೆ ಕಾರ್ಯ ಪುನರಾರಂಭಿಸಿ ಅಕ್ರಮ –ಸಕ್ರಮ ಸಮಿತಿಗೆ ಸಲ್ಲಿಸಬೇಕು. ತಪ್ಪಿದಲ್ಲಿ ತಾಲೂಕು ಕಚೇರಿ ಮುಂಭಾಗ ಬಳಿ ಅನಿರ್ದಿಷ್ಟ ಹೋರಾಟ ನಡೆಯಲಿದೆ ಎಂದು ಎಚ್ಚರಿಸಿದರು.

ADVERTISEMENT

‘ಸೂಕ್ಮ ಪರಿಸರ ವಲಯ ಘೋಷಣೆಯಾಗಿದ್ದು, ಈ ಗ್ರಾಮಗಳು ಸೇರ್ಪಡೆಯಾಗಿರುವ ಬಗ್ಗೆ ಖಾತರಿ ಪಡಿಸಿಕೊಳ್ಳಲು ಅಧಿಕಾರಿಗಳ ಸೂಚನೆಯಂತೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಗ್ರಾಮಸ್ಥರು ಆತಂಕ ಪಡುವ ಅಗತ್ಯವಿಲ್ಲ’ ಎಂದು ಸರ್ವೆ ಪರಿವೀಕ್ಷಕ ನಾಗರಾಜ್ ಹೇಳಿದರು.

ಈ ಉತ್ತರದಿಂದ ಆಕ್ರೋಶಗೊಂಡ ಶಾಂತಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಪಿ.ಅನಿಲ್ ಕುಮಾರ್, ಕಾಫಿ ಬೆಳೆಗಾರರ ಸಂಘದ ಉಪಾಧ್ಯಕ್ಷ ಬಸಪ್ಪ, ಕುಮಾರಳ್ಳಿ ಗ್ರಾಮ ಮಂಡಳಿ ಅಧ್ಯಕ್ಷ ಎ.ಕೆ.ಚಂಗಪ್ಪ, ಕೊತ್ನಳ್ಳಿ ಗ್ರಾಮ ಮಂಡಳಿ ಅಧ್ಯಕ್ಷ ತಮ್ಮಯ್ಯ, ಕೆ.ಇ.ಪ್ರದೀಪ್ ಅವರು ನಾಗರಾಜ್‌ ಹಾಗೂ ಶಿರಸ್ತೆದಾರ್ ಶಶಿಧರ್ ಅವರನ್ನು ತರಾಟೆಗೆ ತೆಗೆದುಕೊಂಡರು.

ಅದೇಶ ಪತ್ರ ತೋರಿಸಲು ಪಟ್ಟುಹಿಡಿದರು. ಕಂದಾಯ ಇಲಾಖೆ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಲು ಪ್ರಾರಂಭಿಸಿದರು.

ಬಳಿಕ ಸರ್ವೆ ಮುಂದುವರಿಸುವ ಭರವಸೆ ದೊರೆತ ಬಳಿಕ ಪ್ರತಿಭಟನೆ ಕೈಬಿಟ್ಟರು. ಬೆಟ್ಟದಳ್ಳಿ ಗ್ರಾ. ಪಂ ಸದಸ್ಯ ಎಸ್.ಕೆ.ಮಾಚಯ್ಯ, ಕಿರಣ್, ಸೀತಮ್ಮ, ಮಾಜಿ ಅಧ್ಯಕ್ಷೆ ವಿಮಲಾಕ್ಷಿ, ರಜನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.