ADVERTISEMENT

1 ಕೋಟಿ ಉಳಿತಾಯ ಬಜೆಟ್ ಮಂಡನೆ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2012, 8:35 IST
Last Updated 2 ಏಪ್ರಿಲ್ 2012, 8:35 IST

ವಿರಾಜಪೇಟೆ: ವಿರಾಜಪೇಟೆ ಪಟ್ಟಣ ಪಂಚಾಯಿತಿಯ 2012-13ನೇ ಸಾಲಿನ ರೂ 1,00,40,364 ಮೊತ್ತದ ಉಳಿತಾಯ ಬಜೆಟ್ ಅನ್ನು ಶನಿವಾರ ಮಂಡಿಸಲಾಯಿತು. ಪಟ್ಟಣದ 16 ವಿಭಾಗಗಳಿಗೆ ಸಮಾನ ಆದ್ಯತೆ ನೀಡಲಾಗಿದೆ. ರಸ್ತೆ, ಚರಂಡಿ, ನಗರ ನೈರ್ಮಲ್ಯ ಹಾಗೂ ಕುಡಿಯುವ ನೀರು ಪೂರೈಕೆಗೆ ಒತ್ತು ನೀಡಲಾಗಿದೆ.

ಪಟ್ಟಣ ಪಂಚಾಯಿತಿ ಅಧ್ಯಕ್ಷ ವಿ.ಕೆ. ಸತೀಶ್‌ಕುಮಾರ್ ಅವರ ಅಧ್ಯಕ್ಷತೆ ಯಲ್ಲಿ ನಡೆದ ಸಭೆಯಲ್ಲಿ ಬಜೆಟ್ ಮಂಡಿಸಿದರು. ಸದಸ್ಯರು ಅಭಿವೃದ್ಧಿ ಕಾಮಗಾರಿ, ಆಡಳಿತಾತ್ಮಕ ವಿಷಯಗಳ ಚರ್ಚೆ ನಡೆಸಿದರು. ನಂತರ ಬಜೆಟ್‌ಗೆ ಸರ್ವಾನುಮತದ ಒಪ್ಪಿಗೆ ನೀಡಿದರು.

2012-13ನೇ ವರ್ಷದಲ್ಲಿ ಕಟ್ಟಡಗಳ ಬಾಡಿಗೆಯಿಂದ ರೂ. 25 ಲಕ್ಷ, ಅಭಿವೃದ್ಧಿ ಶುಲ್ಕದಿಂದ ರೂ 5 ಲಕ್ಷ , ಪರವಾನಗಿ ಶುಲ್ಕವಾಗಿ ರೂ 9 ಲಕ್ಷ, ವಿದ್ಯುತ್ ಅನುದಾನದಿಂದ ರೂ 40 ಲಕ್ಷ, ನೀರು ಬಳಕೆದಾರರಿಂದ ರೂ 17.50 ಲಕ್ಷ, ಮಾರುಕಟ್ಟೆ ಬಾಡಿಗೆ ಯಿಂದ ರೂ.3 ಲಕ್ಷ, ಸ್ವಯಂ ಘೋಷಿತ ಆಸ್ತಿ ತೆರಿಗೆಯಿಂದ ರೂ. 45 ಲಕ್ಷ,  ಎಸ್‌ಎಫ್‌ಸಿ ಅನುದಾನದಿಂದ ರೂ. 1.74 ಲಕ್ಷ, 13ನೇ ಹಣಕಾಸುನಿಧಿಯಿಂದ ರೂ. 47 ಲಕ್ಷ, ಸಿಎಂಎಸ್, ಎಂಟಿಡಿಪಿ ನಿಧಿಯಿಂದ ರೂ. 1.96 ಕೋಟಿ, ಸರ್ಕಾರದ ವಿಶೇಷ ಅನುದಾನದಿಂದ 15 ಲಕ್ಷ, ವೇತನ

ಅನುದಾನದಿಂದ ರೂ. 85 ಲಕ್ಷ ಸೇರಿದಂತೆ ಒಟ್ಟು ರೂ. 21,74,10,000 ಆದಾಯ ನಿರೀಕ್ಷಿಸಲಾಗಿದೆ. 2013ನೇ ಸಾಲಿನಲ್ಲಿ ರೂ. 20,73,69,636 ವೆಚ್ಚದ ಅಂದಾಜು ಮಾಡಲಾಗಿದೆ. ಇದರಲ್ಲಿ ರೂ. 1,00,40,364 ಉಳಿತಾಯದ ಗುರಿ ಹೊಂದಲಾಗಿದೆ.

ಪಟ್ಟಣದ ಸುಣ್ಣದ ಬೀದಿಯ ಕಾಂಕ್ರಿಟ್ ರಸ್ತೆಯ ಕಳಪೆ ಕಾಮಗಾರಿ ಸಂಬಂಧ ಸದಸ್ಯ ಬಿ.ಎಂ. ಕುಮಾರ್, ಎಂ.ಕೆ. ಪೂವಯ್ಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಮುಖ್ಯಾ ಧಿಕಾರಿ ರಮೇಶ್ ಮಾತನಾಡಿ, ರಸ್ತೆ ಕಾಮಗಾರಿಯನ್ನು ಪರಿಶೀಲಿಸಿ ಗುಣಮಟ್ಟದ ದೃಢಿಕರಣ ಪತ್ರ ನೀಡುವ ತನಕ ಬಿಲ್ ಪಾವತಿ ಮಾಡುವುದಿಲ್ಲ. ತಜ್ಞರ ಸಲಹೆ ಪಡೆಯುವಂತೆ ಗುತ್ತಿಗೆದಾರರಿಗೆ ನೋಟೀಸ್ ಜಾರಿ ಮಾಡಿರುವುದಾಗಿ ತಿಳಿಸಿದರು.

ಪಂಚಾಯಿತಿ ಎಂಜಿನಿಯರ್ ಪುಟ್ಟು ಸ್ವಾಮಿ ಮಾತನಾಡಿ, ಸುಣ್ಣದ ಬೀದಿಯ ಕಾಂಕ್ರಿಟ್ ರಸ್ತೆಯಲ್ಲಿ ಕೇವಲ 20 ಟನ್ ಸಾಮರ್ಥ್ಯ ಸರಕು ವಾಹನ ಸಂಚರಿಸ ಬಹುದು. ಆದರೆ 40ರಿಂದ 50ಟನ್ ಭಾರದ ವಾಹನ ಸಂಚರಿಸುತ್ತಿವೆ. ಇಲ್ಲಿ ಭಾರಿ ವಾಹನ ಸಂಚಾರ ನಿಷೇಧಿಸಬೇಕು ಎಂದರು.

ಪಟ್ಟಣದ ಆಟೋ ಚಾಲಕರು ದುಬಾರಿ ದರ ವಸೂಲು ಮಾಡುವ ದೂರು ಬಂದ ಹಿನ್ನೆಲೆಯಲ್ಲಿಪೊಲೀಸ್ ವರಿಷ್ಠಾಧಿಕಾರಿ ಹಾಗೂ ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಗೆ ದೂರು ಸಲ್ಲಿಸುವುದು. ಖಾಸಗಿ ಬಸ್ ನಿಲ್ದಾಣದ ಬಳಿಯ ಆಟೋ ನಿಲ್ದಾಣದಲ್ಲಿ ಆಟೋಗಳು ಸಾಲುಗಟ್ಟಿ ನಿಂತಿದ್ದರೂ ಮಧ್ಯಾಹ್ನದ ನಂತರ ನಿಗದಿತ ಸ್ಥಳಗಳಿಗೆ ಹೋಗಲು ಚಾಲಕರು ನಿರಾಕರಿಸುತ್ತಿದ್ದಾರೆ ಎಂದು ಸದಸ್ಯರು ದೂರಿದರು.
ಸದಸ್ಯರಾದ ಬಿ.ಕೆ. ಚಂದ್ರು, ಎಸ್. ಎಚ್. ಮೈನುದ್ದೀನ್, ಮತೀನ್, ಬಿ.ಪಿ. ಸೋಮಣ್ಣ, ಜೀವನ್ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಬಿ. ಕಟ್ಟಿ ಪೂಣಚ್ಚ ಭಾಗವಹಿಸಿದ್ದರು. ಉಪಾಧ್ಯಕ್ಷೆ ಕೌಶರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.