ಕುಶಾಲನಗರ: ಕಾವೇರಿ ನೀರಾವರಿ ನಿಗಮದ ವತಿಯಿಂದ ಕಾವೇರಿ ಕಣಿವೆಯ ಪ್ರಮುಖ ನೀರಾವರಿ ಯೋಜನೆಗಳಲ್ಲಿ ಒಂದಾದ ಹಾರಂಗಿ ನೀರಾವರಿ ಯೋಜನೆಯ ಮುಖ್ಯ ಕಾಲುವೆಯನ್ನು ರೂ.12 ಕೋಟಿ ವೆಚ್ಚದಲ್ಲಿ ಆಧುನೀಕರಣಗೊಳಿಸಲಾಗುತ್ತಿದೆ.
ಹಾರಂಗಿ ನೀರಾವರಿ ಯೋಜನೆಯ ಎಡದಂತೆ ಮುಖ್ಯ ಕಾಲುವೆಯನ್ನು ಹೆಬ್ಬಾಲೆ ಬಳಿಯ 14.3 ಕಿ.ಮೀ. ನಿಂದ ಶಿರಂಗಾಲ ಗೇಟ್ನ 27.7 ಕಿ.ಮೀ. ತನಕ ಆಧುನಿಕ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ.
ಕಾಲುವೆಯ ತಳಭಾಗ ಮತ್ತು ಕಾಲುವೆಯ ಎರಡು ಬದಿಯಲ್ಲಿನ ಮಣ್ಣನ್ನು ಜೆಸಿಬಿ ಯಂತ್ರದ ಮೂಲಕ ಹೊರತೆಗೆಯಲಾಗುತ್ತಿದೆ. ಕಾಲುವೆಯ ತಳಭಾಗಕ್ಕೆ ಸೇರಿದಂತೆ ಕಾಲುವೆಯ ತಡೆಗೋಡೆಗೆ ಕಾಂಕ್ರಿಟ್ ಲೈನಿಂಗ್ ಕೈಗೊಳ್ಳಲಾಗುವುದು ಎಂದು ನೀರಾವರಿ ಇಲಾಖೆಯ ಮೂಲಗಳು ತಿಳಿಸಿವೆ.
ಮುಖ್ಯ ಕಾಲುವೆಯಲ್ಲಿ ನೀರು ಸರಾಗವಾಗಿ ಹರಿದು ಉಪ ಕಾಲುವೆಗಳ ಮೂಲಕ ರೈತರ ಜಮೀನಿಗೆ ಸಮರ್ಪಕವಾಗಿ ನೀರು ಒದಗಿಸುವ ಉದ್ದೇಶದಿಂದ ಕಾಲುವೆಯ ಕಾಮಗಾರಿಯನ್ನು ಕೈಗೊಳ್ಳಲಾಗಿದೆ. ಕಾಲುವೆಯನ್ನು ಅಭಿವೃದ್ಧಿಪಡಿಸುವುದರೊಂದಿಗೆ ನೀರು ಹರಿಸುವ ತೂಬುಗಳನ್ನು ಆಧುನೀಕರಣಗೊಳಿಸಲಾಗುವುದು ಎಂದು ತಿಳಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.