ನಾಪೋಕ್ಲು: ಕೊಡಗಿನ ಕುಲದೇವತೆ ಕಾವೇರಿ ಮಾತೆಯ ಕ್ಷೇತ್ರದ ಬಗ್ಗೆ ಪಾವಿತ್ರ್ಯತೆ ಕಾಪಾಡುವುದು ಸೇರಿ ವಿವಿಧ ನಿರ್ಣಯಗಳನ್ನು ಕೊಡವ ಸಮಾಜದ ವಾರ್ಷಿಕ ಮಹಾಸಭೆ ಕೈಗೊಂಡಿತು. ಕೊಡವ ಸಮಾಜದ ಸಭಾಂಗಣದಲ್ಲಿ ಭಾನುವಾರ ಕೊಡವ ಸಮಾಜದ ವಾರ್ಷಿಕ ಮಹಾಸಭೆಯು ಅಧ್ಯಕ್ಷ ಬಿದ್ದಾಟಂಡ ರಮೇಶ್ ಚಂಗಪ್ಪನವರ ಅಧ್ಯಕ್ಷತೆಯಲ್ಲಿ ನಡೆಯಿತು.
ತಲಕಾವೇರಿ ಕ್ಷೇತ್ರವನ್ನು ಪ್ರವಾಸೋದ್ಯಮದಿಂದ ಮುಕ್ತವಾಗಿಸಿ ಧಾರ್ಮಿಕ ಕ್ಷೇತ್ರವಾಗಿಸಬೇಕು. ಬ್ರಹ್ಮಗಿರಿ ಬೆಟ್ಟಕ್ಕೆ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ಹೇರಬೇಕು. ಪವಿತ್ರ ಕಾವೇರಿ ಕುಂಡಿಕೆಯ ಚಾವಣಿ ತೆಗೆಯಬೇಕು ಎಂಬುದು ಸಭೆಯಲ್ಲಿ ಕೈಗೊಳ್ಳಲಾದ ಇತರೆ ಪ್ರಮುಖ ನಿರ್ಣಯಗಳು.
ಕೊಡಗು ಜಿಲ್ಲೆಯಲ್ಲಿ ಇರುವ ಹೋಂಸ್ಟೇಗಳಲ್ಲಿ ಉಳಿಯುವ ಪ್ರವಾಸಿಗರಿಗೆ ಪ್ರವಾಸೋದ್ಯಮ ಕುರಿತು ತಿಳಿವಳಿಕೆ ನೀಡುವಾಗ ಕಾವೇರಿ ಕ್ಷೇತ್ರದ ಧಾರ್ಮಿಕ ಹಿನ್ನೆಲೆ ವಿವರಿಸಬೇಕು ಎಂದು ನಿರ್ಣಯಿಸಲಾಯಿತು.
ಕ್ಷೇತ್ರ ಉಳಿಸಲು ಫೆಡರೇಷನ್ ಆಫ್ ಕೊಡವ ಸಮಾಜ ಕಾಳಜಿ ವಹಿಸಿ ಕ್ಷೇತ್ರದ ಪಾವಿತ್ರ್ಯ ರಕ್ಷಣೆ ಕುರಿತ ಕಾರ್ಯಕ್ರಮಗಳ ಮುಂದಾಳತ್ವ ವಹಿಸ ಬೇಕು ಎಂದು ಅಭಿಪ್ರಾಯಪಡಲಾಯಿತು.
ಅಲ್ಲದೆ, ಈ ನಿಟ್ಟಿನಲ್ಲಿ ಕೊಡಗು ಜಿಲ್ಲಾಡಳಿತ ಅಗತ್ಯ ಕ್ರಮವನ್ನು ತೆಗೆದುಕೊಳ್ಳದೇ ಇದ್ದಲ್ಲಿ ನಾಪೋಕ್ಲು ಕೊಡವ ಸಮಾಜ ಮತ್ತು ಕಾವೇರಿ ಭಕ್ತರ ನೆರವಿನಲ್ಲಿ ಈ ಕುರಿತು ಗಮನಸೆಳೆಯಲು ನಾಪೋಕ್ಲುವಿನಿಂದ - ಭಾಗಮಂಡಲದವರೆಗೆ ಕಾಲ್ನಡಿಗೆ ಜಾಥಾ ಹಮ್ಮಿಕೊಳ್ಳಲಾಗುವುದು ಎಂದು ಮುಖಂಡರು ಎಚ್ಚರಿಸಿದರು.
ಉಪಾಧ್ಯಕ್ಷ ಮಾಳೇಯಂಡ ಅಯ್ಯಪ್ಪ, ಕಾರ್ಯದರ್ಶಿ ಮಂಡೀರ ರಾಜಪ್ಪ, ಸಹ ಕಾರ್ಯದರ್ಶಿ ಕನ್ನಂಬೀರ ಸುಧಿ ತಿಮ್ಮಯ್ಯ, ಖಜಾಂಚಿ ಅಪ್ಪಾರಂಡ ಸುಧೀರ್ ಅಯ್ಯಪ್ಪ, ನಿರ್ದೇಶಕರಾದ ಅಜ್ಜೇಟಿರ ರಾಣಿ ಶಂಭು, ಮಿಟ್ಟು ಪೂಣಚ್ಚ, ಉದಿಯಂಡ ಸುರ ನಾಣಯ್ಯ, ಕಾಟುಮಣಿಯಂಡ ಉಮೇಶ್, ಕುಂಡ್ಯೋಳಂಡ ವಿಶು ಪೂವಯ್ಯ, ಚೋಕಿರ ಸಜೀತ್, ಮುಕ್ಕಾಟೀರ ವಿನಯ್,ಮೂವೇರ ರೇಖಾ ಪ್ರಕಾಶ್, ಕುಲ್ಲೇಟಿರ ಹೇಮಾ ಅರುಣ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.