ಮಡಿಕೇರಿ: ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲ್ಲೂಕಿನ ಅರಣ್ಯ ಇಲಾಖೆಯ ಡಿಪೊಗೆ ಅಳವಡಿಸಿದ್ದ ಗೇಟಿನ ಕಂಬಿಗಳ ಮಧ್ಯೆ ತಲೆ ಸಿಲುಕಿಕೊಂಡು ಪರದಾಡುತ್ತಿದ್ದ ಕಾಡಾನೆಯೊಂದರ ನೆರವಿಗೆ ಮತ್ತೊಂದು ಆನೆ ಬಂದು ಅದನ್ನು ಬಿಡಿಸಿದೆ.
ಬೇಲಿ ದಾಟಿ 7 ಕಾಡಾನೆಗಳು ಡಿಪೊಗೆ ನುಗ್ಗಿದ್ದವು. ಅರಣ್ಯ ಇಲಾಖೆ ಸಿಬ್ಬಂದಿ ಅವುಗಳನ್ನು ಮರಳಿ ಕಾಡಿಗಟ್ಟುವ ಕಾರ್ಯಾಚರಣೆ ನಡೆಸಿದ್ದರು. ಈ ವೇಳೆ ಎಲ್ಲ ಕಾಡಾನೆಗಳು ಗೇಟನ್ನು ಸುರಕ್ಷಿತವಾಗಿ ದಾಟಿದವು. ಆದರೆ, ಕಾಡಾನೆಯೊಂದು ಆಕಸ್ಮಿಕವಾಗಿ ಗೇಟಿನ ಎರಡು ಕಂಬಿಗಳ ನಡುವೆ ತನ್ನ ತಲೆಯನ್ನು ತೂರಿಸಲು ಯತ್ನಿಸಿತು. ಈ ವೇಳೆ ಕಾಡಾನೆಯ ತಲೆ ಎರಡು ಕಂಬಿಗಳ ನಡುವೆ ಸಿಕ್ಕಿ ಹಾಕಿಕೊಂಡು ಘೀಳಿಡಲು ಆರಂಭಿಸಿತು. ಸುಮಾರು ಒಂದು ನಿಮಿಷಕ್ಕೂ ಹೆಚ್ಚು ಕಾಲ ತಲೆಯನ್ನು ಹೊರಕ್ಕೆ ಎಳೆಯಲು ಆನೆ ಇನ್ನಿಲ್ಲದ ಕಸರತ್ತು ನಡೆಸಿತು.
ಇದನ್ನು ದೂರದಿಂದಲೇ ನೋಡುತ್ತಿದ್ದ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸಲು ಯೋಜಿಸುತ್ತಿರುವಷ್ಟರಲ್ಲಿ ಮತ್ತೊಂದು ಕಾಡಾನೆ ನೆರವಿಗೆ ಬಂದು, ತನ್ನ ಸೊಂಡಿಲಿನಿಂದ ಕಾಡಾನೆ ತಲೆ ಹೊರಕ್ಕೆ ಬರುವಂತೆ ಮಾಡಿತು. ನಂತರ, ಎರಡೂ ಆನೆಗಳು ಕಾಡಿನತ್ತ ಹೆಜ್ಜೆ ಹಾಕಿದವು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.