ಸೋಮವಾರಪೇಟೆ: ‘ನಿಸ್ವಾರ್ಥ ಸಮಾಜ ಸೇವೆಯಿಂದ ಮಾತ್ರ ನಮ್ಮ ಜೀವನ ಸಾರ್ಥಕವಾಗುತ್ತದೆ’ ಎಂದು ರೋಟರಿ ಜಿಲ್ಲಾ ರಾಜ್ಯಪಾಲ ವಿಕ್ರಮ್ ದತ್ತ ಅಭಿಪ್ರಾಯಪಟ್ಟರು.
ಸ್ಥಳೀಯ ರೋಟರಿ ಭವನದಲ್ಲಿ ಈಚೆಗೆ ಗವರ್ನರ್ ಭೇಟಿ ಕಾರ್ಯಕ್ರಮದಲ್ಲಿ ಮಾತನಾಡಿ,‘ಸ್ಥಳೀಯ ರೋಟರಿ ಸಂಸ್ಥೆ ಸಾಕಷ್ಟು ವಾರ್ಷಿಕ ಸಮಾಜಮುಖಿ ಕಾರ್ಯಕ್ರಮ ಮಾಡಿಕೊಂಡು ಬರುತ್ತಿದೆ. ಈ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದೆ. ಅನೇಕ ಜನಪರ ಕಾರ್ಯ ಮಾಡುತ್ತಾ ಇತರ ಕ್ಲಬ್ಗಳಿಗೆ ಮಾದರಿಯಾಗಿದೆ. ರೋಟರಿ ಮಾಜಿ ಅಧ್ಯಕ್ಷರು ಸಂಸ್ಥೆ ಏಳಿಗೆಗಾಗಿ ಶ್ರಮಿಸಿರುವುದು ಶ್ಲಾಘನೀಯ’ ಎಂದು ಹೇಳಿದರು.
‘ತಾವು ಸಂಪಾದಿಸಿದ ಹಣದಲ್ಲಿ ಸ್ವಲ್ಪ ಭಾಗವಾದರೂ, ಅವಶ್ಯಕತೆ ಇರುವವರಿಗೆ ನೀಡಬೇಕು. ಈ ನಿಟ್ಟಿನಲ್ಲಿ ಇಲ್ಲಿನ ಅನೇಕರು ರೋಟರಿ ಫೌಂಡೇಶನ್ಗೆ ಪ್ರತಿವರ್ಷ ದೇಣಿಗೆ ನೀಡುತ್ತಿರುವುದು ಸಂತೋಷದ ವಿಷಯ’ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ರೋಟರಿ ಹಿಲ್ಸ್ ಅಧ್ಯಕ್ಷ ಜೆ.ಕೆ. ಪೊನ್ನಪ್ಪ ಮಾತನಾಡಿ, ‘ರೋಟರಿ ಸದಸ್ಯರ ಸಹಕಾರದಿಂದ ಅನೇಕ ಜನಪರ ಯೋಜನೆ ಮಾಡಿದ್ದೇವೆ. ರೋಟರಿಯಲ್ಲಿ ಕೆಲಸ ಮಾಡುವುದೇ ನಮಗೆ ಹೆಮ್ಮೆಯ ವಿಷಯವಾಗಿದ್ದು, ಸಮಾಜಸೇವೆ ಮಾಡುವುದು ರೋಟರಿ ಉತ್ತಮ ವೇದಿಕೆಯಾಗಿದೆ’ ಎಂದು ಹೇಳಿದರು.
ವೇದಿಕೆಯಲ್ಲಿ ಸಹಾಯಕ ರಾಜ್ಯಪಾಲ ಡಾ. ಹರಿ.ಎ.ಶೆಟ್ಟಿ, ವಲಯ ಸೇನಾನಿ ಎಂ.ಎಂ.ಪ್ರಕಾಶ್ ಕುಮಾರ್,ಕಾರ್ಯದರ್ಶಿ ಕೆ.ಡಿ.ಬಿದ್ದಪ್ಪ, ನಿಯೋಜಿತ ಅಧ್ಯಕ್ಷರಾದ ವೀಣಾ ಮನೋಹರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.