ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮಳೆಗಾಲದ ಅತ್ಯಧಿಕ. ಈ ಸಮಯದಲ್ಲಿ ಶವಸಂಸ್ಕಾರ ಮಾಡಬೇಕಾದರೆ ಒಣಗಿದ ಕಟ್ಟಿಗೆಗಳ ಕೊರತೆ ಬಹುವಾಗಿ ಕಾಡುತ್ತದೆ. ಇದರಿಂದ ಶವಸಂಸ್ಕಾರಕ್ಕೆ ಜನರು ಇನ್ನಿಲ್ಲದ ಪಡಿಪಾಟೀಲು ಅನುಭವಿಸುತ್ತಿದ್ದು, ಸರ್ಕಾರ ಎಲ್ಲ ತಾಲ್ಲೂಕುಗಳಲ್ಲಿಯೂ ವಿದ್ಯುತ್ ಚಿತಾಗಾರಗಳನ್ನು ನಿರ್ಮಿಸಬೇಕು ಎಂದು ಬಹುಜನ ಸಮಾಜ ಪಾರ್ಟಿ (ಬಿಎಸ್ಪಿ) ಒತ್ತಾಯಿಸಿದೆ.
ಈ ಬೇಡಿಕೆಯ ಈಡೇರಿಕೆಗೆ ಹಾಗೂ ಕೊಡಗು ಜಿಲ್ಲೆಗೆ ಮೂಲಸೌಕರ್ಯ ಕಲ್ಪಿಸಲು ಒತ್ತಾಯಿಸಿ ಬಿಎಸ್ಪಿ ಕಾರ್ಯಕರ್ತರು ಬುಧವಾರ ಪಕ್ಷದ ಜಿಲ್ಲಾ ಕಚೇರಿಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಅಣಕು ಶವಯಾತ್ರೆ ನಡೆಸಿದರು. ಜನರಲ್ ತಿಮ್ಮಯ್ಯ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ಗಮನ ಸೆಳೆದರು.
ಈ ವೇಳೆ ಮಾತನಾಡಿದ ಬಿಎಸ್ಪಿ ಜಿಲ್ಲಾಧ್ಯಕ್ಷ ಆಟ್ರಂಗಡ ದಿವಿಲ್ಕುಮಾರ್, ‘ಜಿಲ್ಲೆಯುಲ್ಲಿ ಸಾಮಾನ್ಯವಾಗಿ ಕನಿಷ್ಠ ಎಂದರೂ 3ರಿಂದ 4 ತಿಂಗಳುಗಳ ಕಾಲ ಮಳೆಗಾಲ ಇದ್ದೇ ಇರುತ್ತದೆ. ಈ ಅವಧಿಯಲ್ಲಿ ಶವ ಸಂಸ್ಕಾರಕ್ಕೆ ಅಗತ್ಯವಾಗಿ ಬೇಕಾದ ಒಣಗಿದ ಕಟ್ಟಿಗೆಗಳು ಸಿಗದೇ ಜನರು ಪರದಾಡುತ್ತಾರೆ. ಇಂತಹದ್ದೊಂದು ಸಮಸ್ಯೆಯ ಕುರಿತು ಯಾವ ಜನಪ್ರತಿನಿಧಿಯೂ ಗಮನ ಹರಿಸಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.
ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ರೇವತಿರಾಜ್ ಮಾತನಾಡಿ, ‘ಕೊಡಗು ಜಿಲ್ಲೆಗೆ ಮುಖ್ಯವಾಗಿ ಮಳೆಗಾಲದಲ್ಲಿ ವಿದ್ಯುತ್ ಚಿತಾಗಾರದ ಅವಶ್ಯಕತೆ ಇದೆ. ಸರ್ಕಾರದಿಂದ ವಿದ್ಯುತ್ ಚಿತಾಗಾರ ಮಾಡಲು ಸಾಧ್ಯವಾಗುವುದಿಲ್ಲವೆಂದು ಲಿಖಿತರೂಪದಲ್ಲಿ ನೀಡದ್ದಲ್ಲಿ ಬಿಎಸ್ಪಿ ವತಿಯಿಂದ ಹಣ ಸಂಗ್ರಹಿಸಿ ನಿರ್ಮಿಸುತ್ತೇವೆ’ ಎಂದೂ ಸವಾಲೆಸೆದರು.
ಈ ವೇಳೆ ಪ್ರತಿಭಟನಾನಿರತರು ವಿದ್ಯುತ್ ಚಿತಾಗಾರ ನಿರ್ಮಾಣ ಮಾಡುವಂತೆ ಜಿಲ್ಲಾಡಳಿತ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.
ಪಕ್ಷದ ರಾಜ್ಯ ಕಾರ್ಯದರ್ಶಿಗಳಾದ ಎಂ.ಎಂ.ರಾಜು, ಅನಂತು, ಚೇತನ್, ಮೈಸೂರು ಜಿಲ್ಲಾ ಉಸ್ತುವಾರಿ ಚಂದ್ರಶೇಖರ್, ಮಹಿಳಾ ಹೋರಾಟ ಸಮಿತಿ ರಾಜ್ಯಾಧ್ಯಕ್ಷೆ ಸರಸ್ವತಿ ಹಾಗೂ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.